ಸಿಆರ್ಝೆಡ್ ಯೋಜನೆ ಅನುಮೋದನೆ ಕರಾವಳಿ ಪ್ರವಾಸೋದ್ಯಮ ಉತ್ತೇಜನಕ್ಕೆ ಬೂಸ್ಟ್: ಸಚಿವ ಆನಂದ್ ಸಿಂಗ್
''ಅನುಮೋದನೆ ಪಡೆದ ದೇಶದ 2ನೇ ಹಾಗೂ ದಕ್ಷಿಣ ಭಾರತದ ಮೊದಲ ರಾಜ್ಯ ಕರ್ನಾಟಕ''
ಬೆಂಗಳೂರು, ಸೆ.28: 'ಕರಾವಳಿ ನಿಯಂತ್ರಣ ವಲಯದ(ಸಿಆರ್ಝೆಡ್) 2019ರ ಪ್ರಸ್ತಾವನೆಗೆ ಅನುಮೋದನೆ ಪಡೆದ ದೇಶದ ಎರಡನೇ ಹಾಗೂ ದಕ್ಷಿಣ ಭಾರತದ ಮೊದಲ ರಾಜ್ಯ ಕರ್ನಾಟಕವಾಗಿದ್ದು, ಈ ಪ್ರದೇಶಗಳಲ್ಲಿ ಇನ್ಮುಂದೆ ಪ್ರವಾಸೋದ್ಯಮ ಚಟುವಟಿಕೆಗಳನ್ನು ಕೈಗೊಳ್ಳಲು ಹೆಚ್ಚಿನ ಅವಕಾಶಗಳು ದೊರೆತಂತಾಗಿದೆ' ಎಂದು ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಖಾತೆ ಸಚಿವ ಆನಂದ್ ಸಿಂಗ್ ಹೇಳಿದರು.
ವಿಶ್ವ ಪ್ರವಾಸೋದ್ಯಮ ದಿನಾಚರಣೆ ಹಿನ್ನೆಲೆಯಲ್ಲಿ ವಿಧಾನಸೌಧದ ಬ್ಯಾಕ್ವೆಂಟ್ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರ್ಕಾರದ ನಿರಂತರ ಪ್ರಯತ್ನದಿಂದಾಗಿ ಸಿಆರ್ಝೆಡ್ 2019ರ ಅಧಿಸೂಚನೆ ಅನುಷ್ಠಾನಕ್ಕೆ ಅವಶ್ಯವಿದ್ದ ಕರಾವಳಿ ವಲಯ ನಿರ್ವಹಣಾ ಯೋಜನೆಗೆ ತ್ವರಿತಗತಿಯಲ್ಲಿ ಅನುಮೋದನೆ ಪಡೆದುಕೊಳ್ಳಲಾಗಿದೆ. ಈ ಯೋಜನೆ ಅನುಷ್ಠಾನದಿಂದ ಇನ್ನು ಮುಂದೆ ರಾಜ್ಯದಲ್ಲಿ ಸಮುದ್ರ ತೀರ ಪ್ರದೇಶದ ಪ್ರವಾಸಿ, ವಾಣಿಜ್ಯೋದ್ಯಮದ ಚಟುವಟಿಕೆಗಳು ಗರಿಗೆದರಲಿವೆ.
ಕೋವಿಡ್ ಪಿಡುಗು ನಮ್ಮ ಪ್ರವಾಸೋದ್ಯಮ ವಲಯಕ್ಕೆ ಮಾರಣಾಂತಿಕ ಹೊಡೆತವನ್ನು ವಿಶ್ವದಾದ್ಯಂತ ನೀಡಿತ್ತು, ಇದಕ್ಕೆ ನಮ್ಮ ರಾಜ್ಯ ಕೂಡ ಹೊರತಲ್ಲ. ಆದರೂ, ನಮ್ಮ ರಾಜ್ಯದಲ್ಲಿ ಪ್ರವಾಸೋದ್ಯಮ ವಲಯವು ತೀವ್ರಗತಿಯಲ್ಲಿ ಚೇತರಿಕೆ ಕಂಡಿದೆ. ಈ ನಿಟ್ಟಿನಲ್ಲಿ ‘ಪ್ರವಾಸೋದ್ಯಮ ಪುನರಾವಲೋಕನ’ ಎಂಬ ಈ ವರ್ಷದ ಸಂದೇಶವು ಸಂದರ್ಬೋಚಿತವು ಮತ್ತು ಸಮ ಯೋಚಿತವು ಆಗಿದೆ ಎಂದರು.
ಕರ್ನಾಟಕ ಪ್ರವಾಸೋದ್ಯಮನೀತಿ (ಪರಿಷ್ಕೃತ), 2020-26 ಅನ್ನು ಬಿಡುಗಡೆ ಮಾಡಲಾಗಿದ್ದು, ಆದ್ಯತೆಯ ಮೇರೆಗೆ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವುದಕ್ಕಾಗಿ 17 ಜಿಲ್ಲೆಗಳನ್ನು ಹಾಗೂ ಇತರೆ ಪ್ರಮುಖ ಪ್ರವಾಸಿತಾಣಗಳನ್ನು ‘ಆದ್ಯತಾ ಪ್ರವಾಸೋದ್ಯಮ ತಾಣಗಳು’ ( Focussed Tourism Destinations) ಎಂದು ಗುರುತಿಸಿದ್ದು, ಇದರಿಂದಾಗಿ ಹೆಚ್ಚಿನ ಬಂಡವಾಳ ಹೂಡಿಕೆಯಾಗಲಿದ್ದು, ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯಲಿವೆ.
ಕೇಂದ್ರ ಸರ್ಕಾರದ ಸ್ವದೇಶ ದರ್ಶನ 2.೦ ಅಡಿ ರಾಜ್ಯದ ಐದು ಪ್ರವಾಸಿ ತಾಣಗಳನ್ನು ಅಂದಾಜು ರೂ.5೦೦ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಕೇಂದ್ರ ಸರ್ಕಾರದಪರ್ವತ ಮಾಲಾ ಯೋಜನೆಯಡಿ ರಾಜ್ಯದ 15 ಪ್ರವಾಸಿ ತಾಣಗಳಲ್ಲಿ ರೋಪ್ ವೇ ಅಳವಡಿಸಲು ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸಾರ್ವಜನಿಕ-ಖಾಸಗಿಸಹಭಾಗಿತ್ವದಡಿ ನಂದಿಬೆಟ್ಟ ಮತ್ತು ಅಂಜನಾದ್ರಿಯಲ್ಲಿರೋಪ್-ವೇ ಅಭಿವೃದ್ದಿಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ವಿಧಾನಸೌಧದ ಮುಂಭಾಗ ನಡೆದ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಇಲಾಖೆ ಕ್ಯಾರಾವ್ಯಾನ್ ವಾಹನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಆರ್.ಅಶೋಕ, ಕೆಎಸ್ಟಿಡಿಸಿ ಅಧ್ಯಕ್ಷ ಕಾ.ಪು.ಸಿದ್ಧಲಿಂಗಸ್ವಾಮಿ, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಎನ್.ವಿ.ಪ್ರಸಾದ್, ನಿರ್ದೇಶಕ ವೆಂಕಟೇಶ್, ಜೆಎಲ್ಆರ್ ಎಂಡಿ ಮನೋಜ್ ಕುಮಾರ್, ಕೆಎಸ್ಟಿಡಿಸಿ ಎಂಡಿ ಜಗದೀಶ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ರಾಜ್ಯದ ಪ್ರವಾಸಿ ತಾಣಗಳಲ್ಲಿ ಈಗಾಗಲೇ ಕರ್ತವ್ಯ ನಿರ್ವಹಿಸುತ್ತಿರುವ ಪ್ರವಾಸಿ ಮಾರ್ಗದರ್ಶಿಗಳಿಗೆ ಆರ್ಥಿಕ ಹಾಗೂ ಸಾಮಾಜಿಕ ಭದ್ರತೆ ಒದಗಿಸಲು ಪ್ರತೀ ತಿಂಗಳು ಒಬ್ಬ ಪ್ರವಾಸಿ ಮಾರ್ಗದರ್ಶಿಗೆ ತಲಾ ರೂ. 2000ದಂತೆ ಒಟ್ಟು 365 ನೊಂದಾಯಿತ ಪ್ರವಾಸಿ ಮಾರ್ಗದರ್ಶಿಗಳಿಗೆ ಪ್ರೋತ್ಸಾಹಧನವನ್ನು ಪ್ರವಾಸೋದ್ಯಮ ಇಲಾಖೆಯಿಂದ ಪಾವತಿಸಲಾಗುತ್ತಿದೆ. ಈ ಯೋಜನೆಯು ದೇಶದಲ್ಲಿ ಜಾರಿಗೊಳಿಸಿದ ಪ್ರಥಮ ರಾಜ್ಯವಾಗಿರುತ್ತದೆ ಎಂದು ಸಚಿವ ಆನಂದ್ ಸಿಂಗ್ ಅವರು ತಿಳಿಸಿದರು.
ಏನಿದು ಕ್ಯಾರಾವ್ಯಾನ್?
ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ವಿನೂತನ ಹೆಜ್ಜೆ ಇಟ್ಟಿದ್ದು, ಪ್ರವಾಸಿಗರಿಗಾಗಿ ನೂತನ ಕ್ಯಾರಾವ್ಯಾನ್ ವಾಹನ ಪರಿಚಯಿಸಿದೆ.
ಖಾಸಗಿ ಕಂಪನಿ ಪ್ರವಾಸಿಗರಿಗೆ ತಕ್ಕಂತೆ ಈ ಕ್ಯಾರಾವ್ಯಾನ್ ಡಿಸೈನ್ ಮಾಡಿದ್ದು, ಇಲ್ಲಿ ಮನೆಯ ವಾತಾವರಣ ಸೃಷ್ಟಿಸಲಾಗಿದೆ. ವ್ಯಾನ್ನಲ್ಲಿ ಅಡುಗೆ ಮನೆ, ಬೆಡ್ ರೂಮ್, ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ. ಈ ಕ್ಯಾರಾವ್ಯಾನ್ ಬಳಕೆ ಮಾಡುವ ಪ್ರವಾಸಿಗರು ಇದರಲ್ಲೇ ಯಾವುದೇ ಪ್ರವಾಸಿ ತಾಣಕ್ಕೆ ಭೇಟಿ ನೀಡಿ, ರಾತ್ರಿ ಸಮಯದಲ್ಲಿ ವ್ಯಾನ್ನಲ್ಲಿ ತಂಗುವ ವ್ಯವಸ್ಥೆ ಮಾಡಲಾಗಿದೆ. ರಾಜ್ಯದಲ್ಲಿರುವ ಜೆಎಲ್ಆರ್ (ಜಂಗಲ್ ಲಾಡ್ಜ್ ಅಂಡ್ ರೆಸಾರ್ಟ್) ಆವರಣದಲ್ಲಿ ಈ ವ್ಯಾನ್ಗಳಿಗಾಗಿಯೇ ಕ್ಯಾರಾವ್ಯಾನ್ ಪಾರ್ಕ್ ವ್ಯವಸ್ಥೆ ಕಲ್ಪಿಸಲಾಗಿದೆ. ಕೋವಿಡ್ನಿಂದಾಗಿ ಪ್ರವಾಸಿಗರು ಹೋಟೆಲ್ಗಳನ್ನು ಬಳಸಲು ಹಿಂದೇಟು ಹಾಕುತ್ತಿದ್ದರು. ಈ ಕ್ಯಾರಾವ್ಯಾನ್ ವ್ಯವಸ್ಥೆಯಿಂದಾಗಿ ಪ್ರವಾಸಿಗರಿಗೆ ಅನುಕೂಲವಾಗಲಿದೆ.