ಸಮಾಜದ ಅಸಮಾನತೆ ತೊಡೆದು ಹಾಕಲು ವಿದ್ಯಾರ್ಥಿಗಳು ಶ್ರಮಿಸಬೇಕಿದೆ: ನಟ ಚೇತನ್ ಅಹಿಂಸಾ
ತುಮಕೂರು.ಜ.31:ನಮ್ಮ ಸಮಾಜ ಅಸಮಾನತೆ ಕೂಪವಾಗಿದ್ದು,ಇದನ್ನು ಬದಲಾವಣೆ ಮಾಡುತ್ತಾ ವಿದ್ಯಾರ್ಥಿಗಳು ಆಲೋಚಿಸಬೇಕಾಗಿದೆ ಎಂದು ನಟ ಚೇತನ್ ಅಹಿಂಸಾ ಅಭಿಪ್ರಾಯಪಟ್ಟಿದ್ದಾರೆ.
ತುಮಕೂರು ನಗರದ ಕನ್ನಡಭವನದಲ್ಲಿ ನಟ ಚೇತನ್ ಪೌಂಢೇಷನ್ ವತಿಯಿಂದ ಹಮ್ಮಿಕೊಂಡಿದ್ದ ಮಹಿಳಾ ಸರಕಾರಿ ಪದವಿ ಕಾಲೇಜಿಗೆ ಕನ್ನಡ ಸಾಹಿತ್ಯ ಪುಸ್ತಕಗಳನ್ನು ಕೊಡುಗೆ ನೀಡುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡುತಿದ್ದ ಅವರು, ಮಹಿಳೆಯರು ಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಾರೆ. ಬಟ್ಟೆ ಹೊಗೆಯುತ್ತಾರೆ.ಮಕ್ಕಳ ಪಾಲನೆಯನ್ನು ಮಾಡುತ್ತಾರೆ. ಹೊರಗಡೆಯೂ ದುಡಿಯುತ್ತಾರೆ ಆದರೂ ಅವರ ಈ ಕೆಲಸಗಳಿಗೆ ಬೆಲೆ ಇಲ್ಲವಾಗಿದೆ. ಮಹಿಳೆಯರು ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ನಲುಗುತ್ತಿದ್ದು ಇದರಿಂದ ಹೊರಬರಲು ಹೋರಾಟ ನಡೆಸಬೇಕಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಪಠ್ಯಪುಸ್ತಕಗಳ ಜೊತೆಗೆ ವಿಚಾರ ಸಾಹಿತ್ಯವನ್ನು ಓದಬೇಕು. ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕು.ಆ ಮೂಲಕ ಸಮಾಜ ಬದಲಾವಣೆ ಶ್ರಮಿಸಬೇಕು. ಭಗತ್ಸಿಂಗ್ ಜೈಲಲ್ಲಿದ್ದಾಗ ಜೈಲಿನಲ್ಲಿ ಗ್ರಂಥಾಲಯ ಇರಬೇಕೆಂದು ಹೇಳಿ ನನಗೆ ಓದಲು ಪುಸ್ತಕಗಳನ್ನು ನೀಡಬೇಕು ಎಂದು ಕೇಳಿದ್ದ.ಹಾಗೆಯೇ ವಿದ್ಯಾರ್ಥಿಗಳು ಅಂಧಕಾರವನ್ನು ಹೋಗಲಾಡಿಸಲು ಮುಂದಾಗಬೇಕು ಎಂದು ತಿಳಿಸಿದರು.
ವಿದ್ಯಾರ್ಥಿಗಳು ಬುದ್ದ, ಬಸವಣ್ಣ, ಮಹಾತ್ಮ ಗಾಂಧೀಜಿ, ಡಾ.ಬಿ.ಆರ್. ಅಂಬೇಡ್ಕರ್, ಪೆರಿಯಾರ್ ಚಿಂತನೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಈ ಮೂಲಕ ಅನ್ಯಾಯದ ವಿರುದ್ಧ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.
ನಟ ಚೇತನ್ ಪೌಂಢೇಷನ್ ನ ಸಂಸ್ಥಾಪಕ ಹಾಗೂ ಚೇತನ್ ಅವರ ತಂದೆ ವೈದ್ಯ ಡಾ.ಅಮರ್ ಮಾತನಾಡಿ, ಪುಸ್ತಕಗಳು ನಮ್ಮ ಜ್ಞಾನ ವಿಸ್ತರಣೆಗೆ ಸಹಕಾರಿಯಾಗಿವೆ.ಇಳಿ ವಯಸ್ಸಿನಲ್ಲೂ ಅವುಗಳನ್ನು ಓದುತ್ತ ಏಕಾಂಗಿತವನ್ನು ಕಳೆಯುತ್ತವೆ.ವಿದ್ಯಾರ್ಥಿಗಳು ನಮ್ಮ ದೇಹವನ್ನು ದೇವಾಲಯವನ್ನಾಗಿ ಮಾಡಿಕೊಂಡು ಜೀವನ ನಡೆಸಬೇಕು. ಸ್ಥಾವರಕ್ಕೆ ಅಳಿವುಂಟು ಜಂಗಮ್ಮಕ್ಕೆ ಅಳಿವಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಸಾಹಿತಿ ಉಜ್ಜಜ್ಜಿ ರಾಜಣ್ಣ, ವಿಮರ್ಶಕ ಡಾ.ರವಿಕುಮಾರ್ ನೀಹ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸಿದ್ದಲಿಂಗಪ್ಪ,ಮಹಿಳಾ ಸರಕಾರಿ ಪದವಿ ಕಾಲೇಜಿನ ಗ್ರಂಥಪಾಲಕರು ಮಾತನಾಡಿದರು.ವೇದಿಕೆಯಲ್ಲಿ ಮರಿಚನ್ನಮ್ಮ, ರಂಗಧಾಮಯ್ಯ ಮೊದಲಾದವರು ಹಾಜರಿದ್ದರು.ಅತಿಥಿ ಸಹಾಯಕ ಪ್ರಾಧ್ಯಾಪಕ ಜಿ.ಕೆ.ನಾಗಣ್ಣ ಪ್ರಾಸ್ತಾವಿಕ ಮಾತುಗಳನ್ನಾಡಿದರು.