ಕೆರೆಗಳ ಒತ್ತುವರಿ, ಮುಚ್ಚಿರುವ ಬಗ್ಗೆ ತನಿಖೆಗೆ ಸರಕಾರ ಸಿದ್ಧ: ಸಿಎಂ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಂಗಳೂರು, ಸೆ. 19: ‘ಬೆಂಗಳೂರು ನಗರದಲ್ಲಿ ಕೆರೆಗಳ ಒತ್ತುವರಿ ಹಾಗೂ ಮುಚ್ಚಿರುವ ಬಗ್ಗೆ ಸಮಗ್ರ ತನಿಖೆ ನಡೆಸಲು ರಾಜ್ಯ ಸರಕಾರ ಸಿದ್ಧವಿದೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಪ್ರಕಟಿಸಿದ್ದಾರೆ.
ಸೋಮವಾರ ವಿಧಾನಸಭೆಯಲ್ಲಿ ನಿಯಮ 69ರಡಿಯಲ್ಲಿ ರಾಜ್ಯದಲ್ಲಿ ಪ್ರವಾಹ ಮತ್ತು ಅತಿವೃಷ್ಟಿಯ ಸಮಸ್ಯೆಗಳ ಬಗ್ಗೆ ನಡೆದ ಸುದೀರ್ಘ ಚರ್ಚೆಗೆ ಕಂದಾಯ ಸಚಿವ ಆರ್.ಅಶೋಕ್ ಪ್ರಸ್ತಾಪವನ್ನು ವಿರೋಧಿಸಿದ ಕಾಂಗ್ರೆಸ್ಸಿನ ಕೆ.ಜೆ.ಜಾರ್ಜ್ ಅವರ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ‘ನಾನು ಯಾರ ವಿರುದ್ಧವೂ ವೈಯಕ್ತಿಕ ಆರೋಪ ಮಾಡುವುದಿಲ್ಲ. ನೀವು(ಜಾರ್ಜ್) ಈ ವಿಚಾರವನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ. ಆದರೆ, ನಗರದಲ್ಲಿ ಕೆರೆಗಳನ್ನು ಮುಚ್ಚಿರುವುದು ಮಾತ್ರ ಸತ್ಯ' ಎಂದು ಹೇಳಿದರು.
‘ಬೆಂಗಳೂರು ನಗರದಲ್ಲಿ ಕೆರೆಗಳ ಜಾಗವನ್ನು ಒತ್ತುವರಿ ಮಾಡಲಾಗಿದೆ. ಅಲ್ಲದೆ, ಹಲವು ಕೆರೆಗಳನ್ನು ಮುಚ್ಚಿದ್ದು, ಈ ಕುರಿತು ತನಿಖೆ ಮಾಡಿಯೇ ಮಾಡುತ್ತೇವೆ. ತನಿಖೆಯ ಸ್ವರೂಪದ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನಿಸಲಾಗುವುದು. ನಗರದಲ್ಲಿನ ಕೆರೆಗಳನ್ನು ಯಾವ ರೀತಿಯಲ್ಲಿ ಒತ್ತುವರಿ ಮಾಡಲಾಗಿದೆ. ಹೇಗೆ ಮುಚ್ಚಲಾಗಿದೆ. ಇದಕ್ಕೆ ಅನುಮತಿ ನೀಡಿದವರು ಯಾರು? ಈ ಎಲ್ಲ ವಿಚಾರಗಳ ಬಗ್ಗೆಯೂ ತನಿಖೆ ಆಗಲೇಬೇಕು' ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
‘ಕಾಲ ಕಾಲಕ್ಕೆ ಅಭಿವೃದ್ಧಿಯಾದಂತೆ ಕೆರೆಗಳನ್ನು ಮುಚ್ಚಲಾಗಿದೆ. ಸುಧಾರಣೆ ಹೆಸರಿನಲ್ಲಿ ಹಿಂದೆ ಆಗಿರುವ ತಪ್ಪುಗಳನ್ನು ಮುಂದೆ ಆಗದಂತೆ ನೋಡಿಕೊಳ್ಳಬೇಕಿದೆ. ಅದಕ್ಕಾಗಿ ಯಾವ ಯಾವ ಕಾಲದಲ್ಲಿ ಯಾವ ಸಂದರ್ಭದಲ್ಲಿ ಕೆರೆಗಳನ್ನು ಮುಚ್ಚಲಾಗಿದೆ ಎಂಬುದನ್ನು ತನಿಖೆ ಮಾಡಿಸಿ, ಇದರ ಜತೆಗೆ ಒತ್ತುವರಿ ಬಗ್ಗೆಯೂ ತನಿಖೆ ನಡೆಸಲಾಗುತ್ತದೆ. ಯಾರ ರಾಜಕೀಯ ಬೆಂಬಲದಿಂದ ಕೆರೆಗಳನ್ನು ಮುಚ್ಚಲಾಗಿದೆ. ಆಗ ಯಾರು ಅಧಿಕಾರಿಗಳಿದ್ದರು, ಯಾರು ಅಲ್ಲಿ ಬೇನಾಮಿ ಆಸ್ತಿ ಮಾಡಿದ್ದಾರೆ. 2007ರ ನಂತರ ಯಾರು ಯಾರು ಕೆರೆ ಜಾಗಗಳನ್ನು ಒತ್ತುವರಿ ಮಾಡಿದ್ದಾರೆಂಬ ಬಗ್ಗೆ ತನಿಖೆ ನಡೆಯಲಿದೆ' ಎಂದರು.
