ಕೃಷಿ ವಿರೋಧಿ, ಕಾರ್ಪೊರೇಟ್ ಶಕ್ತಿಗಳ ಪರ: ಬಜೆಟ್ ಬಗ್ಗೆ ಬಡಗಲಪುರ ನಾಗೇಂದ್ರ ಪ್ರತಿಕ್ರಿಯೆ
ಮೈಸೂರು,ಫೆ.1: 2023-2024ನೇ ಸಾಲಿನ ಕೇಂದ್ರ ಬಜೆಟ್ ಕೃಷಿ ವಿರೋಧಿಯಾಗಿದ್ದು, ಕಾರ್ಪೊರೇಟ್ ಶಕ್ತಿಗಳ ಪರವಾಗಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆರೋಪಿಸಿದರು.
ಕೇಂದ್ರದ ಬಜೆಟ್ ಕುರಿತು ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೃತಕ ಬುದ್ಧಿಮತ್ತೆಯನ್ನು ಕೃಷಿ ಕ್ಷೇತ್ರಕ್ಕೆ ಅಳವಡಿಸುವುದಾಗಿ ಬಜೆಟ್ ಭಾಷಣದಲ್ಲಿ ಹಣಕಾಸು ಸಚಿವೆ ಹೇಳಿದ್ದಾರೆ. ಆದರೆ, ಈ ತಂತ್ರಜ್ಞಾನದಿಂದ ಈಗಾಗಲೇ ಹತ್ತಿ ಬೆಳೆಗಾರರಿಗೆ ತೊಂದರೆಗಿದೆ. ಹಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ತಂತ್ರಜ್ಞಾನ ಅವಳವಡಿಕೆ ಮಾಡಬಾರದು ಎಂದು ತಿಳಿಸಿದರು.
ಭಾರತೀಯ ರೈತರು ಬುದ್ಧಿವಂತರು. ಅವರಿಗೆ ಪರಿಸರ ಹಾಗೂ ಪಾರಂಪರಿಕ ಜ್ಞಾನ ಹೆಚ್ಚಿದೆ. ದುಡಿಯುವ ಕೈಗಳಿಗೆ ಕೆಲಸ ನೀಡುವ ದೂರದೃಷ್ಟಿಯ ಯೋಜನೆಗಳು ಬಜೆಟ್ನಲ್ಲಿಲ್ಲ. ಬಡವರು, ಮಧ್ಯಮ ವರ್ಗದವರು, ರೈತರು, ಕೂಲಿ ಕಾರ್ಮಿಕರಿಗೆ ಯಾವುದೇ ಅನುಕೂಲವಿಲ್ಲ. ಕೃಷಿಗೆ ಉತ್ತೇಜಿಸುವ ಕಾರ್ಯಕ್ರಮದ ಬದಲು ಬಂಡವಾಳಶಾಹಿಗಳ ಪರವಾದ ಬಜೆಟ್ ಇದಾಗಿದೆ ಎಂದು ವಿಶ್ಲೇಷಿಸಿದರು.
ಕೃಷಿ ಕ್ಷೇತ್ರಕ್ಕೆ 20 ಲಕ್ಷ ಕೋಟಿ ಅನುದಾನ ನೀಡಲಾಗುವುದೆಂದು ಹೇಳಿದ್ದಾರೆ. ಅದು ಏನೇನೂ ಸಾಲದು. ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲಸೌಲಭ್ಯ ನೀಡಬೇಕು ಎಂದು ಆಗ್ರಹಿಸಿದರು.