ಶಾಸಕ ಎಂ.ಪಿ. ಕುಮಾರಸ್ವಾಮಿ ಮೇಲೆ ಹಲ್ಲೆ ಘಟನೆಯ ಹಿಂದೆ ನನ್ನ ಕೈವಾಡ ಇಲ್ಲ: BJP ಮುಖಂಡ ದೀಪಕ್ ದೊಡ್ಡಯ್ಯ ಸ್ಪಷ್ಟನೆ
ಚಿಕ್ಕಮಗಳೂರು, ನ.23: ಜಿಲ್ಲೆಯ ಮೂಡಿಗೆರೆ ವಿಧಾನಸಭೆ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರ ಮೇಲೆ ನಡೆದಿದೆ ಎನ್ನಲಾದ ಹಲ್ಲೆ ಘಟನೆ ಹಿಂದೆ ನನ್ನ ಕೈವಾಡವಿದೆ ಎಂಬ ಆರೋಪ ಸತ್ಯಕ್ಕೆ ದೂರವಾದದ್ದು, ನನ್ನ ಮೇಲೆ ಆರೋಪ ಮಾಡಿದವರು ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಬೇಕು. ನನ್ನ ಕೈವಾಡವಿಲ್ಲ ಎಂದು ನಾನೂ ಪ್ರಮಾಣ ಮಾಡುತ್ತೇನೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ದೀಪಕ್ ದೊಡ್ಡಯ್ಯ ಸ್ಪಷ್ಟನೆ ನೀಡಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ''ಗಲಾಟೆ ಮಾಡಿಸುವ ಕುಮ್ಮಕ್ಕು ನೀಡುವ ವ್ಯಕ್ತಿ ನಾನಲ್ಲ. ನಾನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸೇವಕ. ಹತ್ತಾರು ಸಂಘ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದೇನೆ. ನನಗೆ ನನ್ನದೇಯಾದ ವ್ಯಕ್ತಿತ್ವವಿದೆ. ಸಂಸ್ಕಾರ ವಿದೆ. ಆದ್ದರಿಂದ ಈ ಆರೋಪ ಸತ್ಯಕ್ಕೆ ದೂರವಾದದ್ದು'' ಎಂದು ಹೇಳಿದರು.
''ಶಾಸಕ ಕುಮಾರಸ್ವಾಮಿ ಮಾಡಿರುವ ಆರೋಪದಿಂದ ಬೇಸರವಾಗಿದೆ. ಈ ಸಂಬಂಧ ತಾನು ಬುಧವಾರ ನಗರದ ಓಂಕಾರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿಸಿದ್ದೇನೆ. ಘಟನೆಯಲ್ಲಿ ನನ್ನ ಪಾತ್ರವಿಲ್ಲ ಯಾರು ಈ ರೀತಿ ಆರೋಪ ಮಾಡಿದ್ದಾರೋ ಅವರಿಗೆ ಅದರ ಸತ್ಯಾಸತ್ಯತೆ ತಿಳಿಯಲಿ ಎಂದು ಪ್ರಾರ್ಥಿಸಿದ್ದೇನೆ'' ಎಂದು ತಿಳಿಸಿದರು.
ಇದನ್ನೂ ಓದಿ: ಇದುವರೆಗೂ ಒಂದು ಪೋನ್ ಮಾಡಿ ಏನಾಯ್ತು ಅಂತ ಕೇಳಿಲ್ಲ: ಗೃಹ ಸಚಿವರ ವಿರುದ್ಧ BJP ಶಾಸಕ ಎಂ.ಪಿ.ಕುಮಾರಸ್ವಾಮಿ ಅಸಮಾಧಾನ