ಸಕಲೇಶಪುರ | ದಲಿತ ಯುವಕನ ಮೇಲೆ ಹಲ್ಲೆ ಪ್ರಕರಣ: ಹೆದ್ದಾರಿ ತಡೆದು ವಿವಿಧ ಸಂಘಟನೆಗಳಿಂದ ಪ್ರತಿಭಟನೆ
ಸಕಲೇಶಪುರ: ತನ್ನ ಮನೆಗೆ ವಾಹನದಲ್ಲಿ ಕರುವನ್ನು ತೆಗೆದುಕೊಂಡು ಹೋಗುತ್ತಿದ್ದ ದಲಿತ ಯುವಕನ ಮೇಲೆ ಬಜರಂಗದಳ ಕಾರ್ಯಕರ್ತರು ಸಕಲೇಶಪುರ ಪಟ್ಟಣದಲ್ಲಿ ಹಲ್ಲೆ ನಡೆಸಿದ ಘಟನೆಯನ್ನು ಖಂಡಿಸಿ ವಿವಿಧ ದಲಿತ ಸಂಘಟನೆಗಳ ಕಾರ್ಯಕರ್ತರು ಹದ್ದಾರಿ ತಡೆದು ಸೋಮವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ವೇಳೆ ಮಾತನಾಡಿದ ಮಂಜುನಾಥ್, ''ನಾನು ಗ್ರಾಮ ಪಂಚಾಯತ್ ನಿಂದ ಅನುಮತಿ ಪಡೆದು ಮನೆ ಕಡೆಗೆ ಕರು ಸಾಗಿಸುತ್ತಿದ್ದಾಗ ನನ್ನ ವಾಹನವನ್ನು ತಡೆದು ಬಜರಂಗ ದಳದ ಕಾರ್ಯಕರ್ತರು ಹಲ್ಲೆ ನಡೆಸಿದರು. ಅವರ ಮೇಲೇ ನನಗೂ ಹಲ್ಲೆ ಮಾಡುವ ಶಕ್ತಿ ಇದೆ. ಆದರೆ, ನಾನು ಅವರಂಥ ರೌಡಿ ಶೀಟರ್ ಅಲ್ಲ'' ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಂದಿನಿ ಬನವಾಸೆ ಮಾತನಾಡಿ, 'ಬೇಲಿಯೇ ಎದ್ದು ಹೊಲ ಮೇದ ಹಾಗೆ ರಕ್ಷಣೆ ನ್ಯಾಯ ನೀಡಬೇಕಾದ ಪೊಲೀಸರು-ಆರೋಪಿಗಳ ಪರ ನಿಂತು ನ್ಯಾಯ ಕೇಳುವ ಜನರನ್ನು ಸದೆಬಡೆಯುವ ಕುತಂತ್ರವಾಗಿದೆ. ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಧ್ಯಪ್ರವೇಶಿಸಿ ಅನ್ಯಾಯವನ್ನು ತಡೆದು ದಲಿತ ಹೋರಾಟಗಾರರ ಮೇಲೆ ಹಾಕಿರುವ ಕೌಂಟರ್ ಕೇಸನ್ನು ರದ್ದುಗೊಳಿಸಬೇಕು' ಎಂದು ಒತ್ತಾಯಿಸುತ್ತೇವೆ ಎಂದರು.
ಆರೋಪಿಗಳನ್ನು ಶೀಘ್ರ ಬಂಧಿಸುವಂತೆ 'ದಲಿತ ಸಮುದಾಯ ಸಕಲೇಶಪುರ' ಕಾರ್ಯಕರ್ತರು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದರು.
ಘಟನೆ ವಿವರ: ಶನಿವಾರ ಸಂಜೆ 4 ಗಂಟೆ ಸುಮಾರಿಗೆ ತನ್ನ ಮನೆಗೆ ವಾಹನದಲ್ಲಿ ಕರುವನ್ನು ತೆಗೆದುಕೊಂಡು ಹೋಗುತ್ತಿದ್ದ ಮಂಜುನಾಥ್ ಮೇಲೆ ಪಟ್ಟಣದ ಹೊಸ ಬಸ್ ನಿಲ್ದಾಣಬಳಿ ವಾಹನವನ್ನು ತಡೆದು ಆರೋಪಿಗಳು ಹಲ್ಲೆ ನಡೆಸಿದ್ದರು. ಮಂಜುನಾಥ್ ಹಲಸುಲಿಗೆ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಹಾಗೂ ಹಾಲಿ ಸದಸ್ಯರಾಗಿದ್ದು, ಆರೋಪಿಗಳು ಮಂಜುನಾಥ್ ಅಣ್ಣನ ಮಗ ಕಾವೇಶ್ ಮೇಲೆಯೂ ಹಲ್ಲೆಗೆ ಮುಂದಾಗಿ ಬೆದರಿಕೆ ಹಾಕಿದ್ದರು.
ಇದನ್ನೂ ಓದಿ: ಸಕಲೇಶಪುರ | ಕರು ಸಾಗಿಸುತ್ತಿದ್ದ ದಲಿತ ಯುವಕನ ಮೇಲೆ ಹಲ್ಲೆ ಆರೋಪ: ಬಜರಂಗದಳದ 9 ಮಂದಿ ಕಾರ್ಯಕರ್ತರ ವಿರುದ್ಧ FIR