ಶಾಸಕ ಎಂ.ಪಿ.ರೇಣುಕಾಚಾರ್ಯ ವಿರುದ್ಧ ಜೀವ ಬೆದರಿಕೆ ಆರೋಪ: ರಕ್ಷಣೆ ಕೋರಿ ಎಸ್ಪಿಗೆ ದೂರು
ದಾವಣಗೆರೆ: ಜೀವ ಬೆದರಿಕೆ ಹಾಕಿರುವ ಆರೋಪಕ್ಕೆ ಸಂಬಂಧಿಸಿ ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ವಿರುದ್ಧ ದೂರು ಸಲ್ಲಿಕೆಯಾಗಿದೆ.
'ಭ್ರಷ್ಟಾಚಾರ ವಿರೋಧಿ ವೇದಿಕೆ'ಯ ಸಂಘಟನಾ ಕಾರ್ಯದರ್ಶಿ ಹನುಮಂತಪ್ಪ ಸೊರಟೂರು ಅವರು ಎಸ್ಪಿ ರಿಷ್ಯಂತ್ ಅವರಿಗೆ ದೂರು ನೀಡಿದ್ದು, 'ಎಂಪಿ ರೇಣುಕಾಚಾರ್ಯ ಅವರ ಕ್ಷೇತ್ರದಲ್ಲಿ ನಡೆಯುವ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪ ಮಾಡಿದ್ದಕ್ಕೆ ಜೀವ ಬೆದರಿಕೆ ಹಾಕಲಾಗಿದೆ' ಎಂದು ಹನುಮಂತಪ್ಪ ಅವರು ದೂರಿನಲ್ಲಿ ತಿಳಿಸಿದ್ದಾರೆ.
'ಮಾಧ್ಯಮಗಳ ಎದುರು ಭ್ರಷ್ಟಾಚಾರ ವಿರೋಧಿ ವೇದಿಕೆ ವಿರುದ್ದ ಅವಹೇಳನ ಕಾರಿ ಹೇಳಿಕೆ ನೀಡಿದ್ದಲ್ಲದೆ, ಎಚ್ಚರದಿಂದ ಇರಬೇಕು ಎಂದು ಹೇಳಿಕೆ ನೀಡಿದ್ದರು'. ಈ ಹಿನ್ನೆಲೆಯಲ್ಲಿ ರಕ್ಷಣೆ ನೀಡುವಂತೆ ಕೋರಿ ಎಸ್ ಪಿ ರಿಷ್ಯಂತ್ ಗೆ ಹನುಮಂತಪ್ಪ ಸೊರಟೂರು ಅವರು ದೂರು ನೀಡಿದ್ದಾರೆ.
''ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು''
ಪ್ರಕರಣಕ್ಕೆ ಸಂಬಂಧಿಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ 'ಭ್ರಷ್ಟಾಚಾರ ವಿರೋಧಿ ವೇದಿಕೆ'ಯ ಸಂಘಟನಾ ಕಾರ್ಯದರ್ಶಿ ಹನುಮಂತಪ್ಪ ಸೊರಟೂರು, 'ಭ್ರಷ್ಟಾಚಾರ ವಿರೋಧಿ ವೇದಿಕೆ ಭ್ರಷ್ಟಾಚಾರದಿಂದ ಹುಟ್ಟಿರುವ ವೇದಿಕೆ. ನನಗೆ ಲೆಕ್ಕ ಕೇಳಲು ಅವರು ಯಾರು, ಅವರಿಗೇಕೆ ನಾನು ಲೆಕ್ಕ ಕೊಡಬೇಕು. ತಾಲೂಕಿನ ಜನರಿಗೆ ಲೆಕ್ಕ ಕೊಡುತ್ತೇನೆ. ಬ್ಲಾಕ್ ಮೇಲ್ ಮಾಡುವ ವೇದಿಕೆ ಎಂದು ಹೇಳಿಕೆ ನೀಡಿರುವ ರೇಣುಕಾಚಾರ್ಯ ವಿರುದ್ಧ ಒಂದು ವಾರದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು' ಎಂದು ತಿಳಿಸಿದರು.