ವಾರ್ಡ್ ಮರು ವಿಂಗಡಣೆ | ಆಯೋಗವನ್ನು ಬೆಂಬಲಿಸದಿರುವುದು ದುರಂತ: ಹೈಕೋರ್ಟ್
ಬೆಂಗಳೂರು, ಆ.16: ಬಿಬಿಎಂಪಿ ಚುನಾವಣೆ ನಡೆಸುವ ವಿಚಾರದಲ್ಲಿ ರಾಜ್ಯ ಸರಕಾರವು ನಿಮಗೆ(ರಾಜ್ಯ ಚುನಾವಣಾ ಆಯೋಗ) ಬೆಂಬಲ ನೀಡದೇ ಸುಮ್ಮನಿರುವುದು ದುರಂತ ಎಂದು ಹೈಕೋರ್ಟ್ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದೆ.
ಚಾಮರಾಜಪೇಟೆ ಕ್ಷೇತ್ರ ವ್ಯಾಪ್ತಿಯ ಪಾಲಿಕೆ ವಾರ್ಡ್ ಗಳ ಮರು ವಿಂಗಡಣೆಯಲ್ಲಿ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿ ವಕೀಲ ಎಸ್.ಇಸ್ಮಾಯಿಲ್ ಜಬಿವುಲ್ಲಾ ಹಾಗೂ ಇತರೆ ವಿಧಾನಸಭಾ ಕ್ಷೇತ್ರ ವಾರ್ಡ್ ಗಳ ಪರ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನ್ಯಾ.ಹೇಮಂತ್ ಚಂದನಗೌಡರ್ ಅವರಿದ್ದ ನ್ಯಾಯಪೀಠದಲ್ಲಿ ನಡೆಯಿತು.
ರಾಜ್ಯ ಚುನಾವಣೆ ಆಯೋಗದ ಪರ ವಾದಿಸಿದ ಹಿರಿಯ ವಕೀಲ ಕೆ.ಎನ್.ಫಣೀಂದ್ರ ಅವರು, ಬಿಬಿಎಂಪಿ ವಾರ್ಡ್ಗಳ ಮೀಸಲಾತಿ ಪಟ್ಟಿ ಪ್ರಕಟಿಸದಂತೆ ಉಚ್ಛ ನ್ಯಾಯಾಲಯವು ತಡೆಯಾಜ್ಞೆ ನೀಡಲು ಮುಂದಾದರೆ, ಅದು ಸರ್ವೋಚ್ಛ ನ್ಯಾಯಾಲಯದ ಆದೇಶದ ಉಲ್ಲಂಘನೆ ಆಗುತ್ತದೆ ಎಂದು ಪೀಠಕ್ಕೆ ತಿಳಿಸಿದರು.
ಪಾಲಿಕೆಯ ಚುನಾವಣೆ 2021ರಲ್ಲಿಯೇ ನಡೆಸಬೇಕಿತ್ತು. ಸಂವಿಧಾನದ ಪ್ರಕಾರ ಚುನಾವಣೆ ಆಯೋಗವು ಪ್ರಸ್ತುತ ಚುನಾವಣೆ ನಡೆಸಬೇಕಿದೆ ಎಂದು ಪೀಠಕ್ಕೆ ತಿಳಿಸಿದರು.