PSI ನೇಮಕಾತಿ ಹಗರಣ: ಅಮೃತ್ ಪೌಲ್ ಜಾಮೀನು ಅರ್ಜಿ ವಜಾ
(ಅಮೃತ್ ಪೌಲ್)
ಬೆಂಗಳೂರು, ಆ.16: ಪಿಎಸ್ಸೈ ನೇಮಕಾತಿ ಹಗರಣದಲ್ಲಿ ಬಂಧನಕ್ಕೊಳಗಾಗಿರುವ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರು ನಗರ ಮತ್ತು ಸತ್ರ ನ್ಯಾಯಾಲಯವು ವಜಾಗೊಳಿಸಿ ಆದೇಶಿಸಿದೆ.
ಅಮೃತ್ ಪೌಲ್ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ಯಶವಂತಕುಮಾರ್ ಅವರಿದ್ದ ನ್ಯಾಯಪೀಠ, ಜಾಮೀನು ಮನವಿಯನ್ನು ತಿರಸ್ಕರಿಸಿದೆ.
ಪಿಎಸ್ಸೈ ಹಗರಣದಲ್ಲಿ ಪೌಲ್ ಅವರು ಆರೋಪಿಯಾಗಿದ್ದಾರೆ. ಅವರು ಪ್ರಭಾವ ಬೀರುವಂತ ಸ್ಥಾನದಲ್ಲಿದ್ದಾರೆ. ಜತೆಗೆ ಆರೋಪ ಪಟ್ಟಿಯನ್ನೂ ಸಲ್ಲಿಸಬೇಕಿದೆ ಎಂಬ ಆಧಾರಗಳನ್ನು ನೀಡಿ ನ್ಯಾಯಪೀಠವು ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.
ಪ್ರಕರಣವೇನು: 2021ರ ಅ.3ರಂದು ಬೆಂಗಳೂರು ಸೇರಿ ರಾಜ್ಯದ 7 ಜಿಲ್ಲೆಗಳ 93 ಪರೀಕ್ಷಾ ಕೇಂದ್ರಗಳಲ್ಲಿ 545 ಅಭ್ಯರ್ಥಿಗಳು ಪಿಎಸ್ಸೈ ನೇಮಕಾತಿ ಪರೀಕ್ಷೆ ಬರೆದಿದ್ದರು. ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದ್ದವು. ಇದರಲ್ಲಿ ಪೊಲೀಸ್ ಅಧಿಕಾರಿಗಳು ಸೇರಿ ಪ್ರಭಾವಿಗಳು ಭಾಗಿಯಾಗಿರುವ ದೂರುಗಳು ಕೇಳಿ ಬಂದಿದ್ದವು. ಈ ಸಂಬಂಧ ಸಿಐಡಿ ತನಿಖೆ ನಡೆಸುತ್ತಿದ್ದು, 40ಕ್ಕೂ ಅಧಿಕ ಮಂದಿಯನ್ನು ಬಂಧಿಸಿದೆ.