ಕೊಡಗಿನಲ್ಲಿ ನಿಲ್ಲದ ಮಳೆ: ಹಲವು ರಸ್ತೆಗಳು ಜಲಾವೃತ
ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಮಳೆ ತೀವ್ರತೆಯನ್ನು ಪಡೆದುಕೊಂಡಿದೆ. ಬಿಡುವು ನೀಡದ ಮಳೆಯಿಂದ ಹಲವು ರಸ್ತೆಗಳು ಜಲಾವೃತಗೊಂಡಿದ್ದು, ಭಾಗಮಂಡಲದ ತ್ರಿವೇಣಿ ಸಂಗಮ ಉಕ್ಕಿ ಹರಿಯುತ್ತಿದೆ. ಇಲ್ಲಿನ ಶ್ರೀ ಭಗಂಡೇಶ್ವರ ದೇವಾಲಯದ ಆವರಣಕ್ಕೆ ಪ್ರವಾಹದ ನೀರು ಬಂದಿದೆ.
ಮಳೆ ಮತ್ತಷ್ಟು ಹೆಚ್ಚಾದರೆ ಪ್ರವಾಹದಿಂದ ಭಾಗಮಂಡಲ- ಮಡಿಕೇರಿ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆಗಳಿಗೆ. ತಲಕಾವೇರಿ ಹಾಗೂ ಭಾಗಮಂಡಲ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗುತ್ತಿದೆ.
ನಿರಂತರ ಮಳೆಯಾಗುತ್ತಿರುವ ಗಡಿಭಾಗ ಕರಿಕೆ ಗ್ರಾ.ಪಂ ವ್ಯಾಪ್ತಿಯಲ್ಲಿ ಮರಗಳು ಧರೆಗುರುಳಿದ್ದು, ಗುಡ್ಡ ಕುಸಿದಿದೆ. ಮಳೆಹಾನಿ ಪ್ರದೇಶಗಳ ಪರಿಶೀಲನೆಗೆಂದು ತೆರಳಿದ್ದ ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಅವರು ಮರ ಮತ್ತು ಗುಡ್ಡದ ಮಣ್ಣು ತೆರವುಗೊಳಿಸುವವರೆಗೆ ಸುಮಾರು ಒಂದೂವರೆ ಗಂಟೆ ಕಾಲ ರಸ್ತೆಯಲ್ಲೇ ಉಳಿಯಬೇಕಾಯಿತು.
ದಕ್ಷಿಣ ಕೊಡಗು ಪೊನ್ನಂಪೇಟೆ ತಾಲ್ಲೂಕಿನ ಬಿರುನಾಣಿ ವ್ಯಾಪ್ತಿಯಲ್ಲಿ ಕಳೆದ 5 ದಿನಗಳಿಂದ ಧಾರಾಕಾರವಾಗಿ ಮಳೆಯಾಗುತ್ತಿದೆ. ಗ್ರಾಮದ ಬೆಳೆಗಾರ ಚೊಟ್ಟಂಗಡ ಬೋಸ್ ಅವರ ಮನೆಯ ಸಮೀಪ ಕಾಫಿ ತೋಟದಲ್ಲಿ ಜಲಸ್ಫೋಟ ಉಂಟಾಗಿದೆ.
ಕಲ್ಲು ಸಹಿತ ಕೆಸರು ಮಿಶ್ರಿತ ನೀರಿನ ರಭಸದಿಂದ ಕಾಫಿ ತೋಟ ಸಂಪೂರ್ಣ ನಾಶವಾಗಿದೆ. ತೋಟದ ಹಲವೆಡೆ ಬಿರುಕು ಕಾಣಿಸಿಕೊಂಡಿದ್ದು, ಆತಂಕ ಸೃಷ್ಟಿಸಿದೆ.
ಮಡಿಕೇರಿ ತಾಲ್ಲೂಕಿನ ಕಣರ್ಂಗೇರಿ ಗ್ರಾಮದ ಎಂ.ಮೊಯ್ದು ಎಂಬವರ ಮನೆಗೆ ಮಣ್ಣು ಕುಸಿದು ಹಾನಿಯಾಗಿದೆ. ರಾಜು ಅವರ ಮನೆಯ ಗೋಡೆ ಕುಸಿದಿದೆ. ಕಾಂತೂರು- ಮೂರ್ನಾಡು ಗ್ರಾ.ಪಂ ವ್ಯಾಪ್ತಿಯ ಎಂ.ಬಾಡಗ ಗ್ರಾಮದ ಗಾಯತ್ರಿ ಎಂಬುವವರ ಮನೆಯ ಗೋಡೆ ಬಿರುಕು ಬಿಟ್ಟು ಬೀಳುವ ಹಂತದಲ್ಲಿದೆ.
