ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿ ಚರಂಡಿ ವ್ಯವಸ್ಥೆಯನ್ನು ಆಡಿಟ್ ಮಾಡಲಾಗುವುದು: ಮುಖ್ಯಮಂತ್ರಿ ಬೊಮ್ಮಾಯಿ
ಬೆಂಗಳೂರು, ಸೆ. 9: ‘ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿ ಕಾಮಗಾರಿಯಲ್ಲಿನ ಚರಂಡಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ಆಡಿಟ್ ಮಾಡಲಾಗುವುದು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.
ಶುಕ್ರವಾರ ನಗರದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಲೋಕೋಪಯೋಗಿ, ಬಿಬಿಎಂಪಿ, ಆರ್ಥಿಕ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ಎಲ್ಲೆಲ್ಲಿ ಒಳಚರಂಡಿಯನ್ನು ದೊಡ್ಡದು ಮಾಡಬೇಕು, ಗ್ರೇಡಿಯಂಟ್ ಹೆಚ್ಚಿಸಬೇಕು, ಅಡಚಣೆಗಳು ಎಲ್ಲವೂ ಆಡಿಟ್ನಲ್ಲಿ ತಿಳಿದುಬರುತ್ತದೆ. ಚರಂಡಿ ಸಾಮರ್ಥ್ಯ ಹೆಚ್ಚಲಿದೆ' ಎಂದು ಹೇಳಿದರು.
‘ಬೆಂಗಳೂರಿಗೆ ಬರುವ ಚೆನ್ನೈ ಎಕ್ಸ್ ಪ್ರೆಸ್, ಮುಂಬೈ ಎಕ್ಸ್ ಪ್ರೆಸ್, ಹೈದರಾಬಾದ್ ಎಕ್ಸ್ಪ್ರೆಸ್ ಮಾರ್ಗಗಳಿಗೆ ಒಳಸಂಪರ್ಕ, ನಗರಗಳಲ್ಲಿ ಹಾದುಹೋಗುವ ಅಂತರಗಳನ್ನು ಕಡಿಮೆ ಮಾಡುವ ಬಗ್ಗೆ ತೀರ್ಮಾನ ಮಾಡಲಾಗಿದೆ' ಎಂದ ಅವರು, ‘ರಾಷ್ಟ್ರೀಯ ಹೆದ್ದಾರಿ ಮೇಲೆ ಹೈಡೆನ್ಸಿಟಿ ಕಾರಿಡಾರ್ನ ಕೆಲವೆಡೆ ಫ್ಲೈ ಓವರ್, ಹಾಗೂ ಅಂಡರ್ ಪಾಸ್ ಮಾಡಬೇಕಿದೆ. ಸ್ಕೈವಾಕ್ ಮಾಡಲು ಸ್ಥಳಗಳನ್ನು ಗುರುತಿಸಿ ನೀಡಲಾಗಿದೆ' ಎಂದು ತಿಳಿಸಿದರು.
‘ಇಂದಿನ ಸಭೆಯಲ್ಲಿ ಚರ್ಚೆಯಾಗಿರುವ ಯೋಜನೆಗಳೆಲ್ಲಾ ಒಂದೂವರೆ ತಿಂಗಳಲ್ಲಿ ಸಿದ್ಧವಾದಲ್ಲಿ ತಕ್ಷಣವೇ ಮಂಜೂರಾತಿ ನೀಡುವುದು ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ. ಇದೇ ವರ್ಷ ಕಾಮಗಾರಿ ಪ್ರಾರಂಭವಾಗಬೇಕೆನ್ನುವುದು ನಮ್ಮ ಉದ್ದೇಶ. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ' ಎಂದು ಬಸವರಾಜ ಬೊಮ್ಮಾಯಿ ನುಡಿದರು.
ಗೊರಗುಂಟೆಪಾಳ್ಯ ಹೆದ್ದಾರಿ ಉನ್ನತೀಕರಣ: ಗೊರಗುಂಟೆಪಾಳ್ಯದಿಂದ ಇರುವ ರಾಷ್ಟ್ರೀಯ ಹೆದ್ದಾರಿಯನ್ನು ಉನ್ನತೀಕರಿಸಲು ತೀರ್ಮಾನಿಸಿದ್ದು, ಕೇಬಲ್ಗಳನ್ನು ಅಳವಡಿಸಲು ಯಾವ ಏಜೆನ್ಸಿಗಳನ್ನು ನೇಮಿಸಬೇಕು ಎಂದು ತೀರ್ಮಾನಿಸಿ ಕೂಡಲೇ ಕ್ರಮ ಕೈಗೊಳ್ಳುವುದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಭರವಸೆ ನೀಡಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
‘ಇಡೀ ಕರ್ನಾಟಕದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಯಾವ ರೀತಿ ಸುಧಾರಣೆ ಮಾಡಬೇಕು. ಬೆಂಗಳೂರಿಗೆ ಸಂಬಂಧಿಸಿದಂತೆ ಎಸ್ಟಿಆರ್ಆರ್ಗೆ ಕೆಲವು ವಿನಾಯಿತಿಗಳನ್ನು ನೀಡಲು ಒಪ್ಪಿಗೆ ನೀಡಲಾಗಿದೆ. ಅಲ್ಲದೆ, ಏನೇ ಲೋಪಗಳಿದ್ದರೂ ಈ ಸಂಬಂಧ ಪ್ರಸ್ತಾವನೆ ಕಳುಹಿಸುವಂತೆ ಸೂಚನೆ ನೀಡಲಾಗಿದೆ ಎಂದರು.
ಬೆಂಗಳೂರಿಗೆ ಸಾರಿಗೆ ಪ್ರಾಧಿಕಾರ: ‘ಇಡೀ ಬೆಂಗಳೂರು ನಗರದ ಸಾರಿಗೆ ವ್ಯವಸ್ಥೆಗೆಒಂದು ಪ್ರಾಧಿಕಾರ ರಚನೆ ಮಾಡಬೇಕೆಂಬ ಉದ್ದೇಶವಿದೆ. ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ವಿಧಾನಸಭೆಯಲ್ಲಿ ಮಸೂದೆ ಮಂಡಿಸಿ ಅನುಮೋದನೆ ನೀಡಲಾಗುವುದು. ಇದಕ್ಕೆ ಹಲವಾರು ಏಜೆನ್ಸಿಗಳ ಸಮನ್ವಯದಲ್ಲಿ ಕೆಲಸ ಮಾಡಬೇಕಿದೆ. ಈಗ ಬಹಳಷ್ಟು ಕಡೆ ಸಮನ್ವಯದ ಕೊರತೆಯಿಂದ ಬಾಕಿ ಕೆಲಸಗಳು ಬಾಕಿ ಉಳಿದಿವೆ. ಒಂದೇ ಪ್ರಾಧಿಕಾರ ರಚಿಸಬೇಕೆಂಬ ಕಾನೂನು ಜಾರಿಮಾಡಲಾಗುವುದು ಎಂದು ಹೇಳಿದರು.
ಹೊಸ ರಾಷ್ಟ್ರೀಯ ಹೆದ್ದಾರಿ: ದಕ್ಷಿಣ ಕನ್ನಡ ಜಿಲ್ಲೆ ಸಹಿತ ಕರಾವಳಿ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಶಿರಡಿ ಘಾಟ್ ರಸ್ತೆಯನ್ನು ವೇಗವಾಗಿ ಪೂರ್ಣಗೊಳಿಸುವುದು. ಅಲ್ಲದೆ, ಹೊಸ ರಾಷ್ಟ್ರೀಯ ಹೆದ್ದಾರಿ ಬಗ್ಗೆ ಪ್ರಸ್ತಾವನೆಗಳನ್ನು ಕೇಂದ್ರ ರಸ್ತೆ ನಿಧಿಯಡಿ ತರಲಾಗುತ್ತಿದೆ' ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
----------------------------------------
‘ಜನಸ್ಪಂದನೆ ಕಾರ್ಯಕ್ರಮಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು ನಾಳೆ(ಸೆ.10) ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಆಗಮಿಸುವ ಕುರಿತು ಇನ್ನೂ ಖಾತ್ರಿ ಆಗಬೇಕಿದೆ. ಆದರೆ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಆಗಮಿಸಲಿದ್ದಾರೆ'
-ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