ಬಂಜಾರ ಸಮುದಾಯದ ಕ್ಷೇತ್ರ ಯಾವುದೇ ಚಟುವಟಿಕೆ ನಡೆಸಲು ಈಗ ಸೂಕ್ತವಲ್ಲ: ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ
ಹೊನ್ನಾಳಿ; ಭಾಯಾಗಡ್ ನಲ್ಲಿ ಶಿಬಿರ ನಡೆಸಲು ಅನುಮತಿ ಕೋರಿದ್ದ RSS
ದಾವಣಗೆರೆ: ಬಂಜಾರ ಸಮುದಾಯದ ಆರಾಧ್ಯ ದೈವ ಹೊನ್ನಾಳಿ ತಾಲೂಕಿನ ಸೂರಗೊಂಡನಕೊಪ್ಪದ ಸಂತ ಸೇವಾಲಾಲ್ ಅವರ ಜನ್ಮಸ್ಥಳ ಭಾಯಾಗಡ್ ನಲ್ಲಿ ಮೂಲಭೂತ ಸೌಕರ್ಯಗಳ ಕಟ್ಟಡ ಕಾರ್ಯಗಳು ನಡೆಯುತ್ತಿರುವ ಹಿನ್ನಲೆಯಲ್ಲಿ ಯಾವುದೇ ಚಟುವಟಿಕೆ ನಡೆಸಲು ಸೂಕ್ತವಲ್ಲ ಎಂದು ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ ಪ್ರಕಟನೆ ಹೊರಡಿಸಿದೆ.
ಸೆ. 10ರಂದು ಸಂತ ಸೇವಾಲಾಲ್ ರ ಜನ್ಮಸ್ಥಳವಾದ ಸೂರಗೊಂಡನಕೊಪ್ಪದ ಭಾಯಾಗಡ್ನಲ್ಲಿ ಕೆಲಸ ಸಂಘ ಸಂಸ್ಥೆಗಳು ಸಾಮಾಜಿಕ, ಸಾಂಸ್ಕ್ರತಿಕ ಚಟುವಟಿಕೆ ನಡೆಸಲು ಪತ್ರ ಮುಖೇನ ಅನುಮತಿ ಕೋರಿದ್ದರು. ಅದರೆ, ಭಾಯಾಗಡ ಕ್ಷೇತ್ರದಲ್ಲಿ ಕಟ್ಟಡ ಕಾಮಗಾರಿಗಳು ಪ್ರಗತಿಯಲ್ಲಿದ್ದು,ಮೂಲಭೂತ ಸೌಕರ್ಯ ಪೂರ್ಣ ಪ್ರಮಾಣದಲ್ಲಿ ಇರದೇ ಇರುವುದರಿಂದ ಸಾರ್ವಜನಿಕರ ಸಭೆ ಸಮಾರಂಭಗಳಿಗೆ ಬಗ್ಗೆ ನಿರ್ದಿಷ್ಟ ನಿಯಾಮಾವಳಿ ರೂಪಿಸಬೇಕಾಗಿರುವುದರಿಂದ ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಚಟುವಟಿಕೆ ನಡೆಸಲು ಸೂಕ್ತವಲ್ಲ ಎಂದು ಸಮಿತಿ ಅಭಿಪ್ರಾಯವಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಇಲ್ಲಿ ಸೆ.11ರಿಂದ ಶಿಬಿರ ನಡೆಸಲು ಉದ್ದೇಶಿಸಿತ್ತು. ಆದರೆ ಬಂಜಾರ ಸಮುದಾಯದ ಮುಖಂಡರು ವಿರೋಧ ವ್ಯಕ್ತಿಪಡಿಸುತ್ತಿದೆ.
'ಬಂಜಾರರ ಸ್ವತಂತ್ರ ಧಾರ್ಮಿಕ ಅಸ್ಮಿತೆ ರಕ್ಷಿಸುತ್ತೇವೆ'
'ಸಂತ ಸೇವಾಲಾಲ್ ಅವರ ಜನ್ಮಸ್ಥಳ ಭಾಯಾಗಡ ವಿಶ್ವದ ಬಂಜಾರರ ಧಾರ್ಮಿಕ ಕೇಂದ್ರ. ಇಲ್ಲಿಗೆ ರಾಜಕಾರಣಿಗಳು ಭಕ್ತರಾಗಿ ಪೂಜಿಸಿ, ಸೇವೆ ಸಲ್ಲಿಸಿ ಹೋಗಲಷ್ಠೆ ಅವಕಾಶ ಇರಬೇಕು. ಇಲ್ಲಿ ಪಕ್ಷ ರಾಜಕೀಯದ ಚಟುವಟಿಕೆಗಳನ್ನು ನಾವು ವಿರೋಧಿಸುತ್ತೇವೆ. ಆ ಕಾರಣಕ್ಕಾಗಿ ಆರೆಸ್ಸೆಸ್ ಶಿಬಿರ ಆಯೋಜನೆಯನ್ನು ನಾಡಿನ ಎಲ್ಲಾ ಬಂಜಾರ ಸಂಘಟನೆಗಳು ವಿರೋಧಿಸಿವೆ. ಬಂಜಾರರ ಸ್ವತಂತ್ರ ಧಾರ್ಮಿಕ ಅಸ್ಮಿತೆಯನ್ನು ಸಂರಕ್ಷಿಸುತ್ತೇವೆ'.
- ಅನಂತನಾಯ್ಕ ಎನ್ , ನ್ಯಾಯವಾದಿಗಳು ಹೈಕೋರ್ಟ್ ಬೆಂಗಳೂರು
ಇದನ್ನೂ ಓದಿ: ಬಂಜಾರರ ಧಾರ್ಮಿಕ ಕ್ಷೇತ್ರದಲ್ಲಿ RSS ಶಿಬಿರ ನಡೆದಲ್ಲಿ ತಡೆಯುತ್ತೇವೆ: ಮುಖಂಡರ ಎಚ್ಚರಿಕೆ