ಗರ್ಭಿಣಿಯರ ಮನೆ ಬಾಗಿಲಿಗೆ ಬಿಸಿಯೂಟ: ಸಚಿವ ಹಾಲಪ್ಪ ಆಚಾರ್
ಬೆಂಗಳೂರು, ಸೆ.13: ಮಾತೃಪೂರ್ಣ ಯೋಜನೆಯಡಿ 8 ತಿಂಗಳು ತುಂಬಿದ ಗರ್ಭಿಣಿಯರಿಗೆ ಹಾಗೂ ಹೆರಿಗೆಯಾದ 45 ದಿನಗಳ ತನಕ ಬಾಣಂತಿಯರಿಗೆ ಬಿಸಿಯೂಟ ಅಥವಾ ಆಹಾರ ಪದಾರ್ಥಗಳನ್ನು ಮನೆಗೆ ಕೊಂಡೊಯ್ಯಲು ಅವಕಾಶ ಮಾಡಿಕೊಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್ ತಿಳಿಸಿದ್ದಾರೆ.
ಮಂಗಳವಾರ ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಮಂಜುನಾಥ್ ಭಂಡಾರಿ ಅವರ ಪ್ರಶ್ನೆಗೆ ಪೂರಕವಾಗಿ ಭಾರತಿ ಶೆಟ್ಟಿ, ತೇಜಸ್ವಿನಿಗೌಡ, ಪಿ.ಆರ್.ರಮೇಶ್ ಸೇರಿದಂತೆ ಅನೇಕ ಸದಸ್ಯರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೇಂದ್ರ ಸರಕಾರದ ಅನುದಾನದಡಿ 21 ರೂ.ವೆಚ್ಚದಲ್ಲಿ ಪೌಷ್ಟಿಕ ಬಿಸಿಯೂಟ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಬಿಸಿಯೂಟ ಯೋಜನೆಯಡಿ ಅನ್ನ ಸಾಂಬಾರ್, ಪಲ್ಯ, ಒಂದು ಮೊಟ್ಟೆ, 200 ಎಂ.ಎಲ್ ಹಾಲು ಮತ್ತು ಶೇಂಗಾ ಚಿಕ್ಕಿ ನೀಡಲಾಗುತ್ತಿದೆ. ಆಹಾರ ಕೊಂಡೊಯ್ಯಲು ಸಾಧ್ಯವಾಗದ ಗರ್ಭಿಣಿಯರು, ಬಾಣಂತಿಯರಿಗೆ ಅವರ ಕುಟುಂಬದ ಸದಸ್ಯರ ಮೂಲಕ ಮನೆಗೆ ಕೊಂಡೊಯ್ಯಲು ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದರು.
ಅಂಗನವಾಡಿ ಕೇಂದ್ರದಲ್ಲಿ ಬಿಸಿಯೂಟ ಸೇವಿಸಬಹುದು ಅಥವಾ ಮನೆಗೆ ಕೊಂಡೊಯ್ಯಬಹುದು ಎನ್ನುವ ಸಚಿವ ಆಚಾರ್ ಹಾಲಪ್ಪ ಅವರ ಹೇಳಿಕೆಯನ್ನು ಆಡಳಿತ ಪಕ್ಷದ ಸದಸ್ಯರಾದ ಭಾರತಿ ಶೆಟ್ಟಿ, ತೇಜಸ್ವಿನಿಗೌಡ ಆಕ್ಷೇಪಿಸಿ, ಒಂದೊಂದು ರೀತಿಯ ನಿಯಮ ಜಾರಿ ಮಾಡಲು ಸಾಧ್ಯವಿಲ್ಲ. ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಪೌಷ್ಟಿಕ ಆಹಾರ ನೀಡಲು ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು. ರಾಜ್ಯದಲ್ಲಿ ಎಲ್ಲೇ ಹೋದರೂ ಉಗಿಸಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಅದಕ್ಕೆ ಅವಕಾಶ ಮಾಡಿಕೊಡದೆ ಪೌಷ್ಟಿಕ ಆಹಾರ ನೀಡಿ ಎಂದು ಮನವಿ ಮಾಡಿದರು.
ಇದನ್ನೂ ಓದಿ: ಕಡಿಮೆ ವಿದ್ಯಾರ್ಹತೆಯ ಅಂಗನವಾಡಿ ಕಾರ್ಯಕರ್ತೆಯರನ್ನು ಕೆಲಸದಿಂದ ತೆಗೆದುಹಾಕಲ್ಲ: ಸಚಿವ ಹಾಲಪ್ಪ ಆಚಾರ್