ಮುರುಘಾ ಶರಣರ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ಬಸವಶ್ರೀ ಪ್ರಶಸ್ತಿ ಹಿಂದಿರುಗಿಸಿದ ಪತ್ರಕರ್ತ ಪಿ. ಸಾಯಿನಾಥ್

ಬೆಂಗಳೂರು, ಸೆ.2: ಚಿತ್ರದುರ್ಗದ ಶ್ರೀ ಮುರುಘಾಮಠದ ಮಠಾಧೀಶ ಶ್ರೀ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಕೇಳಿ ಬಂದಿರುವ ಲೈಂಗಿಕ ದೌರ್ಜನ್ಯ ಆರೋಪದ ಹಿನ್ನೆಲೆಯಲ್ಲಿ ಹಿರಿಯ ಪತ್ರಕರ್ತ ಪಿ.ಸಾಯಿನಾಥ್ 2017ರಲ್ಲಿ ಮಠದ ವತಿಯಿಂದ ಸ್ವೀಕರಿಸಿದ್ದ ‘ಬಸವ ಶ್ರೀ’ ಪ್ರಶಸ್ತಿಯನ್ನು ಹಿಂದಿರುಗಿಸುತ್ತಿರುವುದಾಗಿ ಪ್ರಕಟಿಸಿದ್ದಾರೆ.
ಶ್ರೀ ಶಿವಮೂರ್ತಿ ಮುರುಘಾ ಶರಣರು ಭಾಗಿಯಾಗಿದ್ದಾರೆ ಎನ್ನಲಾದ ಬೆಳವಣಿಗೆಗಳ ಬಗ್ಗೆ ಮಾಧ್ಯಮ ವರದಿಗಳಿಂದ ತಿಳಿದು ನಾನು ವಿಚಲಿತನಾಗಿದ್ದೇನೆ. ಅವರು ಪೊಕ್ಸೊ ಮತ್ತು ಎಸ್ಸಿ/ಎಸ್ಟಿ ಕಾಯ್ದೆಯಡಿ ಮಕ್ಕಳ ಮೇಲೆ, ವಿಶೇಷವಾಗಿ ಪ್ರೌಢಶಾಲಾ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪವನ್ನು ಎದುರಿಸುತ್ತಿದ್ದಾರೆ. ಮಕ್ಕಳ ಮೇಲಿನ ಯಾವುದೇ ರೀತಿಯ ಅಪರಾಧಗಳನ್ನು ಖಂಡಿಸಲು ಯಾವುದೇ ಪದಗಳು ಬಲವಾಗಿಲ್ಲ ಎಂದು ಸಾಯಿನಾಥ್ ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಸಂತ್ರಸ್ತರಿಗೆ ನ್ಯಾಯ ಸಿಗಬೇಕು ಎಂಬ ಉದ್ದೇಶದಿಂದ 2017 ರಲ್ಲಿ ಮುರುಘಾ ಮಠವು ನನಗೆ ನೀಡಿದ ಬಸವಶ್ರೀ ಪ್ರಶಸ್ತಿಯನ್ನು (ಮತ್ತು ಅದರೊಂದಿಗೆ ಬಂದ 5 ಲಕ್ಷ ರೂ.ಮೊತ್ತವನ್ನು ಚೆಕ್ ಮೂಲಕ) ಹಿಂದಿರುಗಿಸುತ್ತೇನೆ ಎಂದು ಸಾಯಿನಾಥ್ ಹೇಳಿದ್ದಾರೆ.
ಇಂತಹ ಘಟನೆಗಳನ್ನು ಬೆಳಕಿಗೆ ತರಲು ಶ್ರಮಿಸಿದ ಮೈಸೂರು ಮೂಲದ ಸ್ವಯಂ ಸೇವಾ ಸಂಸ್ಥೆ ‘ಒಡನಾಡಿ’ಯ ಪ್ರಯತ್ನಗಳು ಮತ್ತು ಸಾಮಾಜಿಕ ಅನಿಷ್ಟಗಳ ವಿರುದ್ಧದ ದಶಕಗಳ ಹೋರಾಟದ ಬಗ್ಗೆ ನನ್ನ ಮೆಚ್ಚುಗೆಯನ್ನು ದಾಖಲಿಸಲು ಬಯಸುತ್ತೇನೆ. ಮತ್ತು ಈ ಪ್ರಕರಣದ ತನಿಖೆಯನ್ನು ತೀವ್ರವಾಗಿ ಮುಂದುವರಿಸಲು ಮತ್ತು ಯಾವುದೇ ಆಧಾರದ ಮೇಲೆ ರಾಜಿ ಮಾಡಿಕೊಳ್ಳಲು ಅವಕಾಶ ನೀಡದಂತೆ ಕರ್ನಾಟಕ ಸರಕಾರಕ್ಕೆ ನಾನು ಮನವಿ ಮಾಡುತ್ತೇನೆ ಎಂದು ಸಾಯಿನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಮುರುಘಾ ಶರಣರನ್ನು 3 ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿದ ನ್ಯಾಯಾಲಯ