‘ಕೆರೆ ಮತ್ತು ಗೋಮಾಳ ಒತ್ತುವರಿಯಾಗುತ್ತಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಅವುಗಳ ರಕ್ಷಣೆಗೆ ಅಗತ್ಯ. ಬಡವರ ಒತ್ತುವರಿ ಮಾತ್ರ ತೆರವುಗೊಳಿಸಿ ಶ್ರೀಮಂತರನ್ನು ರಕ್ಷಣೆ ಮಾಡುತ್ತಾರೆಂಬ ಆರೋಪವಿದೆ. ವ್ಯವಸ್ಥೆ ಕೆಟ್ಟಿದೆ. ಹಿಂದಿನ ಸರಕಾರದ ಅವಧಿಯಲ್ಲಿ ‘ನಿರ್ಜೀವ ಕೆರೆ'ಗಳನ್ನು ನಕಾಶೆಯಿಂದ ತೆಗೆಯಬೇಕೆಂಬ ಪ್ರಯತ್ನ ನಡೆದಿತ್ತು. ಆದರೆ, ಜನರ ಒತ್ತಡ ಹಿನ್ನೆಲೆಯಲ್ಲಿ ಅದನ್ನು ವಾಪಸ್ ಪಡೆಯಲಾಯಿತು' ಎಂದು ಬೊಮ್ಮಾಯಿ ತಿಳಿಸಿದರು.
ತಪ್ಪಿದ್ದರೆ ತನಿಖೆ ಮಾಡಿ, ಶಿಕ್ಷೆ ಕೊಡಿ: ಆರಂಭಕ್ಕೆ ಮಾತನಾಡಿದ ಕಾಂಗ್ರೆಸ್ ಸದಸ್ಯ ಕೆ.ಜೆ.ಜಾರ್ಜ್, ‘ಬಿಜೆಪಿಯವರು ನಗರದಲ್ಲಿ ನಾನೇ ಕೆರೆಗಳನ್ನು ಒತ್ತುವರಿ ಮಾಡಿದ್ದೇನೆ, ಕೆರೆಗಳನ್ನು ಮುಚ್ಚಿದ್ದೇನೆ' ಎಂದು ಟ್ರೋಲ್ ಮಾಡುತ್ತಿದ್ದಾರೆ. ಆದರೆ, ಈ ಹಿಂದೆ ನಿರ್ಜೀವ ಕೆರೆಗಳನ್ನು ಮುಚ್ಚಿ ಅಭಿವೃದ್ಧಿ ಕಾರ್ಯಗಳಿಗೆ ಸರಕಾರವೇ ಬಳಕೆ ಮಾಡಿಕೊಂಡಿದೆ. ಹಲವು ಕಡೆಗಳಲ್ಲಿ ಬಸ್ ನಿಲ್ದಾಣ ಹಾಗೂ ಬಡಾವಣೆಗಳನ್ನು ನಿರ್ಮಿಸಿದೆ' ಎಂದು ಹೇಳಿದರು.
‘ನಾನು ಸಚಿವನಾಗಿದ್ದ ಅವಧಿಯಲ್ಲಿ ಯಾವ ಕೆರೆಯನ್ನು ಮುಚ್ಚಿದ್ದೇನೆಂದು ಹೇಳಿ. ನಾನು ಒಂದೇ ಒಂದು ಕೆರೆ ಮುಚ್ಚಿಲ್ಲ. ಯಾವುದೇ ಕೆರೆಯನ್ನು ನಾನೂ ಒತ್ತುವರಿ ಮಾಡಿಲ್ಲ. ಯಾವುದೇ ತನಿಖೆ ಮಾಡಿ' ಎಂದು ಸವಾಲು ಹಾಕಿದ ಕೆ.ಜೆ.ಜಾರ್ಜ್, ‘ನಾನೇನಾದರೂ ಕಾನೂನು ಬಾಹಿರವಾಗಿ ಕೆರೆ ಒತ್ತುವರಿ ಮಾಡಿದ್ದರೆ ಅಥವಾ ಮುಚ್ಚಿದ್ದರೆ ತನಿಖೆ ಮಾಡಿ. ತಪ್ಪು ಮಾಡಿದರೆ ಶಿಕ್ಷೆ ಕೊಡಿ, ಅದನ್ನು ಬಿಟ್ಟು ಚುನಾವಣೆ ಸಮೀಪದಲ್ಲಿರುವ ಸಂದರ್ಭದಲ್ಲಿ ದುರುದ್ದೇಶದಿಂದ ಆರೋಪ ಮಾಡುವುದು ಸರಿಯಲ್ಲ' ಎಂದು ಆಕ್ಷೇಪಿಸಿದರು.
