ಗಂಗಾವತಿ ಸೇರಿ 40 ಕ್ಷೇತ್ರಗಳಲ್ಲಿ KRP ಪಕ್ಷಕ್ಕೆ ಗೆಲುವು: ಜನಾರ್ದನ ರೆಡ್ಡಿ ವಿಶ್ವಾಸ
ಗಂಗಾವತಿ: ಅಭಿಮಾನಿಗಳ ಉತ್ಸಾಹ ನೋಡುತ್ತಿದ್ದರೆ ಕಲ್ಯಾಣ ರಾಜ್ಯ ಪ್ರಗತಿ ಪಾರ್ಟಿ ರಾಜ್ಯದ 40 ಕ್ಷೇತ್ರಗಳಲ್ಲಿ ಗೆಲ್ಲುವ ನಿರೀಕ್ಷೆ ಇದೆ. ಯುವ ಕಾರ್ಯಕರ್ತರ ಬೆಂಬಲ ಸಹಕಾರದಿಂದ ಗಂಗಾವತಿ ಕ್ಷೇತ್ರದಿಂದ ಗೆಲ್ಲುವ ವಿಶ್ವಾಸವಿದೆ ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ಅವರು ಕನಕಗಿರಿ ರಸ್ತೆಯಲ್ಲಿ ತಮ್ಮ ನಿವಾಸದ ವೇದಿಕೆಯಲ್ಲಿ ಜನ್ಮದಿನದ ನಿಮಿತ್ತ ಅಭಿಮಾನಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಗಂಗಾವತಿ ಜನತೆಯ ಆಶೀರ್ವಾದದಿಂದ 56 ನೇ ಜನ್ಮ ದಿನವನ್ನು ಇಲ್ಲಿ ಆಚರಿಸಿಕೊಳ್ಳಲು ಅಭಿಮಾನಿ ಯುವ ಜನತೆ ಬೈಕ್ ರ್ಯಾಲಿಯ ಮೂಲಕ ಅಭೂತಪೂರ್ವ ಪ್ರೀತಿ ಗೌರವ ತೋರಿಸಿದ್ದಾರೆ. ಇಡೀ ನಗರದ ರಸ್ತೆಗಳಲ್ಲಿ ಹಬ್ಬದ ವಾತಾವರಣದಲ್ಲಿ ಹೂವಿನ ಮಳೆಗರೆಯುವ ಮೂಲಕ ಮೆರವಣಿಗೆಯಲ್ಲಿ ಇಡೀ ನಗರದ ತಂದೆ ತಾಯಿಂದಿರ ಆಶೀರ್ವಾದ ಕೊಡಿಸಿದ್ದಾರೆ. ಇವರ ಋಣ ತೀರಿಸುವ ಕಾರ್ಯ ಮಾಡುತ್ತೇನೆ ಎಂದು ಹೇಳಿದರು.
ಗಂಗಾವತಿ, ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರು ಬೇರೆ ಬೇರೆ ಎಂದು ಎಲ್ಲಿಯೂ ನಾನು ಹೇಳಿಲ್ಲ. ಇಡೀ ಕಲ್ಯಾಣ ಕರ್ನಾಟಕ ಉತ್ತರ ಕರ್ನಾಟಕ ಸೇರಿ ಕನ್ನಡ ನಾಡಿನ ಜನರು ನನ್ನನ್ನು ಸಹೋದರ ಹಾಗೂ ಮಗನಂತೆ ನಾನು ಕಷ್ಟದಲ್ಲಿದ್ದಾಗ ಪ್ರೀತಿ ತೋರಿಸಿದ್ದಾರೆ. ಗಂಗಾವತಿಯಿಂದ ಗೆದ್ದು ಕಿಷ್ಕಿಂದಾ ಅಂಜನಾದ್ರಿ ಅಭಿವೃದ್ಧಿಪಡಿಸಿ ಇವರ ಋಣ ತೀರಿಸಿಕೊಳ್ಳುತ್ತೇನೆ ಎಂದರು.