ಹಾಸನ: ನೇಣು ಬಿಗಿದ ಸ್ಥಿತಿಯಲ್ಲಿ ದಂಪತಿ ಮೃತದೇಹ ಪತ್ತೆ!
ಹಾಸನ, ನ.11: ನೇಣು ಬಿಗಿದುಕೊಂಡು ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಮಧ್ಯಾಹ್ನ ನಗರದ ಹೊರವಲಯದ ಶಾಂತಿಗ್ರಾಮ ಹೋಬಳಿ ಹೊಂಗೆರೆ ಗ್ರಾಮದ ಬಳಿಯಿರುವ ಅರಣ್ಯ ಪ್ರದೇಶದಲ್ಲಿ ಬೆಳಕಿಗೆ ಬಂದಿರುವುದು ವರದಿಯಾಗಿದೆ.
ಮೃತರನ್ನು ಹಾಸನ ತಾಲೂಕಿನ ಶಾಂತಿಗ್ರಾಮ ಹೋಬಳಿ ಮುತ್ತಿಗೆ ಗ್ರಾಮದ ಸೈನಿಕ ಕಿರಣ್ ಹಾಗೂ ಮೊದಲ ಪತ್ನಿ ಆಶಾ ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಶಾಂತಿಗ್ರಾಮ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಪ್ರಕರಣದ ವಿವರ: ಗುರುವಾರ ನಗರದ ಹೊರವಲಯದಲ್ಲಿರುವ ಬುಸ್ತೇನಹಳ್ಳಿ ಕ್ರಾಸ್ ಹತ್ತಿರ ಸಾಧನ ಕಲ್ಯಾಣ ಮಂಟಪದಲ್ಲಿ ಯುವತಿಯೊಂದಿಗೆ ಕಿರಣ್ ವಿವಾಹವಾಗಿದ್ದು, ಎರಡನೇ ಮದುವೆ ನಡೆಯುತ್ತಿದ್ದ ಸ್ಥಳಕ್ಕೆ ಕಿರಣ್ನ ಈ ಹಿಂದೆ ಹೊಸಕೊಪ್ಪಲು ಮೂಲದ ದಾಸರಕೊಪ್ಪಲು ನಿವಾಸಿ ಎರಡು ಮಕ್ಕಳ ತಾಯಿ ವಿಧವೆ ಆಶಾ ಎಂಬವರನ್ನು ವಿವಾಹವಾಗಿದ್ದರು.
ಈ ವಿಷಯವನ್ನು ಮದುವೆಯ ಮನೆಯಲ್ಲಿ ಆಶಾ ತಿಳಿಸಿದ ಹಿನ್ನೆಲೆಯಲ್ಲಿ ವಿವಾಹ ಮುರಿದುಬಿದ್ದು, ಪ್ರಕರಣ ಪೊಲೀಸ್ ಮೆಟ್ಟಿಲೇರಿತ್ತು.
ಈ ಎಲ್ಲಾ ಬೆಳವಣಿಗೆ ನಂತರ ಇಂದು (ಶುಕ್ರವಾರ) ಕಿರಣ್ ಮತ್ತು ಆಶಾ ಅವರ ಮೃತದೇಹ ಹಾಸನ ತಾಲೂಕಿನ ಶಾಂತಿಗ್ರಾಮ ಹೋಬಳಿ ಹೊಂಗೆರೆ ಗ್ರಾಮದ ಹತ್ತಿರ ಇರುವ ಅರಣ್ಯ ಪ್ರದೇಶದಲ್ಲಿ ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.