24 ಜಿಲ್ಲೆಗಳ ವಕ್ಫ್ ಸಲಹಾ ಸಮಿತಿಗಳಿಗೆ ಅಧ್ಯಕ್ಷರ ನೇಮಕ
ಬೆಂಗಳೂರು, ಆ.2: ರಾಜ್ಯದಲ್ಲಿ 2020ರಿಂದಲೂ ನನೆಗುದಿಗೆ ಬಿದ್ದಿದ್ದ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರ ನೇಮಕಾತಿ ವಿಚಾರಕ್ಕೆ ತೆರೆ ಬಿದ್ದಿದ್ದು, ಇದೀಗ 24 ಜಿಲ್ಲಾ ವಕ್ಫ್ ಸಲಹಾ ಸಮಿತಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿ ವಕ್ಫ್ ಬೋರ್ಡ್ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ನೂತನ ವಕ್ಫ್ ಬೋರ್ಡ್ ರಚನೆಯಾಗುವ ಒಂದು ದಿನ ಮುಂಚಿತವಾಗಿ ರಾಜ್ಯ ಸರಕಾರದ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಕಾರ್ಯದರ್ಶಿಯಾಗಿದ್ದ ಇಬ್ರಾಹಿಮ್ ಅಡೂರ್ 25 ಜಿಲ್ಲೆಗಳ ವಕ್ಫ್ ಸಲಹಾ ಸಮಿತಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದರು.
2020ರ ಜ.1ರಂದು ಅಧಿಕಾರಕ್ಕೆ ಬಂದು ವಕ್ಫ್ ಬೋರ್ಡ್, ಆ ನೇಮಕಾತಿಯನ್ನು ಹಿಂಪಡೆಯಿತು. ಆನಂತರ, ವಕ್ಫ್ ಬೋರ್ಡ್ 16 ಜಿಲ್ಲೆಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿತ್ತು. ಆದರೆ, ಈ ಸಂಬಂಧ ವ್ಯಾಜ್ಯಗಳು ಉಂಟಾದರಿಂದ ಕೆಲವರು ಅಧಿಕಾರ ಸ್ವೀಕರಿಸುವ ಮುನ್ನವೆ ಅಧಿಕಾರ ಅವಧಿಯು ಮುಕ್ತಾಯವಾಯಿತು.
ಇದಾದ ನಂತರ, ಪುನಃ ಕಳೆದ ಎಪ್ರಿಲ್ ತಿಂಗಳಲ್ಲಿ 10 ಜಿಲ್ಲೆಗಳ ವಕ್ಫ್ ಸಲಹಾ ಸಮಿತಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಲಾಯಿತು. ಈ ಪಟ್ಟಿಗೆ ರಾಜ್ಯ ಸರಕಾರ ತಾತ್ಕಾಲಿಕ ತಡೆ ನೀಡಿತು. ಆನಂತರ ಸತತ ನಾಲ್ಕು ತಿಂಗಳುಗಳ ಕಾಲ ವಕ್ಫ್ ಬೋರ್ಡ್ ಅಧ್ಯಕ್ಷರು ಹಾಗೂ ಸರಕಾರದ ನಡುವೆ ಸರಣಿ ಸಭೆಗಳು ನಡೆದು, ಕೊನೆಗೂ 24 ಜಿಲ್ಲೆಗಳ ವಕ್ಫ್ ಸಲಹಾ ಸಮಿತಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ.
ಅಧ್ಯಕ್ಷರು: ಬೆಂಗಳೂರು ನಗರ ಉತ್ತರ-ಸೈಯದ್ ಅರ್ಶದ್ ಉಲ್ಲಾ, ಬೆಂಗಳೂರು ನಗರ ದಕ್ಷಿಣ-ಅಬ್ದುಲ್ ಸತ್ತಾರ್ ಬಿ.ಇ., ಬೆಂಗಳೂರು ಗ್ರಾಮಾಂತರ-ಸೈಯ್ಯದ್ ಹಫಿಝರ್ರಹ್ಮಾನ್, ಕೊಪ್ಪಳ-ಅಡ್ವೋಕೆಟ್ ಪೀರಾ ಹುಸೇನ್, ಉತ್ತರ ಕನ್ನಡ-ಮುಹಮ್ಮದ್ ಅನೀಸ್ ತಹಶೀಲ್ದಾರ್, ಉಡುಪಿ-ಸಿ.ಎಚ್.ಅಬ್ದುಲ್ ಮುತ್ತಾಲಿ, ಬಾಗಲಕೋಟೆ-ಮೆಹಬೂಬ್ ಎಲ್.ಸರ್ಕಾವಸ್, ಚಿಕ್ಕಬಳ್ಳಾಪುರ-ಮುಝಮ್ಮಿಲ್ ಪಾಷ.
