ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯಲ್ಲಿ ಅವ್ಯವಹಾರ: ಸಿಸಿಬಿಯಿಂದ ಕೋರ್ಟ್ಗೆ ಜಾರ್ಜ್ಶೀಟ್ ಸಲ್ಲಿಕೆ
ಬೆಂಗಳೂರು, ಆ.8: ಸಹಾಯಕ ಪ್ರಾಧ್ಯಾಪಕರ ಭೂಗೋಳಶಾಸ್ತ್ರ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಕೋರ್ಟ್ಗೆ ಸಿಸಿಬಿ ಅಧಿಕಾರಿಗಳು ಜಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ.
ಭೂಗೋಳಶಾಸ್ತ್ರ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಪ್ರಮುಖ ಆರೋಪಿ ಸೌಮ್ಯ, ಡಾ.ನಾಗರಾಜ್ ಸೇರಿ ನಾಲ್ವರ ವಿರುದ್ಧ ಜಾರ್ಜ್ಶೀಟ್ ಸಲ್ಲಿಕೆಯಾಗಿದೆ. ಆರೋಪಿ ಸೌಮ್ಯ ಅವರು ಪ್ರಾಧ್ಯಾಪಕ ಡಾ.ನಾಗರಾಜ್ ಬಳಿ ಪಿಎಚ್ಡಿ ವಿದ್ಯಾರ್ಥಿಯಾಗಿದ್ದರು.
ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ತಯಾರಿಸಲಾಗಿದ್ದ ಪ್ರಶ್ನೆ ಪತ್ರಿಕೆಯ ಬಂಡಲ್ಗಳನ್ನು ಡಾ.ನಾಗರಾಜ್ ತಮ್ಮ ಮನೆಯಲ್ಲಿ ಇರಿಸಿದ್ದರು.
ಇದನ್ನು ಗಮನಿಸಿದ್ದ ಸೌಮ್ಯ ಮನೆಯಲ್ಲಿದ್ದ ಪ್ರಶ್ನೆ ಪತ್ರಿಕೆಗಳ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ತಾವು ಓದಿಕೊಂಡಿದ್ದಲ್ಲದೇ ಸ್ನೇಹಿತೆಯರಿಗೆ ರವಾನಿಸಿದ್ದರು. ಬಳಿಕ ಸೌಮ್ಯ ಗೆಳತಿ ತಮ್ಮ ಗೆಳೆಯನಿಗೆ ಕಳುಹಿಸಿದ್ದು, ಆತ ಆ ಪ್ರಶ್ನೆಪತ್ರಿಕೆ ಕಡೆ ಗಮನ ಕೊಟ್ಟಿರಲಿಲ್ಲ. ಪರೀಕ್ಷೆಯ ನಂತರ ಆತ ಪರಿಶೀಲಿಸಿದಾಗ ಸ್ನೇಹಿತೆ ಕಳುಹಿಸಿದ್ದ ಪತ್ರಿಕೆಯಲ್ಲಿನ 17 ಪ್ರಶ್ನೆಗಳು ಪರೀಕ್ಷೆಯಲ್ಲಿ ಬಂದಿದ್ದವು. ಆಗ ಅಸಮಾಧಾನಗೊಂಡ ಆ ವ್ಯಕ್ತಿ, ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ತಕರಾರು ಎತ್ತಿದ್ದನಂತೆ.
ಆ ಬಳಿಕ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಬಗ್ಗೆ ಮಾಹಿತಿ ಬಹಿರಂಗವಾಗಿತ್ತು. ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಕೆ ಬಳಿಕ ಆರೋಪಿ ಡಾ.ನಾಗರಾಜ್ ಅವರನ್ನು ಸಿಸಿಬಿ ಮತ್ತೆ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದೆ.