ಪಾಕಿಸ್ತಾನದಲ್ಲಿ ಸರ್ವೆ ನಡೆಸಿದರೆ ಕಾಂಗ್ರೆಸ್ ಗೆ 150 ಅಲ್ಲ, 200 ಸ್ಥಾನವೇ ಬರಬಹುದು: ಸಿ.ಟಿ.ರವಿ ವ್ಯಂಗ್ಯ
ಚಿಕ್ಕಮಗಳೂರು, ಫೆ.4: ಕಾಂಗ್ರೆಸ್ ಪಕ್ಷದವರು ಪಾಕಿಸ್ತಾನದಲ್ಲಿ ಸರ್ವೇ ನಡೆಸಿದರೆ 150 ಸ್ಥಾನಗಳಲ್ಲ, 200 ಸ್ಥಾನಗಳೇ ಬರಬಹುದು. ಆದರೆ, ನಮ್ಮ ರಾಜ್ಯ-ದೇಶದಲ್ಲಿ ಇದು ಸಾಧ್ಯವಿಲ್ಲ. ದೇಶದಲ್ಲಿ ದಿನೇ-ದಿನೇ ಕಾಂಗ್ರೆಸ್ ಪಕ್ಷಕ್ಕೆ ಓಟು ನೀಡುವವರ ಸಂಖ್ಯೆ ಕಡಿಮೆ ಆಗುತ್ತಿದೆ. ಇಲ್ಲಿ ಕಾಂಗ್ರೆಸ್ ಠೇವಣಿ ಉಳಿಸಿಕೊಳ್ಳುವದೂ ಕಷ್ಟ ಎಂಬಂತಾಗಿದೆ ಎಂದು ಶಾಸಕ ಸಿ.ಟಿ.ರವಿ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಸುಳ್ಳು ಯಾರು ಹೇಳುತ್ತಾರೆ ಎಂದು ಸಿದ್ದರಾಮಯ್ಯನವರಿಗೆ ಚೆನ್ನಾಗಿ ಗೊತ್ತಿದೆ. ಚಿಕ್ಕಮಗಳೂರಿಗೆ ಸ್ಯಾಂಕ್ಷನ್ ಆಗಿದ್ದ ಮೆಡಿಕಲ್ ಕಾಲೇಜನ್ನು ರದ್ದು ಮಾಡಿ, ದತ್ತಪೀಠಕ್ಕೆ ಮೋಸ ಮಾಡಿದ್ದವರು ಸಿದ್ದರಾಮಯ್ಯ. ಡಿಜೆಹಳ್ಳಿ ಹಾಗೂ ಕೆಜೆಹಳ್ಳಿ ಗ್ಯಾಂಗಿಗೆ ಸಪೋರ್ಟ್ ಮಾಡಿದ್ದು ಕೂಡ ಕಾಂಗ್ರೆಸ್ ಪಕ್ಷ. ಎಸ್.ಡಿ.ಪಿ.ಐ. ಮೇಲಿನ ಕೇಸ್ ಹಿಂಪಡೆದು, ಕೇಸ್ ಹಿಂಪಡೆದಿದ್ದು ನಾವಲ್ಲ ಅಂದವರೂ ಕಾಂಗ್ರೆಸ್ ಎಂದು ಟೀಕಿಸಿದರು.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಒಂದು ಸೀಟ್ ಬರಲ್ಲ ಎಂದಿದ್ದರು, ಆದರೆ ಜನ 25 ಸ್ಥಾನ ಗೆಲ್ಲಿಸಿದ್ದರು. ಅಪ್ಪನ ಆಣೆ ಯಡಿಯೂರಪ್ಪ ಸಿಎಂ ಆಗಲ್ಲ ಎಂದಿದ್ದರು. ಬಿಎಸ್ವೈ ಸಿಎಂ ಆದರು. ಸುಳ್ಳು ಹೇಳಿದ್ದು ಯಾರೂ ಎಂದು ಪ್ರಶ್ನಿಸಿದ ಅವರು, ನಾನು ಪಕ್ಕಾ ಆರೆಸ್ಸೆಸ್, ಅದರಲ್ಲಿ ನೋ ಡೌಟ್. ಸಂಘವು ಸಂಸ್ಕಾರ ಮತ್ತು ದೇಶಭಕ್ತಿಯನ್ನು ಕಲಿಸುತ್ತೆ, ನಾನು ಸುಳ್ಳು ಹೇಳುವ ರಾಜಕಾರಣಿಯಲ್ಲ. ನಾವು ಏನು ಹೇಳ್ತಿವೋ ಅದನ್ನೇ ಮಾಡೋರು, ಏನ್ ಮಾಡ್ತೀವೋ ಅದನ್ನೇ ಹೇಳೋರು ಎಂದರು.
ಮೀಸಲಾತಿ ಹೆಚ್ಚಳ ಮಾಡುತ್ತೇವೆ ಎಂದು ದಲಿತರಿಗೆ ಕಾಂಗ್ರೆಸ್ ಮೋಸ ಮಾಡಿದೆ. ಆದರೆ, ದಲಿತರಿಗೆ ಮೀಸಲಾತಿ ಹೆಚ್ಚಳ ಮಾಡಿದ್ದು ಬಿಜೆಪಿ. ಪರಮೇಶ್ವರ್ ಹಾಗೂ ಮುನಿಯಪ್ಪರನ್ನ ಸೋಲಿಸಿದ್ದೂ ಇದೇ ಕಾಂಗ್ರೆಸ್ಸಿಗರು. ಇದು ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ ಎನ್ನುವಷ್ಟೇ ಬಹಿರಂಗ ಸತ್ಯ. ಸಿದ್ದು ಎದೆಯೊಳಗಿಂದ ನಾನೇ ಸೋಲಿಸಿದ್ದು ಎಂದು ಕೇಳಿಸುತ್ತೆ. ಪರಮೇಶ್ವರ್ ಸೋಲಿಸಲು ಹಫ್ತಾ ಯಾರಿಗೆ ಕೊಟ್ಟಿದ್ದರೋ ಅವರೇ ಹೊರಗಡೆ ಅದನ್ನು ಹೇಳಿದ್ದಾರೆ ಎಂದರು.