ಮೈಸೂರು: ಸಿದ್ದರಾಮಯ್ಯ, ಝಮೀರ್ ಅಹ್ಮದ್ ಗೌಪ್ಯ ಮಾತುಕತೆ?
ಮೈಸೂರು, ಜ.21: ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲದಂತೆ ತೆಲಂಗಾಣ ಸಿಎಂ ಚಂದ್ರಶೇಖರ ರಾವ್ ಷಡ್ಯಂತ್ರ ನಡೆಸಿದ್ದಾರೆ ಎಂಬ ಆರೋಪದ ಬೆನ್ನಲ್ಲೇ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಶಾಸಕ ಝಮೀರ್ ಅಹ್ಮದ್ ಖಾನ್ ನಗರದ ಬನ್ನಿಮಂಟಪದಲ್ಲಿನ ಖಾಸಗಿ ಹೋಟೆಲ್ ನಲ್ಲಿ ಶುಕ್ರವಾರ ರಾತ್ರಿ ಗೌಪ್ಯ ಮಾತುಕತೆ ನಡೆಸಿದ್ದಾರೆನ್ನಲಾಗಿದೆ.
ಈ ವೇಳೆ ಪ್ರತಿಕ್ರಿಯೆ ಪಡೆಯಲು ಹೋದ ಮಾಧ್ಯಮ ಪ್ರತಿನಿಧಿಗಳ ವಿರುದ್ಧ ಸಿಡಿಮಿಡಿಗೊಂಡ ಸಿದ್ದರಾಮಯ್ಯ, 'ನಾವು ತೆಲಂಗಾಣ ಅಧ್ಯಕ್ಷರ ಹೇಳಿಕೆ ಬಗ್ಗೆ ಮಾತನಾಡುವುದಿಲ್ಲ, ಖಾಸಗಿ ಸಭೆಗಳಿಗೆಲ್ಲ ಏಕೆ ಬರುತ್ತೀರಿ? ನೀವೆಲ್ಲ ಹೋಗಿ' ಎಂದು ಹೊರಕಳುಹಿಸಿದರು.
ಇದೇ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಶಾಸಕ ಝಮೀರ್ ಅಹ್ಮದ್, ನನಗಂತೂ ಯಾವುದೇ ಆಫರ್ ಬಂದಿಲ್ಲ, ನಾನು ತೆಲಂಗಾಣಕ್ಕೆ ಹೋಗಿದ್ದು ನಿಜ. ಆದರೆ 500 ಕೋಟಿ ರೂ. ಆಫರ್ ಯಾರೂ ನನಗೆ ಕೊಟ್ಟಿಲ್ಲ. ಆ ಬಗ್ಗೆ ಗೊತ್ತೂ ಇಲ್ಲ. ಅಲ್ಲಿನ ಕಾಂಗ್ರೆಸ್ ಅಧ್ಯಕ್ಷ ರೇವಂತ ರೆಡ್ಡಿ ನನಗೆ ಮುಖ್ಯಮಂತ್ರಿಯನ್ನು ಭೇಟಿ ಮಾಡಿಸಿದ್ದರು. ಅದೊಂದು ಸೌಜನ್ಯ ಭೇಟಿಯಾಗಿತ್ತು ಎಂದು ಹೇಳಿದರು.