ರಾಯಚೂರು: 'ಭಾರತ್ ಜೋಡೋ ಯಾತ್ರೆ' ಪೂರ್ವಭಾವಿ ಸಭೆಯ ಬ್ಯಾನರ್ ನಲ್ಲಿ ಸಿದ್ದರಾಮಯ್ಯ ಭಾವಚಿತ್ರ ನಾಪತ್ತೆ!
ಡಿಕೆಶಿ ಪ್ರತಿಕ್ರಿಯಿಸಿದ್ದು ಹೀಗೆ...
Photo - twitter@KeypadGuerilla
ರಾಯಚೂರು: 'ಭಾರತ್ ಜೋಡೋ ಯಾತ್ರೆ' ಪೂರ್ವಭಾವಿ ಸಭೆಯ ಬ್ಯಾನರ್ ಒಂದರಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಭಾವಚಿತ್ರ ನಾಪತ್ತೆಯಾಗಿದೆ.
ರಾಯಚೂರು ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಚೇರಿಯಲ್ಲಿ ಇಂದು (ಸೋಮವಾರ) ಆಯೋಜಿಸಿದ್ದ 'ಭಾರತ್ ಜೋಡೋ ಯಾತ್ರೆ' ಇದರ ಪೂರ್ವಭಾವಿ ಸಿದ್ಧತೆ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಭಾಗವಹಿಸಿದ್ದರು. ಆದರೆ, ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷನಾಯಕ ಸಿದ್ದರಾಮಯ್ಯ ಅವರ ಭಾವಚಿತ್ರ ಬ್ಯಾನರ್ನಲ್ಲಿ ನಾಪತ್ತೆಯಾಗಿರುವುದು ಚರ್ಚೆಗೆ ಕಾರಣವಾಗಿದೆ.
ಈ ಸಂಬಂಧ ಸಭೆ ಬಳಿಕ ಪರ್ತಕರ್ತರ ಪ್ರಶ್ನೆಗೆ ಪ್ರತಿಕ್ರಿಯಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ' ನಾನು ನನ್ನ ಫೋಟೋನೂ ಹಾಕಬೇಡಿ ಅಂದಿದ್ದೆ. ಫೋಟೋನೇ ರಾಜಕೀಯ ಅಲ್ಲ. ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರು. ಅವರ ಕೆಲಸ ಅವರು ಮಾಡುತ್ತಿದ್ದಾರೆ, ಅವರು ಇಲ್ಲಿಗೆ ಬಂದಾಗ ಅವರ ಫೋಟೋ ಹಾಕುತ್ತಾರೆ' ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಇದೇ ವೇಳೆ ಮಾತನಾಡಿದ ಅವರು, 'ಅ. 16 ರಂದು ಎಐಸಿಸಿ ಮತ್ತು ಕೆಪಿಸಿಸಿ ಅಧ್ಯಕ್ಷರ ಚುನಾವಣೆಯ ಮತದಾನ ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮತ್ತೆ ಸ್ಪರ್ಧಿಸುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಪಕ್ಷದ ಮುಖಂಡರ ಅಭಿಪ್ರಾಯದ ಮೇರೆಗೆ ನಿರ್ಧರಿಸುತ್ತೇನೆ' ಎಂದು ತಿಳಿಸಿದರು.