ಹುಣಸೂರು | ಬ್ಯಾಂಕ್ನಿಂದ ಪದೇ ಪದೇ ನೋಟಿಸ್ ಆರೋಪ; ದಯಾಮರಣಕ್ಕೆ ಒತ್ತಾಯಿಸಿ ರಾಷ್ಟ್ರಪತಿಗೆ ವೃದ್ಧೆ ಮನವಿ
ಹುಣಸೂರು, ನ.14: ಮನೆ ಕಟ್ಟಲು ಬ್ಯಾಂಕ್ ಆಫ್ ಬರೋಡಾದಿಂದ 15 ವರ್ಷಗಳ ದಿರ್ಘಾವಧಿ ಸಾಲವನ್ನು ಪಡೆದು ಈಗಾಗಲೇ 6 ಲಕ್ಷ ರೂ.ಸಾಲವನ್ನು ಮರುಪಾವತಿ ಮಾಡಿದ್ದರೂ, ಪದೇ ಪದೇ ನೋಟಿಸ್ ನೀಡಿ ಮನೆಯನ್ನು ಹರಾಜು ಮಾಡುವುದಾಗಿ ಬೆದರಿಕೆ ಹಾಕಿ ನಮಗೆ ಹಿಂಸೆ ನೀಡುತ್ತಿದ್ದಾರೆ. ಆದುದರಿಂದ ನಮಗೆ ದಯಾಮರಣ ನೀಡಿ ಎಂದು ವಯೋವೃದ್ಧೆ ಜಯಮ್ಮ ಎಂಬವರು ರಾಷ್ಟ್ರಪತಿಯವರಿಗೆ ಮನವಿ ನೀಡಿದ್ದಾರೆ ಎಂದು ಸತ್ಯ ಫೌಂಡೇಷನ್ ಅಧ್ಯಕ್ಷ ಸತ್ಯಪ್ಪತಿಳಿಸಿದ್ದಾರೆ.
ನಗರನರಸಿಂಹಸ್ವಾಮಿ ಬಡಾವಣೆಯ ಲೇಟ್ ಶಿವಣ್ಣರವರ ಪತ್ನಿ ಜಯಮ್ಮ ಅವರ ಮಗ ದೇವರಾಜ್ ಹುಣಸೂರಿನ ಬ್ಯಾಂಕ್ ಆಪ್ ಬರೋಡದಲ್ಲಿ ಮನೆ ಕಟ್ಟಲು 15 ವರ್ಷಗಳ ಅವಧಿಗೆ 14 ಲಕ್ಷ ರೂ.ಸಾಲ ಪಡೆದಿದ್ದು ಮೂರು ವರ್ಷಗಳಲ್ಲಿ 6 ಲಕ್ಷ ರೂ.ಮರುಪಾವತಿ ಮಾಡಿದ್ದಾರೆ. ಉಳಿದ ಸಾಲದ ಹಣ ಮರುಪಾವತಿಗೆ ಇನ್ನೂ ಕಾಲವಕಾಶವಿದ್ದರೂ ಬ್ಯಾಂಕ್ನ ಮ್ಯಾನೇಜರ್ ವೈಕುಂಟಯ್ಯ ಮತ್ತು ಸಹಾಯಕ ಮ್ಯಾನೇಜರ್ ಯತೀಶ್ ಎಂಬವರು ಸಾಲದ ಹಣ ಮರುಪಾವತಿಗೆ ಪದೇ ಪದೇ ನೋಟಿಸ್ ನೀಡುವ ಮೂಲಕ ಸಾಲ ವಸೂಲಾತಿ ಏಜನ್ಸಿಗೆ ಒತ್ತಾಯ ತಂದು ಮನೆ ಹರಾಜು ಮಾಡುವುದಾಗಿ ಮನೆಗೆ ನೋಟಿಸ್ ಅಂಟಿಸಿದ್ದಾರೆ ಎಂದು ಆರೋಪಿಸಿದರು.
ಬ್ಯಾಂಕ್ನ ಅಧಿಕಾರಿಗಳ ಕಿರುಕುಳ ತಾಳಲಾರದೆ ದಯಮರಣಕ್ಕಾಗಿ ರಾಷ್ಟ್ರಪತಿಗೆ ಉಪವಿಭಾಗಧಿಕಾರಿಯವರ ಮೂಲಕ ಮನವಿ ಮಾಡಿದ್ದಾರೆ. ಬ್ಯಾಂಕ್ನ ಮ್ಯಾನೇಜರ್ ಮತ್ತು ಸಹಾಯಕ ಮ್ಯಾನೇಜರ್ ಅವರಿಂದ ರೈತರಿಗೆ ಮತ್ತು ವ್ಯಾಪಾರಸ್ಥರಿಗೆ ತುಂಬ ತೊಂದರೆಯಾಗಿದೆ. ಆದುದರಿಂದ ಜಿಲ್ಲಾ ಮಟ್ಟದ ಬಾಂಕ್ನ ಅಧಿಕಾರಿಗಳು ಹುಣಸೂರು ಶಾಖೆಯ ಅಧಿಕಾರಿಗಳ ವಿರುದ್ಧ ಕ್ರಮವಹಿಸಬೇಕು. ಇಲ್ಲದಿದ್ದರೆ ಬ್ಯಾಂಕ್ ಅಪ್ ಬರೋಡಾ ಹುಣಸೂರು ಶಾಖೆಯ ಎದುರು ರೈತರೊಂದಿಗೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.