ವಿಧಾನಸಭೆ ಚುನಾವಣೆ | ಕಾಂಗ್ರೆಸ್ ನಾಯಕನ ಪರ ಮತಯಾಚಿಸಿ ಅಚ್ಚರಿ ಮೂಡಿಸಿದ ಬಿಜೆಪಿ ಸಂಸದ
ತುಮಕೂರು: ಮುಂಬರಲಿರುವ ವಿಧಾನಸಭೆ ಚುನಾವಣೆಗೆ ತುಮಕೂರು ಕ್ಷೇತ್ರದ ಬಿಜೆಪಿ ಸಂಸದ ಜಿ.ಎಸ್. ಬಸವರಾಜು ಕಾಂಗ್ರೆಸ್ ನ ಸಂಭಾವ್ಯ ಅಭ್ಯರ್ಥಿಯ ಪರವಾಗಿ ಮತಯಾಚಿಸಿ ಅಚ್ಚರಿ ಮೂಡಿಸಿದ್ದಾರೆ.
ಮಧುಗಿರಿಯಲ್ಲಿ ನಡೆದ ಸಮಾರಂಭ ಒಂದರಲ್ಲಿ ಪಾಲ್ಗೊಂಡಿದ್ದ ಸಂಸದ ಜಿ.ಎಸ್. ಬಸವರಾಜು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕೆ.ಎನ್. ರಾಜಣ್ಣ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
'ಲೋಕಸಭಾ ಚುನಾವಣೆಯಲ್ಲಿ ಬೆಂಬಲ ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ಕೆ.ನ್ ರಾಜಣ್ಣ ಅವರ ಋಣ ತೀರಿಸಲೇಬೇಕಿದೆ' ಎಂದು ಅವರು ಹೇಳಿದ್ದಾರೆ.
'ನಾನು ಸಂಸದ ಆದ ಮೇಲೆ ಇದೇ ಮೊದಲ ಬಾರಿಗೆ ಮಧುಗಿರಿಯ ಗಡಿಭಾಗದ ಈ ಊರಿಗೆ ಬಂದಿರುವೆ. ನನ್ನ ಸ್ನೇಹಿತನ ಸಹಕಾರದಿಂದ ನಾನು ಲೋಕ ಸಭಾ ಸದಸ್ಯನಾಗಿದ್ದೇನೆಯೇ ಹೊರತು ನನ್ನ ವೈಯಕ್ತಿಕ ಶಕ್ತಿಯಿಂದಲ್ಲ. ಮಧುಗಿರಿ ಜನರ ಆರ್ಶೀವಾದದಿಂದ ಗೆದ್ದಿದ್ದೇನೆ' ಎಂದರು.
ಕಾಂಗ್ರೆಸ್ ಮಾಜಿ ಶಾಸಕರಾಗಿರುವ ಕೆ.ಎನ್ ರಾಜಣ್ಣ, ಮುಂಬರಲಿರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ನ ಸಂಭಾವ್ಯ ಅಭ್ಯರ್ಥಿಯೂ ಆಗಿದ್ದಾರೆ.
Next Story