ಕಲಬುರಗಿ ಪಾಲಿಕೆಗೆ ಆಯ್ಕೆಯಾದ ಮತ್ತೊಬ್ಬ ಬಿಜೆಪಿ ಅಭ್ಯರ್ಥಿಯ ಸದಸ್ಯತ್ವ ಅಸಿಂಧು
ಶಂಭುಲಿಂಗ ಬಳಬಟ್ಟಿ
ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ವಾರ್ಡ್ ನಂ.36ರಲ್ಲಿ ಗೆಲುವು ಕಂಡಿದ್ದ ಪಕ್ಷೇತರ ಅಭ್ಯರ್ಥಯಾಗಿ ಸ್ಪರ್ಧಿಸಿ ಬಳಿಕ ಬಿಜೆಪಿ ಸೇರಿದ್ದ ಶಂಭುಲಿಂಗ ಬಳಬಟ್ಟಿ ಆಯ್ಕೆ ಅಸಿಂಧು ಎಂದು ಕಲಬುರಗಿ 3ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಆದೇಶ ನೀಡಿದೆ.
ಸುಳ್ಳು ಅಫಿಡವಿಟ್ ಸಲ್ಲಿಸಿದ್ದರಿಂದ ಆಯ್ಕೆ ಅಸಿಂಧು ಎಂದು ಆದೇಶ ನೀಡಿದೆ. ನಾಮಪತ್ರ ಸಲ್ಲಿಸುವಾಗ ಆಸ್ತಿ, ವಿದ್ಯಾರ್ಹತೆ ಸೇರಿದಂತೆ ಅನೇಕ ವಿಷಯಗಳ ಕುರಿತು ಮಾಹಿತಿ ನೀಡಿರಲಿಲ್ಲ ಎಂದು ಆರೋಪಿಸಿ ಬಿಜೆಪಿ ಅಭ್ಯರ್ಥಿ ಆರತಿ ತಿವಾರಿ ಕೋರ್ಟ್ ಮೊರೆ ಹೋಗಿದ್ದರು. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದ ಶಂಭುಲಿಂಗ ಅವರು ನಂತರದ ದಿನಗಳಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು.
ಇತ್ತೀಚೆಗೆ ಕಲಬುರಗಿ ಪಾಲಿಕೆಯ ವಾರ್ಡ್ ಸಂಖ್ಯೆ 24ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿದ್ದ ಪ್ರಿಯಾಂಕಾ ಅಂಬರೀಶ್ ಅವರು, ಸುಳ್ಳು ಮಾಹಿತಿ ನೀಡಿ ಸ್ಪರ್ಧಿಸಿದ್ದರಿಂದ ಸದಸ್ಯತ್ವ ರದ್ದುಗೊಳಿಸಿ ಕಲಬುರಗಿ 3ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಆದೇಶ ನೀಡಿತ್ತು. ಬಳಿಕ ಕೆಎಂಸಿ ಕಾಯಿದೆಯ ಸೆಕ್ಷನ್ 26(1)(ಜೆ) ಮತ್ತು ಭಾರತ ಸಂವಿಧಾನದ 243(ವಿ) ಕಲಂ ನಿಯಮದ ಪ್ರಕಾರ ಎರಡನೇ ಅಭ್ಯರ್ಥಿ (ಪಕ್ಷೇತರ) ಸೈಯದಾ ನೂರ್ ಫಾತಿಮಾ ಝೈದಿ ಪಾಲಿಕೆ ನೂತನ ಸದಸ್ಯತ್ವ ನೀಡಬೇಕೆಂದು ನ್ಯಾಯಾಲಯ ಆದೇಶ ಹೊರಡಿಸಿತ್ತು.
ಇದನ್ನೂ ಓದಿ: ಕಲಬುರಗಿ BJP ಕಾರ್ಪೊರೇಟರ್ ಸದಸ್ಯತ್ವ ರದ್ದು: ಸೈಯದಾ ನೂರ್ ಫಾತಿಮಾ ಝೈದಿ ನೂತನ ಸದಸ್ಯೆ
ಇದೀಗ ಪಾಲಿಕೆಯಲ್ಲಿ ಬಿಜೆಪಿ ಬಲ ಕಡಿಮೆಯಾಗಿದ್ದು, ಸದ್ಯ ಕಾಂಗ್ರೆಸ್ 27, ಬಿಜೆಪಿ 22, ಜೆಡಿಎಸ್-4, ಪಕ್ಷೇತರ -1 ಇದೆ.ಈಗಾಗಲೇ ಚುನಾವಣೆಯಾಗಿ ಹಲವು ತಿಂಗಳು ಕಳೆದರೂ ಈವರೆಗೆ ಮೇಯರ್ ಚುನಾವಣೆ ನಡೆದಿಲ್ಲ. ಇದೀಗ ಕೋರ್ಟ್ ಮತ್ತೆ ಅಸಿಂಧು ಆದೇಶ ನೀಡಿರುವುದರಿಂದ ಮುಂದೇನು? ಎಂಬುದನ್ನುಕಾದು ನೋಡಬೇಕಿದೆ.