ನಾಪತ್ತೆಯಾಗಿದ್ದ ಶಾಸಕ ರೇಣುಕಾಚಾರ್ಯ ಸಹೋದರನ ಪುತ್ರನ ಮೃತದೇಹ ಪತ್ತೆ
ದಾವಣಗೆರೆ: ನಾಪತ್ತೆಯಾಗಿದ್ದ ಹೊನ್ನಾಳಿ ಕ್ಷೇತ್ರದ ಶಾಸಕ ರೇಣುಕಾಚಾರ್ಯ ಸೋದರನ ಪುತ್ರನ ಮೃತದೇಹ ಪತ್ತೆಯಾಗಿದೆ.
ಕಡದಕಟ್ಟೆ ಬಳಿ ತುಂಗಾ ಕಾಲುವೆಯಲ್ಲಿ ಕಾರಿನೊಳಗಡೆ ಚಂದ್ರಶೇಖರ್ ಮೃತದೇಹ ಪತ್ತೆಯಾಗಿದೆನ್ನಲಾಗಿದೆ.
ಕಡದಕಟ್ಟೆಯ ತುಂಗಾ ಕಾಲುವೆ ಬಳಿ ಕಾರು ಸಂಚರಿಸಿರುವ ಕುರುಹುಗಳು ಪತ್ತೆಯಾಗಿದ್ದವು. ಇದನ್ನು ಪರಿಶೀಲನೆ ನಡೆಸಿದ ಪೊಲೀಸರು ಬಳಿಕ ತುಂಗ ಕಾಲುವೆಯಲ್ಲಿ ಕಾರನ್ನು ಪತ್ತೆ ಹಚ್ಚಿದ್ದಾರೆ.
ಚಂದ್ರಶೇಖರ್ ಪತ್ತೆಗಾಗಿ ಪಕ್ಷದ ಕೆಲ ಮುಖಂಡರು ಗುರುವಾರ ಮಧ್ಯಾಹ್ನ ಡ್ರೋನ್ ಕ್ಯಾಮೆರಾ ಸಹಾಯದಿಂದ ಹೊನ್ನಾಳಿ -ನ್ಯಾಮತಿ ರಸ್ತೆಯ ಹೊರವಲಯದ ನಿರ್ಜನ ಪ್ರದೇಶಗಳಲ್ಲಿ ಹುಡುಕಾಟ ನಡೆಸುತ್ತಿರುವಾಗ ತುಂಗಾ ಮೇಲ್ದಂಡೆ ಕಾಲುವೆಯ ಸೇತುವೆ ಪಕ್ಕದಲ್ಲಿ ಕಾರಿನ ಕೆಲ ಅವಶೇಷಗಳು ಕಾಣಿಸಿಕೊಂಡಿದೆ. ಕೂಡಲೇ ಸ್ಥಳ ವೀಕ್ಷಣೆ ಮಾಡಿದಾಗ ಯಾವುದೋ ಕಾರು ಅಪಘಾತವಾಗಿ ಕಾಲುವೆ ಬಿದ್ದಿರುವುದನ್ನು ಕಂಡು, ಪೊಲೀಸ್ ಇಲಾಖೆಗೆ ಮಾಹಿತಿ ನೀಡಿಲಾಗಿದೆ. ಯುವಕರು ಕಾಲುವೆಗೆ ಇಳಿದು ಪರೀಕ್ಷಿಸಿದಾಗ ಕಾರು ಇರುವುದು ದೃಢಪಟ್ಟಿದೆ.
ಹೊನ್ನಾಳಿಯಿಂದ ನ್ಯಾಮತಿ ರಸ್ತೆ ಸುಮಾರು 2 ಕಿಮೀ ದೂರದಲ್ಲಿ ತುಂಗಾ ಮೇಲ್ದಂಡೆ ಕಾಲುವೆಯಿದ್ದು, ಇಲ್ಲಿ ಪತ್ತೆಯಾದ ಕಾರನ್ನು ಪೊಲೀಸರು ಎರಡು ಕ್ರೇನ್ ಮೂಲಕ ಹೊರ ತೆಗೆದಾಗಅದರಲ್ಲಿ ಚಂದ್ರಶೇಖರ್ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಹಿಂಬದಿ ಸೀಟ್ನಲ್ಲಿ ಶವ ಪತ್ತೆ: ಕಾರು ರಸ್ತೆ ಅಪಘಾತಕ್ಕೊಳಗಾಗಿ ನಾಲೆಗೆ ಬಿದ್ದಿದೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬಂದರೂ ಕಾರಲ್ಲಿ ಬೇರೆ ಯಾರು ಇಲ್ಲದಿರುವುದು, ದೇಹ ಕಾರಿನ ಹಿಂದಿನ ಸೀಟಿನಲ್ಲಿ ಮಲಗಿದ ಸ್ಥಿತಿಯಲ್ಲಿ ಕಂಡುಬಂದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಪೊಲೀಸ್ ಇಲಾಖೆಯ ತನಿಖೆಯಿಂದ ಸತ್ಯಾಂಶ ಹೊರಬರಬೇಕಾಗಿದೆ. ಶವವನ್ನು ವಿಧಿ ವಿಜ್ಞಾನ ವಿಭಾಗಕ್ಕೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.
ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿತ್ತು: ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ಸಹೋದರ ಹಾಗೂ ಗುತ್ತಿಗೆದಾರ ರಮೇಶ್ ಅವರು ಇತ್ತೀಚೆಗೆ ಹೊನ್ನಾಳಿ ಪೊಲೀಸ್ಠಾಣೆಗೆ ದೂರು ದಾಖಲಿಸಿ, 'ಅ 30 ರ ರಾತ್ರಿ 7.30ಕ್ಕೆ ಶಿವಮೊಗ್ಗಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವರು ಈ ವರೆಗೂ ಮನೆಗೆ ಬಂದಿಲ್ಲ, ಈ ಬಗ್ಗೆ ಆತನ ಸ್ನೇಹಿತರು ಹಾಗೂ ಎಲ್ಲಾ ಕಡೆ ಹುಡುಕಾಡಿದರೂ ನನ್ನ ಮಗನ ಪತ್ತೆಯಾಗಿಲ್ಲ' ಎಂದು ದೂರು ನೀಡಿದ್ದರು.