ಕಾಂಗ್ರೆಸ್ ನಲ್ಲಿ ದಲಿತ ಮುಖ್ಯಮಂತ್ರಿ ವಿಚಾರ: ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದು ಹೀಗೆ...
ಬೆಂಗಳೂರು, ಜು. 25: ‘ಅರ್ಹತೆಯ ಆಧಾರದ ಮೇಲೆ ಮುಖ್ಯಮಂತ್ರಿ ಸ್ಥಾನವನ್ನು ಕೇಳುತ್ತಿದ್ದೇವೆ. ಸಮಯ ಬಂದಾಗ ಕಾಂಗ್ರೆಸ್ ಪಕ್ಷದಲ್ಲಿ ದಲಿತ ವ್ಯಕ್ತಿಯೊಬ್ಬರು ಮುಖ್ಯಮಂತ್ರಿಯೂ ಆಗಲಿದ್ದಾರೆ. ಕಾಂಗ್ರೆಸ್ನಲ್ಲಿ ದಲಿತರಿಗೆ ಸೂಕ್ತ ಸ್ಥಾನಮಾನಗಳು ಸಿಕ್ಕಿವೆ. ಈ ಕುರಿತ ಬಿಜೆಪಿ ಆರೋಪದಲ್ಲಿ ಯಾವುದೇ ಹುರುಳಿಲ್ಲ' ಎಂದು ಮಾಜಿ ಸಚಿವ ಹಾಗೂ ಚಿತ್ತಾಪುರ ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆ ನಿರಾಕರಿಸಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಉಪಮುಖ್ಯಮಂತ್ರಿ ಆಗಿದ್ದ ಗೋವಿಂದ ಕಾರಜೋಳರನ್ನು ಕೆಳಗಿಳಿಸಿದರು. ‘ಮೇಲ್ಮನೆ ಸದಸ್ಯ ನಾರಾಯಣಸ್ವಾಮಿ ತಲೆ ಮೇಲೆ ಚಡ್ಡಿ ಹೊರಿಸಿದ್ದರು. ಆ ಪ್ರತಿಭಟನೆಯನ್ನು ಬಿಜೆಪಿ ಏಕೆ ಮಾಡಲಿಲ್ಲ' ಎಂದು ಪ್ರಶ್ನಿಸಿದರು.
ಕೇಸು ಹಾಕಿದ್ದೇನೆಂಬುದು ಸುಳ್ಳು:‘ ಕ್ಷೇತ್ರದಲ್ಲಿನ ಆರೆಸೆಸ್ಸ್ ಕಾರ್ಯಕರ್ತರ ವಿರುದ್ಧ ನಾನು ಕೇಸು ಹಾಕಿಸಿದ್ದೇನೆಂಬುದು ಶುದ್ಧ ಸುಳ್ಳು.ಯಾರೋಸ್ವಯಂ ಘೋಷಿತ ಸ್ವಾಮೀಜಿ, ರಾಮಸೇನೆ ಜಿಲ್ಲಾಧ್ಯಕ್ಷ, ಮುಖ್ಯಮಂತ್ರಿಗೆ ದೂರು ನೀಡಿದ್ದಾರೆ. ನನ್ನ ವಿರುದ್ಧ ಕ್ಷೇತ್ರದಲ್ಲಿ ಏನೇನೊ ಕುತಂತ್ರ ಮಾಡಲು ಪ್ರಯತ್ನ ನಡೆಸಿದ್ದು, ಅದು ಫಲಕೊಟ್ಟಿಲ್ಲವೆಂದು ಹೀಗೆ ಸುಳ್ಳು ಆರೋಪ ಮಾಡುತ್ತಿದ್ದಾರೆ' ಎಂದು ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದರು.
‘ಬಿಜೆಪಿ ಸರಕಾರ, ಅವರದ್ದೆ ಅಧಿಕಾರಿಗಳು. ಆದರೆ, ಅನ್ನಭಾಗ್ಯ ಅಕ್ಕಿ ಕಳವು ಮಾಡಿದ ವ್ಯಕ್ತಿಗಳ ಪರವಾಗಿ ಆ ಪಕ್ಷದ ಸಚಿವರು ಸಂಸದರು ಹಾಗೂ ಮುಖಂಡರೇ ನಿಂತಿದ್ದಾರೆ. ಶ್ರೀರಾಮಸೇನೆಯ ವ್ಯಕ್ತಿಯ ಮೇಲೆ ಮೂವತ್ತು ಕೇಸುಗಳನ್ನು ಅವರೇ ಹಾಕಿದ್ದಾರೆ.ಅವರೇ ಆ ವ್ಯಕ್ತಿಯ ಪರವಾಗಿಯೂ ನಿಂತಿದ್ದಾರೆ' ಎಂದು ಅವರು ವಾಗ್ದಾಳಿ ನಡೆಸಿದರು.
ಪಕ್ಷಕ್ಕೆ ಮುಜುಗರ ಸಲ್ಲ:‘ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು' ಎಂಬ ಗಾಧೆ ಮಾತಿದೆ. ಹೀಗಾಗಿ ಏನೇ ವಿಚಾರಗಳಿದ್ದರೂ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕೆ ಹೊರತು ಸಾರ್ವಜನಿಕವಾಗಿ ಮಾತನಾಡಿ ಪಕ್ಷದಕ್ಕೆ ಮುಜುಗರ ಉಂಟು ಮಾಡುವುದು ಸರಿಯಲ್ಲ. ನಾನು ಕೆಪಿಸಿಸಿ ಅಧ್ಯಕ್ಷರು ಮತ್ತು ವಿಪಕ್ಷ ನಾಯಕರ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ' ಎಂದು ಸ್ಪಷ್ಟಪಡಿಸಿದರು.