ಬೆಲೆ ಏರಿಕೆಯಿಂದ ದೇಶವನ್ನು ರಕ್ಷಿಸಲು ಹೋರಾಟ ಅನಿವಾರ್ಯ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ಬೆಂಗಳೂರು, ಸೆ. 4: ‘ಬಿಜೆಪಿ ಸರಕಾರ ದಿನನಿತ್ಯ ಜನಸಾಮಾನ್ಯರ ಜೇಬು ಪಿಕ್ ಪಾಕೆಟ್ ಮಾಡುತ್ತಿದೆ. ಬೆಲೆ ಏರಿಕೆಯಿಂದ ದೇಶವನ್ನು ರಕ್ಷಿಸಲು ನಾವೆಲ್ಲರೂ ಇಂದು ಹೋರಾಟ ಮಾಡುತ್ತಿದ್ದೇವೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಇಂದಿಲ್ಲಿ ತಿಳಿಸಿದ್ದಾರೆ.
ರವಿವಾರ ದಿಲ್ಲಿಯಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಯುವಕರು, ಮಹಿಳೆಯರು ಸೇರಿದಂತೆ ಸಮಾಜದ ಪ್ರತಿಯೊಬ್ಬ ಪ್ರಜೆಯನ್ನು ಸುಲಿಗೆ ಮಾಡಲಾಗುತ್ತಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿದ್ದು, ಜನರ ಆದಾಯ ಪಾತಾಳಕ್ಕೆ ಕುಸಿಯುತ್ತಿದೆ. ಇದರ ವಿರುದ್ಧ ಕಾಂಗ್ರೆಸ್ ದಿಲ್ಲಿ ಚಲೋ ಪ್ರತಿಭಟನೆ ಮಾಡುತ್ತಿದೆ' ಎಂದು ಹೇಳಿದರು.
‘ಜನ ಸಾಮಾನ್ಯರ ಬದುಕು ಹಸನಾಗಬೇಕು, ಬೆಲೆ ಏರಿಕೆಯಿಂದ ಆಗುತ್ತಿರುವ ತೊಂದರೆಯಿಂದ ಎಲ್ಲ್ಲ ವರ್ಗದ ಜನರನ್ನು ರಕ್ಷಿಸಬೇಕು ಎಂದು ನಾವು ಪ್ರತಿಭಟಿಸುತ್ತಿದ್ದೇವೆ. ಎಲ್ಲರೂ ಈ ಪ್ರತಿಭಟನೆಗೆ ಬೆಂಬಲಿಸಬೇಕು. ಮೋದಿ ನೇತೃತ್ವದ ಬಿಜೆಪಿ ಸರಕಾರ ದೇಶದ ಜನರಿಗೆ ಅಚ್ಛೇ ದಿನದ ಹೆಸರಿನಲ್ಲಿ ನರಕ ದರ್ಶನ ಮಾಡಿಸುತ್ತಿದ್ದು, ಇದರ ವಿರುದ್ಧ ಹೋರಾಟ ಅನಿವಾರ್ಯ' ಎಂದು ಶಿವಕುಮಾರ್ ಎಚ್ಚರಿಸಿದರು.