ಭವ್ಯ ಭಾರತ ಕಟ್ಟಲು ಯುವಜನತೆ ಸನ್ನದ್ಧರಾಗಬೇಕು: ಮುಖ್ಯಮಂತ್ರಿ ಬೊಮ್ಮಾಯಿ
ಬೆಂಗಳೂರು, ಆ. 13: ‘ಭವ್ಯ ಭಾರತ ನಿರ್ಮಾಣಕ್ಕೆ ಯುವಜನತೆ ಸನ್ನದ್ಧರಾಗಬೇಕು. ದೇಶ ಮೊದಲು, ದೇಶದ ನಂತರ ನಾವೆಲ್ಲರೂ ಎಂಬುದನ್ನು ಪ್ರತಿಪಾದಿಸಬೇಕು. ಸಂಕುಚಿತ, ಸ್ವಾರ್ಥ ಮನೋಭಾವನೆಯನ್ನು ತೊರೆದು, ದೇಶಕ್ಕಾಗಿ ನಿಲ್ಲುವ ಕರ್ತವ್ಯ ನಮ್ಮೆಲ್ಲರದ್ದಾಗಿದೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದಿಲ್ಲಿ ಯುವಜನತೆಗೆ ಕರೆ ನೀಡಿದ್ದಾರೆ.
ಶನಿವಾರ ವಿಧಾನಸೌಧದ ಮುಂಭಾಗದಲ್ಲಿನ ವೈಭವೋಪೇತ ಮೆಟ್ಟಿಲುಗಳ ಮೇಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ‘ಸ್ವಾತಂತ್ರ್ಯ ಅಮೃತ ಮಹೋತ್ಸವ' ಅಂಗವಾಗಿ ಆಯೋಜಿಸಿದ್ದ ‘ಹರ್ ಘರ್ ತಿರಂಗಾ ಅಭಿಯಾನ'ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಸ್ವಾತಂತ್ರ್ಯ ಪೂರ್ವದಲ್ಲಿ ಜನರು ದೇಶಕ್ಕಾಗಿ ಪ್ರಾಣ ಕೊಡುತ್ತಿದ್ದರು. ಈಗ ದೇಶಕ್ಕಾಗಿ ಬದುಕಿ, ದುಡಿಯಬೇಕು' ಎಂದು ಸಲಹೆ ಮಾಡಿದರು.
‘ಭವ್ಯ ಭಾರತದ ನಿರ್ಮಾಣದಲ್ಲಿ ಯುವಕರು ತಮ್ಮ ದುಡಿಮೆಯ ಮೂಲಕ ಪಾಲನ್ನು ನೀಡಬೇಕು. ಇನ್ನು ಮುಂದಿನ 25 ವರ್ಷಗಳ ಕಾಲ ದೇಶಕ್ಕಾಗಿ ನಾನೇನು ಮಾಡಿದ್ದೇನೆ ಎಂಬುದಕ್ಕೆ ಉತ್ತರ ಕಂಡುಕೊಳ್ಳಬೇಕಾಗಿದೆ. ಯುವಕರೆಂದರೆ ಶಕ್ತಿ, ಯುವಕರೆಂದರೆ ಭವಿಷ್ಯ. ನಮ್ಮ ನಾಡಿಗೆ ನವಕರ್ನಾಟಕದಿಂದ ನವಭಾರತ ನಿರ್ಮಾಣ ಮಾಡಬೇಕಿದೆ. ಪ್ರಧಾನಿ ಮೋದಿ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಸಂಕಲ್ಪ ಮಾಡಿದ್ದು, ಅದಕ್ಕೆ ಕರ್ನಾಟಕದಿಂದ 1 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಕೊಡುಗೆಯನ್ನು ನೀಡುವ ಗುರಿ ಇದೆ' ಎಂದು ಅವರು ಹೇಳಿದರು.
‘ಯುವಕರು ಭಾರತದ ಮುಂದಿನ ಭವಿಷ್ಯವನ್ನು ನಿರ್ಮಿಸುವ ಭಾಗ್ಯಶಾಲಿಗಳು. 75 ವರ್ಷ ವ್ಯಕ್ತಿಗಾದರೆ ದೊಡ್ಡ ವಯಸ್ಸು. ಅದೇ ದೇಶಕ್ಕಾದರೆ ನವ ತರುಣನ ವಯಸ್ಸು. ಯುವಕರಿಗೆ ಸೇರಿರುವ ಯುವ ದೇಶ ಭವ್ಯ ಭವಿಷ್ಯವಿರುವ ದೇಶ ನಮ್ಮದು. ಶೇ.46ರಷ್ಟು ಯುವಶಕ್ತಿ ಇರುವ ದೇಶ ಭಾರತ. ಸರಕಾರದ ವತಿಯಿಂದ 1.8 ಕೋಟಿ ಧ್ವಜಗಳನ್ನು ನೀಡಿದ್ದೇವೆ. ಜನ ಸ್ವಪ್ರೇರಣೆಯಿಂದ ಧ್ವಜ ಖರೀದಿಸಿದ್ದಾರೆ. 25ಲಕ್ಷ ಮನೆಗಳ ಮೇಲೆ ಧ್ವಜ ಹಾರಾಡುತ್ತಿವೆ. ಪ್ರತಿ ಗ್ರಾಮ, ಮನೆಯಲ್ಲಿ ಧ್ವಜ ಹಾರಾಡುತ್ತಿದೆ. ತ್ರಿವರ್ಣದ ಶಕ್ತಿ ಎಲ್ಲರನ್ನು ಒಗ್ಗೂಡಿಸುವ ಶಕ್ತಿ ಭಾರತದ ಶಕ್ತಿ ಇಡೀ ವಿಶ್ವವೇ ಗಮನಿಸುತ್ತಿದೆ' ಎಂದು ಅವರು ನುಡಿದರು.