ತನಿಖೆಗೆ ಸ್ವಾಗತ: ಕೆರೆ ಒತ್ತುವರಿ ಮತ್ತು ಮುಚ್ಚಿರುವುದರ ಕುರಿತು ತನಿಖೆ ಮಾಡಿಸಿದರೆ ಸ್ವಾಗತ. ಇಲ್ಲಿನ ಶಾಂತಿನಗರ ಬಸ್ ನಿಲ್ದಾಣ ಹಾಗೂ ಕಂಠೀರವ ಸ್ಟೇಡಿಯಂ ಸೇರಿದಂತೆ ಹಲವು ಕಡೆಗಳಲ್ಲಿ ಕೆರೆ ಜಾಗದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಲಾಗಿದೆ. ಬೆಂಗಳೂರು ನಗರವನ್ನು ಯಾವುದೇ ಕಾರಣಕ್ಕೂ ಹದಗೆಡಲು ಬಿಡಬಾರದು. ಈಗಾಗಲೇ ಹಾಳಾಗುತ್ತಿದೆ, ಅದನ್ನು ತಡೆಯಬೇಕು. ಇದು ನಮ್ಮ-ನಿಮ್ಮೆಲ್ಲರ ಜವಾಬ್ದಾರಿ' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಈ ವೇಳೆ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಆರೋಪ-ಪ್ರತ್ಯಾರೋಪ ನಡೆಯಿತು.
ನೀವೇಕೆ ಹೆಗಲು ಮುಟ್ಟಿ ನೋಡುತ್ತೀರಿ?: ನಗರದಲ್ಲಿನ ಕೆರೆ ಒತ್ತುವರಿ ಅಥವಾ ಮುಚ್ಚಿರುವ ಬಗ್ಗೆ ನಾನು ಯಾರ ವಿರುದ್ಧವೂ ಆರೋಪ ಮಾಡಿಲ್ಲ. ‘ಕುಂಬಳಕಾಯಿ ಕಳ್ಳ ಎಂದರೆ ನೀವೇಕೆ ಹೆಗಲು ಏಕೆ ಮುಟ್ಟಿ ನೋಡಿಕೊಳ್ತೀರಿ', ಕೆರೆಗಳನ್ನು ಮುಚ್ಚಿದ ಬಗ್ಗೆ ತನಿಖೆ ಮಾಡುತ್ತೇವೆ. ನಿಮಗೆ ಏಕೆ ಗಾಬರಿ. ನೀವು ತಪ್ಪು ಮಾಡಿಲ್ಲ ಎಂದರೆ ಭಯಪಡುವ ಅಗತ್ಯವೇನು' ಎಂದು ಬಸವರಾಜ ಬೊಮ್ಮಾಯಿ ಕೆಣಕಿದರು. ಇದಕ್ಕೆ ಆಕ್ಷೇಪಿಸಿದ ಜಾರ್ಜ್, ‘ಈ ಹಿಂದೆ ಶಿವಮೊಗ್ಗದಲ್ಲಿ ನಿರ್ಜೀವ ಕೆರೆ ಜಾಗವನ್ನು ಬಳಕೆ ಮಾಡಿಕೊಳ್ಳುವ ಸಂಬಂಧ ಆದೇಶವನ್ನು ಹೊರಡಿಸಲಾಗಿತ್ತು' ಎಂದು ಉಲ್ಲೇಖಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಬಸವರಾಜ ಬೊಮ್ಮಾಯಿ, ‘ಕಂದಾಯ ಇಲಾಖೆಯಿಂದ ಆದೇಶವೊಂದು ಹೊರಬಿದ್ದಿತ್ತು. ನೀರು ಹರಿಯುವುದು ನಿಂತ ನಿರ್ಜೀವ ಕೆರೆಗಳನ್ನು ಪುನಶ್ಚೇತನದ ಬದಲಿಗೆ ಆ ಜಾಗವನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳುವ ಸಂಬಂಧ ಸರಕಾರ ತೀರ್ಮಾನಿಸಿತ್ತು. ಅದಕ್ಕೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದ್ದರಿಂದ ಅದನ್ನು ಕೈಬಿಡಲಾಯಿತು. ಕಾಂಗ್ರೆಸ್ನವರು ಕೆರೆಗಳನ್ನು ಮುಚ್ಚುವುದಕ್ಕೆ ಹೆಚ್ಚು ಆಸಕ್ತಿ ಹೊಂದಿದ್ದರು ಎಂಬುದು ಸತ್ಯ' ಎಂದು ತಿರುಗೇಟು ನೀಡಿದರು. ಇದರಿಂದ ಆಡಳಿತ ಮತ್ತು ವಿಪಕ್ಷಗಳ ಮಧ್ಯೆ ಆರೋಪ, ಕೋಲಾಹಲ ನಡೆಯಿತು. ಹೀಗಾಗಿ ಸ್ಪೀಕರ್ ಸದನವನ್ನು ಭೋಜನ ವಿರಾಮಕ್ಕೆ ಮುಂದೂಡಿದರು.
‘ಮೈಸೂರು ನಗರದಲ್ಲೂ ಕರೆ ಒತ್ತುವರಿ ಆಗಿದ್ದು ಆ ಬಗ್ಗೆಯೂ ತನಿಖೆ ಮಾಡಿಸಿ, ಯಾವ ಅಧಿಕಾರಿ, ರಾಜಕಾರಣಿ ಭಾಗಿಯಾಗಿದ್ದರೆ ಶಿಕ್ಷೆ ಕೊಡಿಸಿ. ಭವಿಷ್ಯದ ದೃಷ್ಟಿಯಿಂದ ಕೆರೆಗಳನ್ನು ಉಳಿಸಿಕೊಳ್ಳಬೇಕಿದೆ. ಕೆರೆ ಒತ್ತುವರಿ ಮತ್ತು ಮುಚ್ಚಿರುವುದು ಬಹಳ ಹಿಂದಿನಿಂದಲೂ ನಡೆಯುತ್ತಿದೆ'
-ಜಿ.ಟಿ.ದೇವೇಗೌಡ, ಜೆಡಿಎಸ್ ಸದಸ್ಯ
‘ನಗರದ ಕೆರೆಗಳ ಒತ್ತುವರಿ ಸಂಬಂಧ ಲಕ್ಷ್ಮಣರಾವ್ ನೇತೃತ್ವದ ಸಮಿತಿ ವರದಿ ನೀಡಿದ್ದು ಬೆಂಗಳೂರಿನಲ್ಲಿ 262 ಕೆರೆಗಳಿವೆ ಎಂದು ಹೇಳಿದ್ದರು. 800 ಕಿ.ಮೀ. ಮಳೆ ನೀರು ಕಾಲುವೆಗಳಿವೆ. ಅದು ಸುಧಾರಣೆಯಾಗಬೇಕು. ರಾಜಕಾಲುವೆ ಇನ್ನೂ 600 ಕಡೆಗಳಲ್ಲಿ ಒತ್ತುವರಿ ತೆರವು ಬಾಕಿ ಇದೆ. ಅದನ್ನು ಕೂಡಲೇ ತೆರವುಗೊಳಿಸಬೇಕು. ಅದನ್ನು ಬಿಟ್ಟು ಸರಕಾರ ನನ್ನ ಕಾಲದಲ್ಲಿ ಕೆರೆ ಒತ್ತುವರಿ ಮಾಡಿದ್ದೇನೆ ಎಂದು ಸುಳ್ಳು ಆರೋಪ ಮಾಡುವುದು ಸರಿಯಲ್ಲ. ನಾನು ಏನಾದರೂ ತಪ್ಪು ಮಾಡಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗುತ್ತೇನೆ'
-ಕೆ.ಜೆ.ಜಾರ್ಜ್, ಕಾಂಗ್ರೆಸ್ ಸದಸ್ಯ
‘ಬೆಂಗಳೂರಿನಲ್ಲಿ ಕೆರೆಗಳ ಅಕ್ರಮ ಒತ್ತುವರಿ ಮತ್ತು ದುರ್ಬಳಕೆ ಕುರಿತು ತನಿಖೆ ನಡೆಸುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಯಾವೆಲ್ಲಾ ಕಾಲದಲ್ಲಿ ಕೆರೆಗಳ ಒತ್ತುವರಿ ಆಗಿದೆ? ಅದರ ಉದ್ದೇಶ ಏನಿತ್ತು? ಆಗ ಕೆರೆಗಳ ಸ್ಥಿತಿಗತಿ ಏನಾಗಿತ್ತು? ಈಗ ಏನಾಗಿದೆ? ಈ ಎಲ್ಲವನ್ನು ಒಳಗೊಂಡ ಒಂದು ವಿಸ್ತೃತ ತನಿಖೆ ನಡೆದು, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ'
-ಸಿದ್ದರಾಮಯ್ಯ, ವಿಪಕ್ಷ ನಾಯಕ