ಸಂಸದೆ ಸುಮಲತಾ ಅಂಬರೀಷ್ ಎದುರೇ ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರ ಹೊಡೆದಾಟ
ಮಂಡ್ಯ, ಜ.23: ಸಂಸದೆ ಸುಮಲತಾ ಅಂಬರೀಷ್ ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪರಸ್ಪರ ಕೈ ಕೈ ಮಿಲಾಯಿಸಿ ಬಡಿದಾಡಿಕೊಂಡ ಘಟನೆ ತಾಲೂಕಿನ ಬಿ.ಗೌಡಗೆರೆ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಗ್ರಾಮದಲ್ಲಿ ಜೀರ್ಣೋದ್ಧಾರಗೊಂಡ ಮಲೆಮಹದೇಶ್ವರ ಸ್ವಾಮಿ ದೇವಾಲಯದ ಉದ್ಘಾಟನಾ ಸಮಾರಂಭದ ವೇಳೆ ಈ ಘಟನೆ ನಡೆದಿದ್ದು, ಮಧ್ಯಪ್ರವೇಶ ಮಾಡಿದ ಪೊಲೀಸರು ಎರಡೂ ಗುಂಪಿನವರನ್ನು ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ದೇವಸ್ಥಾನದ ಉದ್ಘಾಟನಾ ಸಮಾರಂಭಕ್ಕೆ ಪಕ್ಷಾತೀತವಾಗಿ ರಾಜಕೀಯ ಮುಖಂಡರನ್ನು ಆಹ್ವಾನಿಸಲಾಗಿತ್ತು. ಪೂಜಾ ವಿಧಿವಿಧಾನಗಳು, ಜಾನಪದ ಕಲಾತಂಡಗಳ ಮೆರವಣಿಗೆ ವಿಜೃಂಭಣೆಯಿಂದ ನೆರವೇರಿತು. ನಂತರ, ಗಣ್ಯರನ್ನು ಸನ್ಮಾನಿಸುವ ವೇಳೆ ಗಲಾಟೆ ಪ್ರಾರಂಭವಾಯಿತು. ಜೆಡಿಎಸ್ ಮುಖಂಡರನ್ನು ವೇದಿಕೆಯ ಮುಂಭಾಗದಲ್ಲೇ ಸನ್ಮಾನಿಸಿ, ಸಂಸದೆ ಸುಮಲತಾ ಅವರನ್ನು ವೇದಿಕೆ ಮೇಲೆ ಸನ್ಮಾನಿಸಲು ಮುಂದಾದ್ದರಿಂದ ಕುಪಿತಗೊಂಡ ಕೆಲವು ಜೆಡಿಎಸ್ ಕಾರ್ಯಕರ್ತರು ಆಕ್ಷೇಪಿಸಿದ್ದಾರೆ. ಸಿಟ್ಟಿಗೆದ್ದು ಕುರ್ಚಿಗಳನ್ನು ಬಿಸಾಡಿದರು ಎನ್ನಲಾಗಿದೆ.
ಇದಲ್ಲದೆ, ಗ್ರಾಮದಲ್ಲಿ ಸುಮಲತಾ ಮತ್ತು ಕಾಂಗ್ರೆಸ್ ಮುಖಂಡರ ಪ್ಲೆಕ್ಸ್ಗಳನ್ನು ಹಾಕಿ ಜೆಡಿಎಸ್ ಮುಖಂಡರನ್ನು ಕಡೆಗಣಿಸಿದ್ದಾರೆಂದು ಕುಪಿತಗೊಂಡ ಜೆಡಿಎಸ್ ಕಾರ್ಯಕರ್ತರು ಪ್ಲೆಕ್ಸ್ಗಳನ್ನೂ ಹರಿದು ಬಿಸಾಡಿ ಆಕ್ರೋಶ ವ್ಯಕ್ತಪಡಿಸಿದರೆನ್ನಲಾಗಿದೆ.
ಜೆಡಿಎಸ್ ಕಾರ್ಯಕರ್ತರ ವರ್ತನೆಯನ್ನು ಕಾಂಗ್ರೆಸ್ ಕಾರ್ಯಕರ್ತರು ಖಂಡಿಸಿದ್ದಾರೆ. ಈ ಸಂದರ್ಭ ಮಾತಿಗೆ ಮಾತು ಬೆಳೆದು ಎರಡೂ ಪಕ್ಷದವರು ಕೈ ಕೈ ಮಿಲಾಯಿಸಿದ್ದಾರೆ. ಇದರಿಂದ ಬೇಸತ್ತ ಸುಮಲತಾ ಅಂಬರೀಷ್ ಅವರು ವೇದಿಕೆ ಇಳಿದು ಹೋಗಿ ಕಾರಿನಲ್ಲಿ ಕುಳಿತುಕೊಂಡರು.
ಪೊಲೀಸರು ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಗೊಂಡ ನಂತರ, ಸುಮಲತಾ ಅವರ ಮನವೊಲಿಸಿದ ಗ್ರಾಮಸ್ಥರು, ಅವರನ್ನು ವೇದಿಕೆಗೆ ಕರೆತಂದು ಸನ್ಮಾನ ಮಾಡಿದರೆಂದು ತಿಳಿದು ಬಂದಿದೆ.
ಕಾರ್ಯಕ್ರಮದಲ್ಲಿ ಜೆಡಿಎಸ್ ಶಾಸಕ ಎಂ.ಶ್ರೀನಿವಾಸ್, ಮನ್ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು, ಜಿಪಂ ಮಾಜಿ ಸದಸ್ಯ ಎಚ್.ಎನ್.ಯೋಗೇಶ್, ಕಾಂಗ್ರೆಸ್ನ ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಡಾ.ಎಚ್.ಕೃಷ್ಣ, ಅಮರಾವತಿ ಚಂದ್ರಶೇಖರ್, ಇತರ ಮುಖಂಡರು ಭಾಗವಹಿಸಿದ್ದರು.
ಇದನ್ನೂ ಓದಿ: ಎಲ್ಲರೂ ವಿಧಾನಸಭೆ ಚುನಾವಣೆಗೆ ನಿಲ್ಲುವಂತೆ ಕೇಳುತ್ತಿದ್ದಾರೆ: ಸಂಸದೆ ಸುಮಲತಾ