‘ಸ್ವಾತಂತ್ರ್ಯ ಸುಲಭವಾಗಿ ಬಂದಿಲ್ಲ. ಹಲವರ ಹೋರಾಟ, ತ್ಯಾಗ, ಬಲಿದಾನದಿಂದ ಬಂದಿವೆ. ಮೊಟ್ಟ ಮೊದಲು ಸ್ವಾತಂತ್ರ್ಯ ಹೋರಾಟದ ಕಹಳೆಯನ್ನು ಮೊಳಗಿಸಿದ್ದು ಕನ್ನಡ ನಾಡಿನ ಹೆಮ್ಮೆಯ ರಾಣಿ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ. ಸ್ವಾತಂತ್ರ್ಯಕ್ಕಾಗಿ ಪ್ರಾಣ ಕೊಟ್ಟವರು ರಾಜ್ಯದಲ್ಲಿ ಇದ್ದಾರೆ. ಮೈಲಾರ ಮಹಾದೇವಪ್ಪ ಬ್ರಿಟಿಷರ ಗುಂಡಿಗೆ ಬಲಿಯಾದರು. ಸಾಹುಕಾರ ಚೆನ್ನಯ್ಯ, ಇವರನ್ನು ನೆನಪಿಡಬೇಕು. ಇತಿಹಾಸದಲ್ಲಿದ್ದವರು ಭಾರತದ ಭವಿಷ್ಯ ಬರೆದಿದ್ದಾರೆ' ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
‘ಪ್ರಧಾನಿ ಮೋದಿ ದೇಶವನ್ನು ದಕ್ಷತೆಯಿಂದ ನಡೆಸುತ್ತಿದ್ದಾರೆ. ಅವರು ಸಶಕ್ತ, ಸಂಪದ್ಭರಿತ ಭಾರತ ಕಟ್ಟಲು ಶ್ರಮಿಸುತ್ತಿದ್ದಾರೆ. ಆತ್ಮನಿರ್ಭರ ಭಾರತ ಎಂದು ಕರೆ ಕೊಟ್ಟಿದ್ದಾರೆ. ರೈತರು, ವಿದ್ಯಾರ್ಥಿಗಳು, ಬಡವರು, ಮಹಿಳೆಯರ ಕಲ್ಯಾಣಕ್ಕಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ಪ್ರಯಾಸ್’ ಎಂಬುದು ಅವರ ಪ್ರಧಾನಿ ಮೂಲಮಂತ್ರ. ಸ್ವಾತಂತ್ರ್ಯೋತ್ಸವ 75 ವರ್ಷಗಳ ಮುಂದಿನ 25 ವರ್ಷದ ಅಮೃತಕಾಲದಲ್ಲಿ ವಿಶ್ವದಲ್ಲಿ ಭಾರತವನ್ನು ಶ್ರೇಷ್ಠವಾಗಿಸುವ ಜವಾಬ್ದಾರಿ ನಮ್ಮೆಲ್ಲ ಯುವಕರ ಮೇಲಿದೆ. ಇದು ನಮ್ಮ ಬದ್ಧತೆ ಮತ್ತು ಸಂಕಲ್ಪ. ಸಮಬಾಳಿನ, ಸಮಪಾಲಿನ ಭಾರತ ನಿರ್ಮಾಣದ ಸಂಕಲ್ಪ ಮಾಡಬೇಕು' ಎಂದು ಅವರು ಕರೆ ನೀಡಿದರು.
ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಪರಿಷತ್ ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ, ಆರೋಗ್ಯ ಸಚಿವ ಡಾ.ಸುಧಾಕರ್, ಅಬಕಾರಿ ಸಚಿವ ಕೆ.ಗೋಪಾಲಯ್ಯ, ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜು, ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್, ರಾಜ್ಯ ಸರಕಾರದ ಮುಖ್ಯ ಕಾರ್ಯದಶಿ ವಂದಿತಾ ಶರ್ಮಾ, ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.