ಶಿಕ್ಷಣ ಇಲಾಖೆಯ ಭ್ರಷ್ಟತೆಯನ್ನು ಮರೆಮಾಚುವ ಯತ್ನ: ಲೋಕೇಶ್ ತಾಳಿಕಟ್ಟೆ
ಲೋಕೇಶ್ ತಾಳಿಕಟ್ಟೆ -ಅಧ್ಯಕ್ಷ ರೂಪ್ಸಾ
ಬೆಂಗಳೂರು, ಆ.29: 'ಕರ್ನಾಟಕ ರಾಜ್ಯಾದ್ಯಂತ ಖಾಸಗಿ ಶಾಲೆಗಳು ಅಧಿಕಾರಿಗಳ ಭ್ರಷ್ಟಾಚಾರದ ಕುರಿತು ಧ್ವನಿ ಎತ್ತಿದಾಗಲೆಲ್ಲಾ ರೂಪ್ಸಾ ಕರ್ನಾಟಕ ಸಂಘಟನೆಯ ಹೆಸರಿನಲ್ಲಿ ಶಶಿಧರ್ ದಿಂಡೂರು ಮತ್ತು ಹಾಲ್ನೂರು ಲೇಪಾಕ್ಷಿ ಮಾಧ್ಯಮಗಳ ಮುಂದೆ ಬಂದು ಒಂದು ಸುದ್ದಿಗೋಷ್ಠಿ ನಡೆಸಿ ಸರಕಾರದ ಪರ ವಕಾಲತ್ತು ವಹಿಸುವ ಮೂಲಕ ಜನರನ್ನು ಹಾಗೂ ಮಾಧ್ಯಮಗಳ ಗಮನವನ್ನು ಬೇರೆಡೆಗೆ ಸೆಳೆಯುವ ತಂತ್ರವನ್ನು ಮಾಡುತ್ತಿದ್ದಾರೆ' ಎಂದು ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲೆಗಳ ಮ್ಯಾನೇಜ್ಮೆಂಟ್ ಸಂಘದ(ರೂಪ್ಸಾ) ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಪ್ರತಿಕ್ರಿಯಿಸಿದ್ದಾರೆ.
ಸೋಮವಾರ ಪ್ರಕಟನೆ ಹೊರಡಿಸಿರುವ ಅವರು, ಶಿಕ್ಷಣ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಚಾರವನ್ನು ಮರೆಮಾಚಲು ಮಂತ್ರಿಗಳ ಪ್ರಾಯೋಜಕತ್ವದಲ್ಲಿ ನನ್ನ ಮೇಲೆ ಆರೋಪ ಮಾಡಲಾಗುತ್ತಿದೆ. ಇವರ ಕಾನೂನುಬಾಹಿರ ಹೇಳಿಕೆಗಳ ವಿರುದ್ಧ ಮಾನನಷ್ಟ ಹಾಗೂ ಕಂಟೆಂಪ್ಟ್ ಆಫ್ ಕೋರ್ಟ್ ಮೊಕದ್ದಮೆಯನ್ನು ದಾಖಲು ಮಾಡುತ್ತಿದ್ದೇವೆ. ಈ ಹಿಂದೆ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಅಧಿಕಾರಿಗಳ ಸಹಾಯದಿಂದ ನಕಲಿ ಸಮಿತಿಯನ್ನ ರಚಿಸಿಕೊಂಡು ಪಡೆದಿದ್ದ ಆದೇಶವನ್ನು ಹೈಕೋರ್ಟ್ ಅಮಾನ್ಯವಾಗೊಳಿಸಿದೆ. ಈ ಆದೇಶ ಇದ್ದರೂ ಜನರಿಗೆ ಹಾಗೂ ಮಾಧ್ಯಮಕ್ಕೆ ತಪ್ಪು ಸಂದೇಶ ನೀಡುತ್ತಿರುವುದು ಕಾನೂನುಬಾಹಿರ ಆಗುತ್ತದೆ. ಸರಕಾರದಿಂದ ಮರುಪಾವತಿ ಆಗದ ಆರ್ಟಿಐ ಶುಲ್ಕ ಸೇರಿ ಶಿಕ್ಷಣ ಇಲಾಖೆಯ ಭ್ರಷ್ಟತೆಯಿಂದ ಖಾಸಗಿ ಶಾಲೆಗಳು ಎಷ್ಟು ತೊಂದರೆ ಅನುಭವಿಸುತ್ತಿವೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಹೇಳಿದರು.