ಗಂಗಾವತಿ | ರಸ್ತೆ ಅಪಘಾತ: ಅಯ್ಯಪ್ಪ ಮಾಲಾಧಾರಣೆಗೆ ತೆರಳುತ್ತಿದ್ದ ವ್ಯಕ್ತಿ ಮೃತ್ಯು, ಇನ್ನಿಬ್ಬರಿಗೆ ಗಾಯ
ಗಂಗಾವತಿ, ನ.30: ಕಾರು ಮತ್ತು ಕಬ್ಬು ಸಾಗಾಟದ ಟ್ರ್ಯಾಕ್ಟರ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ (Accidetn) ಅಯ್ಯಪ್ಪ ಮಾಲಾಧಾರಣೆಗೆ ತೆರಳುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ (Death) ಘಟನೆ ತಾಲೂಕಿನ ಶ್ರೀರಾಮ ನಗರದ ಬಳಿ ಬುಧವಾರ ಮುಂಜಾನೆ ಸಂಭವಿಸಿದೆ.
ಮೃತರನ್ನು ಶ್ರೀ ರಾಮ ನಗರದ ದುರ್ಗಾ ಸ್ವೀಟ್ ಅಂಗಡಿಯ ಮಾಲಕ ನಾಗೇಶ್ ರಾವ್(56) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಅಂಜೂರು ಕ್ಯಾಂಪ್ ನಿವಾಸಿ ಶೇಷಾದ್ರಿ ರಾವ್ ಮತ್ತು ಸುರೇಶ್ ಎಂಬವರು ಗಾಯಗೊಂಡಿದ್ದು, ಅವರನ್ನು ಗಂಗಾವತಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಲ್ಲಿನ ವಿದ್ಯಾ ನಗರದಲ್ಲಿರುವ ಸ್ವಾಮಿ ಅಯ್ಯಪ್ಪ ದೇಗುಲದಲ್ಲಿ ಅಯ್ಯಪ್ಪ ಮಾಲಾಧಾರಣೆಗೆಂದು ನಾಗೇಶ್ ರಾವ್ ಇಂದು ಮುಂಜಾನೆ 5:30ರ ಸುಮಾರಿಗೆ ಹಿರಿಯ ಸ್ವಾಮೀಜಿಗಳ ಜೊತೆ ಕಾರಿನಲ್ಲಿ ಹೊರಟಿದ್ದರು. ಇವರು ಸಂಚರಿಸುತ್ತಿದ್ದ ಕಾರು ಶ್ರೀ ರಾಮ ನಗರ ಮತ್ತು ಪ್ರಗತಿ ನಗರದ ಮಧ್ಯೆ ಇರುವ ಹಳ್ಳದ ಬಳಿ ಮುಖ್ಯ ರಸ್ತೆ ತಲುಪಿದಾಗ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಕಾರು ಚಲಾಯಿಸುತ್ತಿದ್ದ ನಾಗೇಶ್ ರಾವ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆಂದು ತಿಳಿದುಬಂದಿದೆ.
ಈ ಬಗ್ಗೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.