ಭಾಗಮಂಡಲ ಗ್ರಾಮದ ಶಾರದಾ ಎಂಬುವವರ ಮನೆಯು ಕುಸಿದಿದ್ದು ವಾಸಿಸಲು ಯೋಗ್ಯವಿಲ್ಲದಾಗಿದೆ. ಗ್ರಾ.ಪಂ ಉಪಾಧ್ಯಕ್ಷ ಹೊಸೂರು ಸತೀಶ್ ಕುಮಾರ್, ಪಂಚಾಯತ್ ಸದಸ್ಯ ನಾಗೇಶ್ ಹಾಗೂ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಕುಟುಂಬವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು.
ಚೆಟ್ಟಳ್ಳಿ -ಮಡಿಕೇರಿ ಮುಖ್ಯ ರಸ್ತೆಯ ದೊಡ್ಡ ಅಬ್ಯಾಲದ ರಸ್ತೆಗೆ ಬರೆಕುಸಿದ ಪರಿಣಾಮ ಸಂಚಾರ ಅಸ್ತವ್ಯಸ್ತಗೊಂಡಿದೆ. ನಾಪೋಕ್ಲು- ಬೆಟ್ಟಗೇರಿ ಸಂಪರ್ಕಿಸುವ ಕೊಟ್ಟಮುಡಿಯಲ್ಲಿ ರಸ್ತೆ ಕುಸಿದು ಅಪಾಯದಂಚಿನಲ್ಲಿದೆ. ನಾಪೋಕ್ಲು- ಮೂರ್ನಾಡು ಸಂಪರ್ಕ ಕಲ್ಪಿಸುವ ರಸ್ತೆಯ ಬೊಳಿಬಾಣೆ ಹಾಗೂ ಚೇರಿಯಪರಂಬು- ಕಲ್ಲು ಮೊಟ್ಟೆ ಎಂಬಲ್ಲಿ ನದಿ ನೀರು ರಸ್ತೆಯನ್ನು ಆವರಿಸಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ನೀರಿನ ಮಟ್ಟ ಏರುತ್ತಲೇ ಇರುವುದರಿಂದ ಅಪಾಯದಂಚಿನಲ್ಲಿದ್ದ ಕುಟುಂಬಗಳು ತೆಪ್ಪವನ್ನು ಬಳಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಂಡವು.
ಸಂಪಾಜೆ ಗ್ರಾಮದ ಪಯಸ್ವಿನಿ ನದಿಯ ಸಮೀಪ ಇರುವ ತೋಟಗಳಿಗೆ ಪ್ರವಾಹದ ನೀರು ನುಗ್ಗಿ ಹಾನಿಯಾಗಿದೆ. ತೋಟಗಾರಿಕೆ ಇಲಾಖೆಯ ಅಧಿಕಾರಿ ಸುಹಾನ ಅವರು ಸ್ಥಳಕ್ಕೆ ಭೇಟಿ ನೀಡಿ ಪೇರಡ್ಕ, ದರ್ಕಾಸ್, ಗೂನಡ್ಕ, ಕೊಪ್ಪತಕಜೆ, ಪೆಲ್ತಡ್ಕದ ಕೃಷಿಕರ ಸಮಸ್ಯೆಯನ್ನು ಆಲಿಸಿದರು.
ಮನೆಹಾನಿಗೀಡಾದ ಕಡಮಕಲ್ಲು ನಿವಾಸಿ ಲೀಲಾವತಿ ಹಾಗೂ ಕರ್ಣಂಗೇರಿ ಗ್ರಾಮದ ಎಂ.ಮೊಯ್ದು ಅವರಿಗೆ ಪರಿಹಾರವಾಗಿ ತಲಾ 50 ಸಾವಿರ ರೂ.ಗಳ ಚೆಕ್ ಮತ್ತು ಮನೆ ಸಾಮಾಗ್ರಿ ಹಾನಿಗೊಳಗಾದ ಮಕ್ಕಂದೂರು ಗ್ರಾಮದ ಸೀತಮ್ಮ ಅವರಿಗೆ 10 ಸಾವಿರ ರೂ. ಚೆಕ್ ನ್ನು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ವಿತರಿಸಿದರು.
ಶಾಸಕರು ಮಾದಾಪುರದ ಕುಂಬಾರ ಬಾಣೆ ಹಾಗೂ ಹೊಸ ಬಡಾವಣೆಯ ಸುತ್ತಮುತ್ತಲಿನ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಕೊಡಗಿನಲ್ಲಿ ಮಳೆ ಮುಂದುವರೆದಿದ್ದು, ಜು.8 ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ.