ತಂಬಾಕು ಉತ್ಪನ್ನಗಳ ಮೇಲೆ ವಿಪತ್ತು ತೆರಿಗೆ ವಿಧಿಸಿದ್ದ ಕೇಂದ್ರದ ಕ್ರಮ ಎತ್ತಿಹಿಡಿದ ಹೈಕೋರ್ಟ್
ಬೆಂಗಳೂರು, ಅ.6: ತಂಬಾಕು ಉತ್ಪನ್ನಗಳ ಮೇಲೆ ಅಬಕಾರಿ ಸುಂಕದೊಂದಿಗೆ ರಾಷ್ಟ್ರೀಯ ವಿಪತ್ತು ಆಕಸ್ಮಿಕ ತೆರಿಗೆ (ಎನ್ಸಿಸಿಡಿ) ವಿಧಿಸುವ ಕೇಂದ್ರ ಸರಕಾರದ ನಿರ್ಧಾರವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ಬೀಡಿ, ಸಿಗರೇಟ್ ಸೇರಿದಂತೆ ತಂಬಾಕು ಉತ್ಪನ್ನಗಳ ಮೇಲೆ ಅಬಕಾರಿ ಸುಂಕದೊಂದಿಗೆ ಎನ್ಸಿಸಿಡಿ ಶುಲ್ಕ ವಿಧಿಸಿದ್ದ ಕೇಂದ್ರ ಸರಕಾರದ ಕ್ರಮ ಪ್ರಶ್ನಿಸಿ ಘೋಡಾವತ್ ಪ್ಯಾಕರ್ಸ್ ಸೇರಿ ಮತ್ತಿತರರ ಕಂಪೆನಿಗಳು ಸಲ್ಲಿಸಿದ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ, ಕೇಂದ್ರದ ನಿರ್ಧಾರವನ್ನು ಎತ್ತಿಹಿಡಿದಿದೆ.
ತಂಬಾಕು ಮತ್ತು ತಂಬಾಕು ಉತ್ಪನ್ನಗಳ ಮೇಲೆ ಅಬಕಾರಿ ಸುಂಕದ ಜೊತೆಗೆ ಎನ್ಸಿಸಿಡಿ ವಿಧಿಸುವುದು ಸರಕಾರದ ಸಾರ್ವಜನಿಕ ನೀತಿಯ ವಿಷಯವಾಗಿದೆ. ಆ ರೀತಿ ತೆರಿಗೆ ವಿಧಿಸುವ ಅಧಿಕಾರ ಸರಕಾರಕ್ಕಿದೆ. ಈ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಕೇಂದ್ರೀಯ ಅಬಕಾರಿ ಕಾಯಿದೆ ರದ್ದುಗೊಳಿಸುವುದರಿಂದ, ಹಣಕಾಸು ಕಾಯಿದೆಯ ಏಳನೇ ಶೆಡ್ಯೂಲ್ನಡಿಯಲ್ಲಿ ನಿರ್ಧರಿಸಿದಂತೆ ಎನ್ಸಿಸಿಡಿ ಪಾವತಿಯಿಂದ ವಿನಾಯ್ತಿ ನೀಡಲಾಗದು ಎಂದು ಏಕಸದಸ್ಯಪೀಠ ಹೇಳಿದೆ.