VIDEO- ಶಾಸಕ ಎಂ.ಪಿ.ರೇಣುಕಾಚಾರ್ಯ ಇದ್ದ ವೇದಿಕೆಗೆ ಕುರಿಗಳನ್ನು ನುಗ್ಗಿಸಿ ಆಕ್ರೋಶ
ನ್ಯಾಮತಿ : ಸರಕಾರಿ ಗೋಮಾಳ ಜಾಗವನ್ನು ಬಿಜೆಪಿ ಕಾರ್ಯಕರ್ತರಿಗೆ ನೀಡಿರುವುದನ್ನು ಖಂಡಿಸಿ ಬಸವನಹಳ್ಳಿ ಗ್ರಾಮದ ಕುರಿಗಾಯಿಗಳು ನೂರಾರು ಕುರಿಗಳ ಸಮೇತ ಗ್ರಾಮವಾಸ್ತವ್ಯ ನಡೆಯುತ್ತಿದ್ದ ವೇದಿಕೆಗೆ ಬಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಪ್ರತಿಭಟನೆ ನಡೆಸಿದ್ದಾರೆ.
ಗ್ರಾಮದಲ್ಲಿ ಕುರಿಗಳು ಹಾಗೂ ಜಾನುವಾರು ಮೇಯಿಸಲು ಜಾಗವಿಲ್ಲ ನಮಗೆ ಗೋಮಾಳ ಬಿಡಿಸಿಕೊಡಿ ಎಂದು ಒತ್ತಾಯಿಸಿದ್ದಾರೆ.
ಈ ವೇಳೆ ಶಾಸಕ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಗ್ರಾಮದ ಸರ್ವೇ ನಂ: 25/29 ರಲ್ಲಿ 68 ಎಕರೆ ಜಮೀನು ಇತ್ತು, ಅದರಲ್ಲಿ 30 ಎಕರೆ ಹಿಂದೆ ಕೊಟ್ಟು ಬಿಟ್ಟಿದ್ದಾರೆ. ಈಗ ನಾನು ಇರುವ ಜಾಗವನ್ನು ಯಾರಿಗೂ ಕೊಡದಂತೆ ಆದೇಶಿಸಿ ಸರ್ವೆ ಮಾಡಿ ಕುರಿಗಳು ಮೇಯಲಿಕ್ಕೆ ಅವಕಾಶ ಮಾಡಿಕೊಡುತ್ತೇನೆ ಎಂದು ಹೇಳಿ ಸ್ಥಳದಲ್ಲಿದ್ದ ಎಸಿ ಅವರನ್ನು ಕರೆದು ಸೋಮವಾರ ಬಾಕಿ ಇರುವ ಎಲ್ಲ ಜಮೀನನ್ನು ಸರ್ವೆ ಮಾಡಿಸಿ ಹದ್ದುಬಸ್ತು ಮಾಡಿಸಿ ಎಂದು ಸೂಚಿಸಿದರು.
ಈ ವೇಳೆ ಕುರಿಗಾಯಿಗಳು ಕುರಿ ಸಮೇತ ಇವತ್ತೇ ಆಗಬೇಕು,ಇಲ್ಲದಿದ್ದರೆ ನಾವು ಇಲ್ಲಿಂದ ಕದಲುವುದಿಲ್ಲ ಎಂದು ಶಾಸಕರ ಬಳಿ ಹೇಳಿದ್ದಾಗ ಸೋಮವಾರ ಮಾಡಿಸಿಯೇ ಮಾಡಿಸುತ್ತೇನೆ ಸುಮ್ಮನೆ ಪದೇ ಪದೇ ಅದನ್ನೇ ಕೇಳಬೇಡಿ ಎಂದು ಹೇಳಿದರು.
ಸ್ಮಶಾನಕ್ಕೆ ಜಾಗ ನೀಡಿ: ನಂತರ ಅಲ್ಲೆ ಇದ್ದ ಕೆಲ ಸಾರ್ವಜನಿಕರು ಗ್ರಾಮದಲ್ಲಿ ಸ್ಮಶಾನಕ್ಕೆ ಜಾಗ ಇಲ್ಲ, ಎಲ್ಲರಿಗೂ ಹೇಳಿ ಸಾಕಾಯಿತು ಎಂದು ಶಾಸಕರ ಬಳಿ ಕೇಳಿದಾಗ ಈಗಾಗಲೆ ಗ್ರಾಮದಲ್ಲಿ ಸ್ಮಶಾನಕ್ಕೆ 4 ಎಕರೆ ಜಮೀನು ಕೊಟ್ಟಿದ್ದೇವೆ, ಪಹಣಿ ಕೂಡ ಬಂದಿದೆ ಎಂದು ಹೇಳಿದರು.