ಲೈಂಗಿಕ ಕಿರುಕುಳ ಪ್ರಕರಣ: ಸುದ್ದಿ ಪ್ರಕಟಿಸದಂತೆ ಪ್ರತಿಬಂಧಕಾಜ್ಞೆ ತಂದ ಮುರುಘಾ ಶರಣರು
ಬೆಂಗಳೂರು, ಸೆ.6: ಪೊಕ್ಸೋ, ಪರಿಶಿಷ್ಟರ ಮೇಲೆ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿರುವ ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು ತಮ್ಮ ಕುರಿತ ಸುದ್ದಿಗಳನ್ನು ಪ್ರಕಟಿಸದಂತೆ ಬೆಂಗಳೂರು ನಗರ ಸಿವಿಲ್ ಮತ್ತು ಸತ್ರ ನ್ಯಾಯಾಲಯದಿಂದ ಪ್ರತಿಬಂಧಕಾಜ್ಞೆಯನ್ನು ಪಡೆದಿದ್ದಾರೆ.
ಮುರುಘಾ ಶರಣರು, ಇತರೆ ನಾಲ್ವರು ಆರೋಪಿಗಳು, ಅನುಯಾಯಿಗಳು, ಮುರುಘಾ ಮಠ ಮತ್ತು ಪದಾಧಿಕಾರಿಗಳ ವಿರುದ್ಧ ಯಾವುದೇ ತೆರನಾದ ಮಾನಹಾನಿಕರ, ವಿವಾದಾತ್ಮಕ ವಿಚಾರ ಪ್ರಸಾರ, ಪ್ರಕಟ ಮಾಡದಂತೆ ವಿದ್ಯುನ್ಮಾನ, ಮುದ್ರಣ ಹಾಗೂ ಸಾಮಾಜಿಕ ಮಾಧ್ಯಗಳು ಸೇರಿ 48 ಸಂಸ್ಥೆಗಳ ವಿರುದ್ಧ ನ್ಯಾಯಾಲಯವು ಮಧ್ಯಂತರ ಪ್ರತಿಬಂಧಕಾಜ್ಞೆ ನೀಡಿದೆ.
ಅರ್ಜಿದಾರರ ಮನವಿ ಏನು?: ಮೈಸೂರಿನ ನಝರಾಬಾದ್ ಮತ್ತು ಚಿತ್ರದುರ್ಗದ ಗ್ರಾಮಾಂತರ ಠಾಣೆಯಲ್ಲಿ ಮುರುಘಾ ಶ್ರೀಗಳು, ಇತರೆ ಆರೋಪಿಗಳು, ಮುರುಘಾ ಮಠ ಮತ್ತು ಪದಾಧಿಕಾರಿಗಳ ವಿರುದ್ಧ ಯಾವುದೇ ತೆರನಾದ ಮಾನಹಾನಿಕರ, ವಿವಾದಾತ್ಮಕ ಲೇಖನ ಪ್ರಕಟ ಮಾಡದಂತೆ ಪ್ರತಿವಾದಿ ಮಾಧ್ಯಮಗಳನ್ನು ನಿರ್ಬಂಧಿಸಿ ಶಾಶ್ವತ ಪ್ರತಿಬಂಧಕಾದೇಶ ಮಾಡಬೇಕು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಆಡಿಯೊ ರೂಪದಲ್ಲಿ ಪ್ರಸಾರ, ಸ್ಥಳೀಯ ಕೇಬಲ್ ಟಿವಿಗಳು, ಇಂಟರ್ ನೆಟ್, ವೆಬ್ಸೈಟ್, ರೇಡಿಯೊ, ಚಾನೆಲ್, ಸಾಮಾಜಿಕ ಮಾಧ್ಯಮ ವೇದಿಕೆ ಇತ್ಯಾದಿಗಳಲ್ಲಿ ಯಾವುದೇ ವಿಚಾರವನ್ನು ಪ್ರಸಾರ, ಪ್ರಕಟ, ವರ್ಗಾವಣೆ ಮಾಡದಂತೆ* ಶಾಶ್ವತವಾಗಿ ಪ್ರತಿವಾದಿಗಳನ್ನು ನಿರ್ಬಂಧಿಸಬೇಕು. ಆಗಸ್ಟ್ 26ರ ದೂರಿನ ತನಿಖೆ ಮತ್ತು ನ್ಯಾಯಿಕ ತನಿಖೆಯಲ್ಲಿ ಹಸ್ತಕ್ಷೇಪ ಮಾಡದಂತೆ ನಿರ್ಬಂಧಿಸಬೇಕು ಎಂದೂ ಕೋರಲಾಗಿದೆ.
ಇದನ್ನೂ ಓದಿ: ಲೈಂಗಿಕ ಕಿರುಕುಳ ಪ್ರಕರಣ; ಮುರುಘಾ ಹಾಸ್ಟೆಲ್ನಿಂದ 37 ಬಾಲಕಿಯರ ಸ್ಥಳಾಂತರ