ಕೊನೆಗೂ ಸ್ಯಾಂಟ್ರೋ ರವಿಯ ಬಂಧನ
ಬೆಂಗಳೂರು: ಹಲವು ದಿನಗಳಿಂದ ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿ ಅಲಿಯಾಸ್ ಮಂಜುನಾಥ್ ನನ್ನು ಪೊಲೀಸರು ಗುಜರಾತ್ ನಲ್ಲಿ ಬಂಧಿಸಿರುವುದಾಗಿ ವರದಿಯಾಗಿದೆ.
ವಿವಿಧ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಸ್ಯಾಂಟ್ರೋ ರವಿಯ ಬಂಧನಕ್ಕೆ ರಾಜ್ಯ ಪೊಲೀಸರ ವಿಶೇಷ ತಂಡವೊಂದು ಕಾರ್ಯಚರಣೆ ನಡೆಸಿ, ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ದಲಿತ ಮಹಿಳೆ ಮಹಿಳೆಯನ್ನು ವಂಚಿಸಿ ಮದುವೆಯಾಗಿ, ಜಾತಿ ನಿಂದನೆ ಮಾಡಿ, ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿ, ವರದಕ್ಷಿಣೆ ಕಿರುಕುಳ ನೀಡಿ, ಇಬ್ಬರು ಮಹಿಳೆಯರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ ಆರೋಪದ ಮೇರೆಗೆ ಸ್ಯಾಂಟ್ರೋ ರವಿ ವಿರುದ್ಧ ಮೈಸೂರಿನ ಕಗ್ಗಲೀಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸ್ಯಾಂಟ್ರೋ ರವಿಯ ಕಾರು ಚಾಲಕ ಗಿರೀಶ್ನನ್ನು ನಿನ್ನೆ ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆ ನಡೆಸಲಾಗಿತ್ತು. ರಾಮನಗರ ಎಸ್ಪಿ ಸಂತೋಷ್ ಬಾಬು ನೇತೃತ್ವದ ತಂಡ ಸ್ಯಾಂಟ್ರೊ ರವಿಯ ಕಾರು ಚಾಲಕ ಗಿರೀಶ್ನನ್ನು ಕಾರ್ಯಾಚರಣೆ ಕೈಗೊಂಡು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದರು.
'ಸ್ಯಾಂಟ್ರೊ ರವಿಯನ್ನು ಇಂದು ಗುಜರಾತ್ ನ್ಯಾಯಾಲಯಕ್ಕೆ ಒಪ್ಪಿಸಿ, ನಾಳೆ ಮೈಸೂರು ನ್ಯಾಯಾಲಯಕ್ಕೆ ಕರೆದುಕೊಂಡು ಬರಲಾಗುವುದು. ನಂತರ ಈತನನ್ನು ವಿಚಾರಣೆ ನಡೆಸಲಾಗುವುದು'
- ಎಡಿಜಿಪಿ ಅಲೋಕ್ ಕುಮಾರ್