VIDEO- ವಿಧಾನಸೌಧದ ಗಾಂಧಿ ಪ್ರತಿಮೆಗೆ ಹೂಹಾರ ಯಾಕೆ ಹಾಕಿಲ್ಲ?: ಸಿಎಂ ಬೊಮ್ಮಾಯಿಗೆ ಶಾಲಾ ಬಾಲಕಿಯ ಪ್ರಶ್ನೆ
ಬೆಂಗಳೂರು, ಆ.15: ದೇಶದ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ರಾಜ್ಯ ಸರಕಾರವು ರಾಷ್ಟ್ರಪಿತ ಮಹಾತ್ಮ ಗಾಂಧಿಗೆ ಅಗೌರವ ತೋರಿದ ಘಟನೆ ಜರುಗಿದೆ. ವಿಧಾನಸೌಧ ಹಾಗೂ ವಿಕಾಸಸೌಧದ ನಡುವೆ ಇರುವ ಮಹಾತ್ಮ ಗಾಂಧಿಯ ಪ್ರತಿಮೆಗೆ ಮಾಲಾರ್ಪಣೆ ಆಗಲಿ, ಪುಷ್ಪಾರ್ಚನೆಯಾಗಲಿ ಮಾಡದೆ ಇರುವ ಸರಕಾರದ ನಡೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯನ್ನು ಪ್ರಶ್ನಿಸಿ, ಶಾಲಾ ವಿದ್ಯಾರ್ಥಿನಿಯೊಬ್ಬರು ಮಾತನಾಡಿರುವ 24 ಸೆಕೆಂಡ್ಗಳ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೀಡಿಯೊದಲ್ಲಿ ಏನಿದೆ?: ‘ನಮಸ್ತೆ ಮಾನ್ಯ ಮುಖ್ಯಮಂತ್ರಿಗಳೇ, ಇವತ್ತು ಸ್ವಾತಂತ್ರ್ಯ ದಿನಾಚರಣೆ, ನೀವು ಕರ್ನಾಟಕದ ರಾಜ ಆಗಿ ವಿಧಾನಸೌಧದ ಪಕ್ಕದಲ್ಲಿರುವ ಗಾಂಧೀಜಿಯ ಪ್ರತಿಮೆಗೆ ಯಾಕೆ ಹೂವಿನ ಹಾರ ಹಾಕಿಲ್ಲ. ಯಾಕೆ ಈ ಪ್ರತಿಮೆಯನ್ನು ನೀವು ಮರೆತು ಬಿಟ್ರಾ? ಈ ಬಗ್ಗೆ ನಾನು ನನ್ನ ತಂದೆಯವರ ಬಳಿ ಕೇಳಿದೆ, ಅವರು ಉತ್ತರ ಕೊಟ್ಟಿಲ್ಲ. ಈಗ ನೀವು ಇದಕ್ಕೆ ಉತ್ತರ ಕೊಡಲೇಬೇಕು’ ಎಂದು ಶಾಲಾ ವಿದ್ಯಾರ್ಥಿನಿಯೊಬ್ಬರು ಆಗ್ರಹಿಸಿದ್ದಾರೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ರಾಜ್ಯ ಸರಕಾರವು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದ ಜಾಹೀರಾತಿನಲ್ಲಿ ದೇಶದ ಪ್ರಥಮ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರು ಅವರ ಭಾವಚಿತ್ರ ಕೈ ಬಿಟ್ಟಿದ್ದು, ವಿಪಕ್ಷಗಳು ಹಾಗೂ ಸಾರ್ವಜನಿಕರ ಟೀಕೆಗೆ ಗುರಿಯಾಗಿತ್ತು. ಇದೀಗ, ಮಹಾತ್ಮ ಗಾಂಧಿಯನ್ನು ನಿರ್ಲಕ್ಷಿಸಿರುವ ಘಟನೆ ನಡೆದಿದೆ.