ವಾರದೊಳಗೆ ಆ್ಯಂಬುಲೆನ್ಸ್ ಸಿಬ್ಬಂದಿಗೆ ವೇತನ: ಸಂಧಾನ ಸಭೆ ಯಶಸ್ವಿ
ಸಾಂದರ್ಭಿಕ ಚಿತ್ರ
ಬೆಂಗಳೂರು, ಅ.7: ಆರೋಗ್ಯ ಇಲಾಖೆ ಆಯುಕ್ತರು 108 ಆ್ಯಂಬುಲೆನ್ಸ್ ಸಿಬ್ಬಂದಿ ಹಾಗೂ ಜಿವಿಕೆ ನಡುವೆ ಶುಕ್ರವಾರ ನಡೆಸಿದ ಸಂಧಾನ ಸಭೆ ಯಶಸ್ವಿಯಾಗಿದೆ. ವಾರದೊಳಗೆ ವೇತನ ಕೊಡಿಸುವುದಾಗಿ ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಭರವಸೆ ಕೊಟ್ಟ ಬೆನ್ನಲ್ಲೇ ಕೆಲಸಕ್ಕೆ ಹಾಜರಾಗಲು ಆ್ಯಂಬುಲೆನ್ಸ್ನ ಆರೋಗ್ಯ ಸಿಬ್ಬಂದಿ ಮುಂದಾಗಿದ್ದಾರೆ.
ಆ್ಯಂಬುಲೆನ್ಸ್ ಸಿಬ್ಬಂದಿಗೆ 2 ತಿಂಗಳಿನಿಂದ ವೇತನ ನೀಡದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಆಯುಕ್ತರ ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು. ಸಭೆಯಲ್ಲಿ 108 ಆ್ಯಂಬುಲೆನ್ಸ್ ನೌಕರರ ಸಂಘದ ಮುಖಂಡರು ಹಾಗೂ ಜಿವಿಕೆ ಸಂಸ್ಥೆಯ ಕೆಲ ಅಧಿಕಾರಿಗಳು ಭಾಗವಹಿಸಿದ್ದರು.
ಸರಕಾರದಿಂದ ಬಿಡುಗಡೆ ಮಾಡಲಾದ ಹಣವನ್ನು ಆ್ಯಂಬುಲೆನ್ಸ್ ನಿರ್ವಹಣೆಯಂತಹ ಕೆಲಸಕ್ಕೆ ಬಳಸಲಾಗಿದೆ. ಈ ಪೈಕಿ ಉಳಿಕೆಯಾದ 4 ಕೋಟಿ ರೂ. ಡಿಸೆಲ್ಗೆ ಬೇಕಾಗುತ್ತದೆ. ಸಿಬ್ಬಂದಿ ವೇತನಕ್ಕೆ ಇನ್ನೂ 12 ರಿಂದ 16 ಕೋಟಿ ರೂ. ಬೇಕಾಗುತ್ತದೆ ಎಂದು ಜಿವಿಕೆ ಸಂಸ್ಥೆಯ ಸಿಬ್ಬಂದಿ ವಿವರಿಸಿದರು. ಈ ವಿಚಾರವನ್ನು ಸರಕಾರದ ಗಮನಕ್ಕೆ ತರಲಾಗುವುದು. ವಾರದೊಳಗೆ ವೇತನ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.