ಅಡಿಕೆ ಬೆಳೆಗಾರರು ಆತಂಕ ಪಡಬೇಡಿ, ಸರ್ಕಾರ ನಿಮ್ಮ ಪರವಾಗಿದೆ: ಗೃಹ ಸಚಿವ ಆರಗ ಜ್ಞಾನೇಂದ್ರ
ತೀರ್ಥಹಳ್ಳಿ: ಅಡಿಕೆ ಎಲೆ ಚುಕ್ಕೆ ರೋಗಬಾಧೆ ತಾಲೂಕಿನ ಆಗುಂಬೆ ಸೇರಿದಂತೆ ಹಲವೆಡೆ ಹರಡಿದ್ದು ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಸಂಸದ ಬಿ.ವೈ.ರಾಘವೇಂದ್ರ , ಕೃಷಿ ವಿಜ್ಞಾನಿಗಳ ಜೊತೆ ಆಗುಂಬೆ ಭಾಗದ ಕೆಲವು ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ರೈತರೊಂದಿಗೆ ಸಂವಾದ ನಡೆಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, 'ಅಡಿಕೆ ಬೆಳೆಗಾರರು ಆತಂತಕ್ಕೆ ಒಳಪಡಬೇಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರ ಅಡಿಕೆಬೆಳೆಗಾರರ ಪರವಿದೆ.ಈ ಗಾಗಲೇ ಸರ್ಕಾರದಿಂದ ಬೆಳೆಗಾರರಿಗೆ ಎಲೆಚುಕ್ಕಿರೋಗಕ್ಕೆ ಉಚಿತವಾಗಿ ಔಷಧಿ ನೀಡಲು ತೀರ್ಮಾನಿಸಿದ್ದು,ರಾಜ್ಯ ಸರ್ಕಾರ ಮೊದಲ ಕಂತು ನಾಲ್ಕು ಕೋಟಿ ಬಿಡುಗಡೆ ಮಾಡಿದೆ.ಎಲೆ ಚುಕ್ಕೆ ರೋಗದ ವಿಷಯದ ಬಗ್ಗೆ ಮತ್ತೊಮ್ಮೆ ಮುಖ್ಯಮಂತ್ರಿ ಬೊಮ್ಮಯಿ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಗಮನಕ್ಕೆ ತಂದು ರಾಜ್ಯ ಮತ್ತು ಕೇಂದ್ರದಿಂದ ಹೆಚ್ಚಿನ ಸಹಾಯ ನೀಡಲು ಪ್ರಯತ್ನಿಸುತ್ತೇನೆ' ಎಂದರು.
'ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ ಎಲೆಚುಕ್ಕೆ ರೋಗಕ್ಕೆ ಸೂಕ್ತ ಔಷಧಿಯ ಸಂಶೋಧನೆಯು ಕೃಷಿವಿಜ್ಞಾನಿಗಳು ಆರಂಭಿಸಿದ್ದಾರೆ. ಕೇಂದ್ರ ಸರ್ಕಾರದೊಂದಿಗೆ ಈಗಾಗಲೇ ಈ ಸಮಸ್ಯೆ ಬಗ್ಗೆ ಮಾತುಕತೆ ನೆಡೆದಿದೆ.ಮಲೆನಾಡಿನ ಅಡಿಕೆಬೆಳೆಗಾರರು ಭಯಪಡುವ ಅಗತ್ಯವಿಲ್ಲ' ಎಂದರು.
ಈ ಸಂದರ್ಭದಲ್ಲಿ ಸಂಸದ ಬಿ.ವೈ ರಾಘವೇಂದ್ರ, ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿ ಕುಲಪತಿ ಡಾ. ಆರ್.ಸಿ. ಜಗದೀಶ್ ಸೇರಿದಂತೆ ತೋಟಗಾರಿಕೆ ಇಲಾಖೆ ಅಧಿಕಾರಿಗಳಿದ್ದರು.