KPTCL ನೇಮಕಾತಿ ಅಕ್ರಮ ನಡೆದಿದ್ದರೆ ಸಹಿಸುವ ಪ್ರಶ್ನೆಯೇ ಇಲ್ಲ: ಸಚಿವ ಸುನಿಲ್ ಕುಮಾರ್
ಕಲಬುರಗಿ, ಆ. 23: ‘ಕೆಪಿಟಿಸಿಎಲ್ ನೇಮಕಾತಿಯಲ್ಲಿ ಯಾವುದೇ ರೀತಿಯ ಅಕ್ರಮ ನಡೆದಿಲ್ಲ' ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದರೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು' ಎಂದು ಇಂಧನ ಸಚಿವ ವಿ.ಸುನಿಲ್ ಕುಮಾರ್ ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ನೇಮಕಾತಿ ಕೆಪಿಟಿಸಿಎಲ್ನಲ್ಲಿ ನಡೆದರೂ ಪರೀಕ್ಷೆ ನಡೆಸಿದ್ದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ). ಈಗಾಗಲೇ ಪ್ರಾಥಮಿಕ ವರದಿಯಲ್ಲಿ ಯಾವುದೇ ರೀತಿಯ ಅಕ್ರಮ ನಡೆದಿಲ್ಲ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ. ಆದರೂ, ಇಂತಹ ಕೃತ್ಯಗಳು ನಡೆದಿದ್ದರೆ ಅದನ್ನು ಸಹಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಪರೀಕ್ಷೆ ಬರೆದಂತಹ ಅಭ್ಯರ್ಥಿಗಳು ಯಾರೂ ಆತಂಕಪಡುವ ಅಗತ್ಯ ಇಲ್ಲ' ಎಂದು ಅಭಯ ನೀಡಿದರು.
ಸಿದ್ದು ವಿರುದ್ಧ ಕಿಡಿ: ‘ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋಗುವುದು ತಪ್ಪು' ಎಂದು ಹೇಳುತ್ತಿಲ್ಲ. ಆದರೆ, ದೇವಸ್ಥಾನಗಳಿಗೆ ಹೇಗೆ ಹೋಗಬೇಕೆನ್ನುವುದು ಅವರವರ ಭಾವನೆಗೆ ಸಂಬಂಧಪಟ್ಟದ್ದು. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಯಾವ ಭಾವನೆ ಇದೆಯೋ ನನಗೆ ಗೊತ್ತಿಲ್ಲ' ಎಂದು ಸುನಿಲ್ ಕುಮಾರ್ ಇದೇ ವೇಳೆ ತಿರುಗೇಟು ನೀಡಿದರು.
ಇದನ್ನೂ ಓದಿ: ಕೆಪಿಟಿಸಿಎಲ್ ಕಿರಿಯ ಸಹಾಯಕ ಹುದ್ದೆ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ: ತಂದೆ, ಮಗನ ಬಂಧನ