ಚಿಕ್ಕಬಳ್ಳಾಪುರ: ಮಕ್ಕಳಿಂದಲೇ ನಿರ್ಲಕ್ಷ್ಯಕ್ಕೊಳಗಾದ ವೃದ್ಧ ದಂಪತಿಯ ನೆರವಿಗೆ ನಿಂತ ಉಪವಿಭಾಗಾಧಿಕಾರಿ
ಖುದ್ದು ಮನೆಗೆ ತೆರಳಿ ಆದೇಶ ಪತ್ರ ನೀಡಿದ ಎ.ಸಿ. ಸಂತೋಷ್ ಕುಮಾರ್
ಚಿಕ್ಕಬಳ್ಳಾಪುರ: ತಮ್ಮ ಪುತ್ರಿಯರಿಯರಿಂದಲೇ ನಿರ್ಲಕ್ಷ್ಯಕ್ಕೊಳಗಾಗಿದ್ದ ವೃದ್ಧ ದಂಪತಿಗೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಉಪವಿಭಾಗಾಧಿಕಾರಿ ಡಾ.ಜಿ.ಸಂತೋಷ್ ಕುಮಾರ್ ನೆರವಾಗಿದ್ದಾರೆ.
ಇಲ್ಲಿನ ಚಿಂತಾಮಣಿ ನಗರದ ಅಝಾದ್ ಚೌಕ್ ನ 87 ವರ್ಷದ ವೆಂಕಟೇಶಾಚಾರ್, 67 ವರ್ಷದ ಪದ್ಮಾವತಮ್ಮ ತಮ್ಮ ಮೂವರು ಪುತ್ರಿಯರಿಗೆ ಸುಮಾರು ಕೋಟಿ ರೂಪಾಯಿ ಬೆಲೆ ಬಾಳುವ ಮನೆಯನ್ನು ದಾನವಾಗಿ ನೀಡಿದ್ದರು. ಆದರೆ, ಮಕ್ಕಳು ಯೋಗಕ್ಷೇಮ ವಿಚಾರಿಸದೇ ನಿರ್ಲಕ್ಷ್ಯ ವಹಿಸುತ್ತಿದ್ದಾಗ ನೊಂದ ದಂಪತಿ ನ್ಯಾಯಕ್ಕಾಗಿ ಕಂದಾಯ ಅಧಿಕಾರಿಗಳ ಮೊರೆ ಹೋಗಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಚಿಕ್ಕಬಳ್ಳಾಪುರ ಎಸಿ ಡಾ.ಜಿ.ಸಂತೋಷ್ ಕುಮಾರ್, ಹಿರಿಯ ನಾಗರಿಕ ಪೋಷಣೆ ಮತ್ತು ಶ್ರೇಯೋಭಿವೃದ್ದಿ ಹಾಗೂ ಸಂರಕ್ಷಣೆ ಕಾಯ್ದೆ (2007)ರಡಿ ಜೀವನ ನಿರ್ವಹಣೆ ಕಲಂ 23 ರ ಪ್ರಕಾರ ಮಕ್ಕಳಿಗೆ ಮಾಡಿದ್ದ ದಾನ ಪತ್ರವನ್ನ ರದ್ದುಪಡಿಸಿ, ಪೋಷಕರಿಗೆ ಮಕ್ಕಳು ಮಾಸಿಕ ತಲಾ 7 ಸಾವಿರ ನೀಡುವಂತೆ ಆದೇಶಸಿದ್ದಾರೆ. ಜೊತೆಗೆ ಪೋಷಕರಿಗೆ ಕಿರುಕುಳ ನೀಡದೇ ನೆಮ್ಮದಿಯ ಬದುಕು ರೂಪಿಸುವಂತೆಯೂ ಆದೇಶಿಸಿದ್ದಾರೆ.
