ತಿ.ನರಸೀಪುರ: ಹಲವು ದಿನಗಳಿಂದ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಚಿರತೆ ಕೊನೆಗೂ ಸರೆ
ಮೈಸೂರು,ಡಿ.23: ಮೈಸೂರು ಜಿಲ್ಲೆ ತಿ.ನರಸೀಪುರ ತಲೂಕಿನಲ್ಲಿ ಇಬ್ಬರ ಸಾವಿಗೆ ಕಾರಣವಾಗಿದ್ದ, ಕಳೆದೊಂದು ತಿಂಗಳಿನಿಂದ ಜನರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಸೆರೆ ಸಿಕ್ಕಿದೆ. ಚಿರತೆ ಕಾರ್ಯಾಚರಣೆ ಯಶಸ್ವಿಯಾದ ಕಾರಣ ಜನತೆ ನಿಟ್ಟಿಸುರು ಬಿಟ್ಟಿದ್ದಾರೆ.
ತಲೂಕಿನ ಬನ್ನೂರು ಬಳಿಯ ಎಂ.ಎಲ್. ಹುಂಡಿ ಸಮೀಪ ಇರುವ ಮಲ್ಲಿಕಾರ್ಜುನ ಬೆಟ್ಟದಲ್ಲಿ ಚಿರತೆ ಬೋನಿಗೆ ಬಿದ್ದಿದೆ. ಬೆಳಗ್ಗೆ 9.30ರ ಸಮಯದಲ್ಲಿ ಚಿರತೆಯನ್ನು ಅರಣ್ಯ ಇಲಾಖೆ ಯಶಸ್ವಿಯಾಗಿ ಸೆರೆ ಹಿಡಿದಿದೆ ಎಂದು ತಿಳಿದು ಬಂದಿದೆ.
ಇಬ್ಬರು ಕಾಲೇಜು ವಿದ್ಯಾರ್ಥಿಗಳನ್ನು ಕೊಂದು ,ಇಬ್ಬರು ವ್ಯಕ್ತಿಗಳ ಮೇಲೆ ದಾಳಿ ನಡೆಸಿ ಹಲವಾರು ಮೇಕೆ, ಕುರಿ, ಕೋಳಿ, ದನ, ಕರುಗಳನ್ನು ಬಲಿ ಪಡೆದಿದ್ದ ಚಿರತೆಯ ಸೆರೆಗಾಗಿ ಅರಣ್ಯ ಇಲಾಖೆ ಹಲವು ತಂಡಗಳನ್ನು ರಚಿಸಿಕೊಂಡು ಕಾರ್ಯಾಚರಣೆಗೆ ಇಳಿದಿತ್ತು.
ಮೂರರಿಂದ ನಾಲ್ಕು ಕರುಗಳನ್ನು ದೊಡ್ಡ ಬೋನಿನಲ್ಲಿ ಹಾಕಿ, ಅದು ನಿರಾಳವಾಗಿ ತಿನ್ನಲು ಬಿಟ್ಟು ಅದಕ್ಕೆ ಯಾವುದೇ ಅನುಮಾನ ಬಾರದ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಇಂದು ಬೆಳಗಿನ ಜಾವ ಜೀವಂತವಾಗಿ ಸೆರೆ ಹಿಡಿಯಲಾಗಿದೆ. ತಾಲೂಕಿನಲ್ಲಿ ಇನ್ನೂ 18 ರಿಂದ 20 ಚಿರತೆಗಳಿರುವ ಮಾಹಿತಿಯನ್ನು ಅರಣ್ಯ ಇಲಾಖೆ ನೀಡಿದ್ದು, ಅದರಲ್ಲಿ ಈ ಚಿರತೆಯೇ ನರಭಕ್ಷಕವೆಂದು ತಿಳಿಸಿದ್ದಾರೆ.