ಚಾಮರಾಜನಗರ | ಮಹಿಳೆಯೊಂದಿಗೆ ಅಸಭ್ಯ ವರ್ತನೆ ಆರೋಪ: ಹೆಡ್ ಕಾನ್ಸ್ಟೆಬಲ್ ಅಮಾನತು
ಚಾಮರಾಜನಗರ: ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿ ಕರ್ತವ್ಯಲೋಪ ಎಸಗಿದ ಆರೋಪದಲ್ಲಿ ಚಾಮರಾಜನಗರ ಪೂರ್ವ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೆಬಲ್ ಮುನಿಯಪ್ಪ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಎರಡು ದಿನಗಳ ಹಿಂದೆ ಸಿಮ್ಸ್ ಆಸ್ಪತ್ರೆಗೆ ಬಂದಿದ್ದ ಹನೂರು ತಾಲೂಕಿನ ಮಹಿಳೆಯೊಬ್ಬರನ್ನು ಮುನಿಯಪ್ಪ ಅವರು ತಮ್ಮ ವಸತಿಗೃಹಕ್ಕೆ ಕರೆದುಕೊಂಡು ಹೋಗಿ ಅವರೊಂದಿಗೆ ಅಶ್ಲೀಲವಾಗಿ ವರ್ತಿಸಿದ್ದರು ಎಂದು ಆರೋಪಿಸಲಾಗಿದೆ. ಆ ಬಳಿಕ ಅಸ್ವಸ್ಥಗೊಂಡ ಮಹಿಳೆಯನ್ನು ಸಿಮ್ಸ್ ಆಸ್ಪತ್ರೆಯಲ್ಲಿ ಬಿಟ್ಟು ಹೋಗಿದ್ದರೆನ್ನಲಾಗಿದ್ದು, ಈ ಬಗ್ಗೆ ಮಹಿಳೆಗೆ ಚಿಕಿತ್ಸೆ ನೀಡಿದ್ದ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಈ ಸಂಬಂಧ ಮಹಿಳೆ ದೂರು ನೀಡಿಲ್ಲ. ಆದರೆ, ಆಸ್ಪತ್ರೆಯಿಂದ ಠಾಣೆಗೆ ಬಂದ ಎಂಎಲ್ಸಿ (ಮೆಡಿಕಲ್ ಲೀಗಲ್ ಕೇಸ್) ಆಧಾರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್ ಅವರು ಮುನಿಯಪ್ಪ ಅವರನ್ನು ಅಮಾನತು ಮಾಡಿ ಶನಿವಾರ ಸಂಜೆ ಆದೇಶ ಹೊರಡಿಸಿದ್ದಾರೆ.
‘ಮಹಿಳೆ ನಮಗೆ ದೂರು ಕೊಟ್ಟಿಲ್ಲ. ಆದರೆ ನಮ್ಮ ಸಿಬ್ಬಂದಿಯೊಬ್ಬರು ಆಕೆಯೊಂದಿಗೆ ಅಸಭ್ಯವಾಗಿ ನಡೆದುಕೊಂಡಿರುವ ಮಾಹಿತಿ, ಅದಕ್ಕೆ ಪೂರಕ ದಾಖಲೆ ನಮಗೆ ಸಿಕ್ಕಿದೆ. ಹಾಗಾಗಿ, ಸ್ವಯಂ ಪ್ರೇರಿತವಾಗಿ ಈ ಕ್ರಮ ತೆಗೆದುಕೊಂಡಿದ್ದೇವೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್ ತಿಳಿಸಿದರು.
ವೈದ್ಯರು ನಗರದ ಪಟ್ಟಣ ಠಾಣೆಗೆ ಮಹಿಳೆ ದಾಖಲಾಗಿರುವ ಬಗ್ಗೆ ಮಾಹಿತಿ ನೀಡಿದ್ದರು. ಈ ಪ್ರಕರಣ ಮಹಿಳಾ ಠಾಣೆ ವ್ಯಾಪ್ತಿಗೆ ಬರುವುದರಿಂದ, ಮಹಿಳಾ ಠಾಣೆಯ ಅಧಿಕಾರಿಗಳ ಗಮನಕ್ಕೆ ಪಟ್ಟಣ ಪೊಲೀಸರು ಈ ವಿಚಾರ ತಂದಿದ್ದರು ಎಂದು ಗೊತ್ತಾಗಿದೆ.