ಸ್ವಾತಂತ್ರ್ಯ ದಿನದಂದೇ ಮನೆಗೆ ತೆರಳಿ ಆದೇಶ ಪತ್ರ ನೀಡಿದ ಎ.ಸಿ. : ಚಿಂತಾಮಣಿ ನಗರದ ಅಝಾದ್ ಚೌಕ್ ನಲ್ಲಿರುವ ವೃದ್ಧ ದಂಪತಿಯ ಮನೆಗೆ ತೆರಳಿದ ಎ.ಸಿ. ಸಂತೋಷ್ ಕುಮಾರ್ ಹಾಗೂ ಅವರ ಪತ್ನಿ, ಪರಿಶಿಷ್ಟ ವರ್ಗಗಳ ಅಧಿಕಾರಿ ಆದೇಶ ಪತ್ರ ನೀಡಿ ವೃದ್ಧ ದಂಪತಿಗೆ ಭರವಸೆ ನೀಡಿದ್ದಾರೆ.
ಅಧಿಕಾರಿಯ ಸಾಮಾಜಿಕ ಕಳಕಳಿ, ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
-------------------------------------------
ಮಕ್ಕಳಿಗೆ ಮಾಡಿದ್ದ ದಾನಪತ್ರವನ್ನು ರದ್ದು ಮಾಡಿಕೊಡುವಂತೆ ವೃದ್ಧ ದಂಪತಿ ಕಳೆದ ವರ್ಷ ಅರ್ಕಿ ಸಲ್ಲಿಸಿದ್ದರು. ಅಲ್ಲದೇ ಮಕ್ಕಳಿಂದ ಅನುಭವಿಸುತ್ತಿರುವ ನೋವನ್ನೂ ಈ ಹಿಂದೆ ಪತ್ರಿಕೆಗಳಿಗೆ ಹೇಳಿಕೆ ನೀಡುವ ಮೂಲಕ ತೋಡಿಕೊಂಡಿದ್ದರು. ಇದನ್ನು ಗಮನಿಸಿ ದಾಖಲೆಗಳ ಅನುಸಾರ ಕಾನೂನು ಬದ್ಧವಾಗಿ ನೊಂದ ದಂಪತಿ ಪರವಾಗಿ ಸ್ವಾತಂತ್ರ್ಯ ದಿನದಂದೇ ಅವರ ಮನೆಗೆ ತೆರಳಿ ಆದೇಶ ಪತ್ರ ನೀಡಿ, ನನ್ನ ಜವಾಬ್ದಾರಿ, ಕರ್ತವ್ಯವನ್ನು ನಿರ್ವಹಿಸಿದ್ದೇನೆ ಉಪವಿಭಾಗಾಧಿಕಾರಿ
-ಡಾ.ಜಿ. ಸಂತೋಷ್ ಕುಮಾರ್, ಉಪವಿಭಾಗಾಧಿಕಾರಿ, ಚಿಕ್ಕಬಳ್ಳಾಪುರ
-----------------------------------------------
''ಬೆಂಗಳೂರು ಕಂದಾಯ ವಿಭಾಗದಲ್ಲೇ ಚಿಕ್ಕಬಳ್ಳಾಪುರ ವಿಭಾಗಕ್ಕೆ ಪ್ರಥಮ ಸ್ಥಾನ''
'ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿನ ಪ್ರಕರಣಗಳ ವಿಲೇವಾರಿ ವಿಚಾರದಲ್ಲಿ ಚಿಕ್ಕಬಳ್ಳಾಪುರ ವಿಭಾಗಾಧಿಕಾರಿ ನ್ಯಾಯಾಲಯವು ಬೆಂಗಳೂರು ಕಂದಾಯ ವಿಭಾಗದಲ್ಲೇ ಪ್ರಥಮ ಸ್ಥಾನದಲ್ಲಿದೆ. ಜನವರಿಯಲ್ಲಿ 5,700 ಪ್ರಕರಣಗಳು ಇದ್ದವು. ಈಗ 4,222 ಪ್ರಕರಣಗಳಿವೆ.
- ಡಾ.ಜಿ. ಸಂತೋಷ್ ಕುಮಾರ್, ಉಪವಿಭಾಗಾಧಿಕಾರಿ, ಚಿಕ್ಕಬಳ್ಳಾಪುರ
ಇದನ್ನೂ ಓದಿ: ಮಡಿಕೇರಿ | ತಲ್ತರೆಶೆಟ್ಟಳ್ಳಿಯ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ: ಆರೋಪ