ನಸೀಬು ಚೆನ್ನಾಗಿದ್ದರೆ ನಾನು ಮುಖ್ಯಮಂತ್ರಿ ಆಗ್ತೀನಿ: ಸಚಿವ ಉಮೇಶ್ ಕತ್ತಿ
ಬೆಂಗಳೂರು, ಆ. 27: ‘ನಸೀಬು ಚೆನ್ನಾಗಿದ್ದರೆ ನಾನು ಅಖಂಡ ಕರ್ನಾಟಕದ ಮುಖ್ಯಮಂತ್ರಿ ಆಗುತ್ತೇನೆ. ಅದಕ್ಕೆ ಇನ್ನೂ ಹದಿನೈದು ವರ್ಷ ಕಾಲಾವಕಾಶವಿದೆ' ಎಂದು ಸಚಿವ ಉಮೇಶ್ ಕತ್ತಿ ಇಂದಿಲ್ಲಿ ಭರವಸೆ ವ್ಯಕ್ತಪಡಿಸಿದ್ದಾರೆ.
ಶನಿವಾರ ಗದಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ನಾನುಹಿರಿಯ ರಾಜಕಾರಣಿ, ಉತ್ತರ ಕರ್ನಾಟಕ್ಕಷ್ಟೇ ಸೀಮಿತವಾಗಿಲ್ಲ. ಉತ್ತರ ಕರ್ನಾಟಕದವರೇ ಬಸವರಾಜ ಬೊಮ್ಮಾಯಿ ಅವರೇ ಮುಖ್ಯಮಂತ್ರಿ ಇರುವಾಗ ನಾನು ಸಿಎಂ ಪದವಿಗೆ ಆಸೆ ಪಡುವುದಿಲ್ಲ' ಎಂದು ಸ್ಪಷ್ಟಣೆ ನೀಡಿದರು.
‘ಉತ್ತರ ಕರ್ನಾಟಕದ ಅಭಿವೃದ್ಧಿಗೆ ತೊಡಕಾದರೆ ಗಟ್ಟಿ ಧ್ವನಿಯಲ್ಲಿ ಅದನ್ನು ವಿರೋಧಿಸುತ್ತೇನೆ. ಮಹದಾಯಿ, ಕಳಸಾ-ಬಂಡೂರಿ, ಕೃಷ್ಣ, ಆಲಮಟ್ಟಿ ಭಾಗದ ಅಭಿವೃದ್ಧಿಗೆ ಯಾರೇ ಅಡ್ಡಗಾಲು ಹಾಕಿದರೂ ರಾಜೀನಾಮೆ ಕೊಡಲು ಸಿದ್ಧನಿದ್ದೇನೆ. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸದಾ ಬದ್ಧ' ಎಂದು ಉಮೇಶ್ ಕತ್ತಿ ಇದೇ ವೇಳೆ ತಿಳಿಸಿದರು.
‘ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸರಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುವುದನ್ನು ಬಿಡಬೇಕು. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ, ಸಿದ್ದರಾಮಯ್ಯ ಯಾರೇ ಆಗಿದ್ದರೂ ತಮ್ಮ ಬಳಿ ಭ್ರಷ್ಟಾಚಾರದ ಬಗ್ಗೆ ದಾಖಲೆಗಳಿದ್ದರೆ ಲೋಕಾಯುಕ್ತಕ್ಕೆ ದೂರು ನೀಡಲಿ' ಎಂದು ಉಮೇಶ್ ಕತ್ತಿ ಸವಾಲು ಹಾಕಿದರು.