ಶಿವಮೊಗ್ಗ-ಮುಹಮ್ಮದ್ ಶಫಿ ಉಲ್ಲಾ, ಕೊಡಗು-ಅಬ್ದುಲ್ ಹಕೀಮ್ ಪಿ.ಎಂ.ಸೆರ್ದು, ರಾಯಚೂರು-ಸೈಯ್ಯದ್ ಮುಖ್ತಾರ್ ಅಹ್ಮದ್, ಕಲಬುರ್ಗಿ-ಎಸ್.ಎಂ.ಹಬೀಬುದ್ದಿನ್ ಮುನಾವರ್ ಸರ್ಮಸ್, ಚಿತ್ರದುರ್ಗ-ಇಕ್ಬಾಲ್ ಹುಸೇನ್(ಎಂ.ಸಿ.ಒ.ಬಾಬು), ರಾಮನಗರ-ಶಾ ನಿಝಾಮುದ್ದೀನ್ ಮುಜಾಹಿದ್ ಫೌಜ್ದಾರ್, ದಾವಣಗೆರೆ-ಮುಹಮ್ಮದ್ ಸಿರಾಜ್, ಯಾದಗಿರಿ-ಶೇಖ್ ಝಹೀರುದ್ದೀನ್, *ದಕ್ಷಿಣ ಕನ್ನಡ-ಬಿ.ಎ.ಅಬ್ದುಲ್ ನಾಸಿರ್(ಲಕ್ಕಿಸ್ಟಾರ್)*, ತುಮಕೂರು-ಅಡ್ವೊಕೇಟ್ ಅಫ್ರೋಝ್.
ಬೀದರ್-ಮುಹಮ್ಮದ್ ಶಫಿಉದ್ದೀನ್ ಬಾಲ್ಕಿ, ಚಿಕ್ಕೋಡಿ-ಅನ್ವರ್ ದಸ್ತಗಿರ್ ದಾಡಿವಾಲೆ, ಬೆಳಗಾವಿ-ತಾಜ್ ಎ.ಶೇಕ್, ಮಂಡ್ಯ-ಝಬಿಉಲ್ಲಾಖಾನ್, ಕೋಲಾರ-ಹಿದಾಯತುಲ್ಲಾ ಶರೀಫ್ ಹಾಗೂ ಬಳ್ಳಾರಿ ಜಿಲ್ಲಾ ವಕ್ಫ್ ಸಲಹಾ ಸಮಿತಿಗೆ ಹುಮಾಯೂನ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಚಿಕ್ಕಮಗಳೂರು, ಹಾವೇರಿ ಹಾಗೂ ಹಾಸನ ಜಿಲ್ಲೆಗಳಿಗೆ ಅಧ್ಯಕ್ಷರ ನೇಮಕ ಮಾಡುವ ಪ್ರಕ್ರಿಯೆಗೆ ವಕ್ಫ್ ಬೋರ್ಡ್ನಲ್ಲಿ ಚರ್ಚೆ ನಡೆಸಲಾಗಿದ್ದು, ತಾತ್ಕಾಲಿಕ ತಡೆ ಹಿಡಿಯಲಾಗಿದೆ. ಇನ್ನುಳಿದಂತೆ ವಿಜಯನಗರ, ವಿಜಯಪುರ, ಚಾಮರಾಜನಗರ, ಗದಗ, ಧಾರವಾಡ ಜಿಲ್ಲೆಗಳಿಗೆ ನೇಮಕ ಮಾಡುವುದು ಬಾಕಿಯಿದ್ದು, ಮುಂದಿನ ಬೋರ್ಡ್ ಸಭೆಯಲ್ಲಿ ಈ ಸಂಬಂಧ ತೀರ್ಮಾನ ಹೊರ ಬೀಳುವ ಸಾಧ್ಯತೆಯಿದೆ.
ಎಲ್ಲ ಜಿಲ್ಲೆಗಳ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರಾಗಿ ವಿವಿಧ ಕ್ಷೇತ್ರಗಳ ಸುಮಾರು 500 ಜನರನ್ನು ನೇಮಕ ಮಾಡಲಾಗಿದೆ. ಸಮಿತಿಯ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಶೀಘ್ರವೆ ಬೆಂಗಳೂರಿನಲ್ಲಿ ಮೂರು ದಿನಗಳ ಶಿಬಿರ ಏರ್ಪಡಿಸಿ, ತಜ್ಞರ ಮೂಲಕ ಅವರಿಗೆ ವಕ್ಫ್ ಕಾಯ್ದೆ, ನಿಯಮಗಳು, ಶರೀಅತ್ ಸೇರಿದಂತೆ ನ್ಯಾಯಾಲಯದಲ್ಲಿರುವ ಪ್ರಕರಣಗಳು, ಕಾನೂನಾತ್ಮಕ ವಿಚಾರಗಳ ಬಗ್ಗೆ ತರಬೇತಿ ನೀಡಲಾಗುವುದು.
-ಮೌಲಾನ ಎನ್.ಕೆ.ಮುಹಮ್ಮದ್ ಶಾಫಿ ಸಅದಿ, ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