ರಾಜ್ಯ ಬಿಜೆಪಿ ಸರಕಾರ ಕೇವಲ ಭ್ರಷ್ಟಾಚಾರದಿಂದಲೇ ಸದ್ದು ಮಾಡುತ್ತಿದೆ: ರಾಯಚೂರಿನಲ್ಲಿ ರಾಹುಲ್ ಗಾಂಧಿ
ರಾಹುಲ್ಗಾಂಧಿ ಜೊತೆ ಹೆಜ್ಜೆ ಹಾಕುತ್ತಿರುವ ಮಾಜಿ ಸೈನಿಕರು
ರಾಯಚೂರು, ಅ. 22: ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ನಾಯಕ ರಾಹುಲ್ಗಾಂಧಿ ಅವರು ಹಮ್ಮಿಕೊಂಡಿರುವ ಭಾರತ ಐಕ್ಯತಾ ಯಾತ್ರೆ ರಾಯಚೂರು ನಗರವನ್ನು ತಲುಪಿದ್ದು, ಪಾದಯಾತ್ರೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಜನಸಾಮಾನ್ಯರು ಹೆಜ್ಜೆಹಾಕಿದ್ದು ವಿಶೇಷವಾಗಿತ್ತು.
ರಾಯಚೂರಿನ ಬಸವೇಶ್ವರ ಮೈದಾನದಲ್ಲಿ ಏರ್ಪಡಿಸಿದ್ದ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ''ಕೇಂದ್ರ ಸರಕಾರದಿಂದ ರೈತರ ಆದಾಯ ದ್ವಿಗುಣಗೊಳಿಸುವ ಭರವಸೆ ನೀಡಿ ಇದೀಗ ಅವರಿಗೆಯಾವುದೇ ಸಹಾಯ ಮಾಡುತ್ತಿಲ್ಲ. ರೈತ ಜಿಎಸ್ಟಿ ನೀಡುವ ಸ್ಥಿತಿ ನಿರ್ಮಾಣವಾಗಿದ್ದು, ತಾನು ಬೆಳೆದ ಬೆಳೆಗೆ ಸೂಕ್ತ ಬೆಂಬಲ ಬೆಲೆಯೂ ಸಿಗುತ್ತಿಲ್ಲ. ರಾಜ್ಯದಲ್ಲಿ 20 ದಿನಗಳ ಪಾದಯಾತ್ರೆಯಲ್ಲಿ ಒಬ್ಬ ಒಬ್ಬ ಸಂತುಷ್ಟಗೊಂಡ ರೈತ ನನಗೆ ಸಿಕ್ಕಿಲ್ಲ. ರಾಜ್ಯದಲ್ಲಿನ ಬಿಜೆಪಿ ಸರಕಾರ ಕೇವಲ ಭ್ರಷ್ಟಾಚಾರದಿಂದಲೇ ಸದ್ದು ಮಾಡುತ್ತಿದೆ. ಎಲ್ಲದರಲ್ಲೂ ಭ್ರಷ್ಟಾಚಾರ ತುಂಬಿದೆ'' ಎಂದು ಕಿಡಿಕಾರಿದರು.
''ಕರ್ನಾಟಕದಲ್ಲಿ 500ಕಿ.ಮೀ ಹೆಚ್ಚು ಪಾದಯಾತ್ರೆ ನಡೆಸಿದ್ದು, ತಾವೆಲ್ಲರೂ ಶಕ್ತಿ ಹಾಗೂ ಪ್ರೀತಿ ಕೊಟ್ಟಿದ್ದೀರಿ, ಧನ್ಯವಾದ. ದೇಶದಲ್ಲಿ ಬಿಜೆಪಿ ಹಾಗೂ ಆರೆಸೆಸ್ಸ್ ದ್ವೇಷ ಹಾಗೂ ಹಿಂಸೆಯನ್ನು ಹರಡುವ ಕೆಲಸ ಮಾಡುತ್ತಿದ್ದು, ದೇಶ ವಿಭಜನೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದೇವೆ. ಬಸವಣ್ಣ, ಅಂಬೇಡ್ಕರ್, ಮಹರ್ಷಿ ವಾಲ್ಮೀಕಿ ದೇಶಕ್ಕೆ ದಾರಿ ತೋರಿಸಿದರು. ಅವರ ವಿಚಾರಧಾರೆಯ ಪಾದಯಾತ್ರೆ ಸಾಗಿದೆ' ಎಂದು ಹೇಳಿದರು.