ಮಂಡ್ಯ: ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಮೃತ ದೇಹ ಪತ್ತೆ
ಮಂಡ್ಯ, ಜ.10: ಮನೆಯಲ್ಲಿ ಮಲಗಿದ್ದ ವಿಧವೆ ಮಹಿಳೆ ಸಜೀವ ದಹನವಾಗಿರುವ ನಿಗೂಢ ಘಟನೆ ಮದ್ದೂರು ತಾಲೂಕು ಮಾರಸಿಂಗನಹಳ್ಳಿ ಗ್ರಾಮದಲ್ಲಿ ಸೋಮವಾರ ತಡರಾತ್ರಿ ನಡೆದಿದೆ.
ತನ್ನ ತಾಯಿಯನ್ನು ದಿಷ್ಕರ್ಮಿಗಳು ಬೆಂಕಿಹಚ್ಚಿ ಕೊಲೆ ಮಾಡಿ ಚಿನ್ನಾಭರಣ ದೋಚಿದ್ದಾರೆ ಎಂದು ಆಕೆಯ ಪುತ್ರ ಬೆಸಗರಹಳ್ಳಿ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.
ಮನೆಯಲ್ಲಿ ಒಬ್ಬರೇ ವಾಸವಿದ್ದ ಪ್ರೇಮ(42) ಘಟನೆಯಲ್ಲಿ ಸಾವನ್ನಪ್ಪಿದ್ದು, ಈಕೆಯ ಪತಿ ಶಿವಕುಮಾರ್, ಮೂರು ತಿಂಗಳ ಹಿಂದೆ ಮೃತಪಟ್ಟಿದ್ದಾರೆ. ಈಕೆಯ ಓರ್ವ ಪುತ್ರ ಬೆಂಗಳೂರಿನಲ್ಲಿ ವಾಸವಿದ್ದಾನೆ ಎಂದು ತಿಳಿದು ಬಂದಿದೆ.
ಮಂಗಳವಾರ ಬೆಳಗ್ಗೆ ಪ್ರೇಮ ಅವರ ಮನೆಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಒಳಗೆ ಹೋಗಿ ನೋಡಿದಾಗ ಪ್ರೇಮ ಅವರು ಹಾಸಿಗೆಯಲ್ಲಿ ಸುಟ್ಟು ಭಸ್ಮವಾಗಿರುವುದು ಕಂಡುಬಂದಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಬೆಸಗರಹಳ್ಳಿ ಠಾಣೆ ಪೊಲೀಸರು ಹೇಳಿದ್ದಾರೆ.
'ಮಹಿಳೆ ಶವ ಹಾಸಿಗೆಯಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಜತೆಗೆ, ಸುಮಾರು 80 ರಿಂದ 100 ಗ್ರಾಂ ಚಿನ್ನಾಭರಣಗಳು, ಲ್ಯಾಪ್ಟಾಪ್ ಕಳುವಾಗಿದೆ ಎಂದು ಆಕೆಯ ಪುತ್ರ ದೂರಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ' ಎಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ತಿಳಿಸಿದ್ದಾರೆ.