ಅರಕಲಗೂಡು ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಬಿಜೆಪಿ ನಾಯಕನಿಗೆ ಜೆಡಿಎಸ್ ನಿಂದ ಟಿಕೆಟ್!
ಬೆಂಗಳೂರು: ಫೆ. 04: 'ಅರಕಲಗೂಡು ಕ್ಷೇತ್ರದಿಂದ ಮಾಜಿ ಸಚಿವ ಎ.ಮಂಜು ಅವರು ಜೆಡಿಎಸ್ ಅಭ್ಯರ್ಥಿ ಆಗಲಿದ್ದಾರೆ. ಈಗಾಗಲೇ ಮಂಜು ಜೊತೆ ಮಾತುಕತೆ ನಡೆದಿದ್ದು, ಬಹುತೇಕ ಅಂತಿಮ ಹಂತದಲ್ಲಿದೆ' ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಾತನಾಡಿದ ಕುಮಾರಸ್ವಾಮಿ, 'ಈ ವಾರದಲ್ಲಿ ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡುತ್ತೇವೆ. ಯಾವುದೇ ಕ್ಷೇತ್ರದ ಅಭ್ಯರ್ಥಿ ಬಗ್ಗೆ ನಮಗೆ ಗೊಂದಲ ಇಲ್ಲ. ಎಟಿ ರಾಮಸ್ವಾಮಿ ಹಾಗೂ ಅರಸೀಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡರು ಕಳೆದ ಎರಡು ವರ್ಷಗಳಿಂದ ಪಕ್ಷದ ಸಭೆ ಕರೆದಾಗ ಅವರು ಬಂದಿಲ್ಲ. ಎರಡು ವರ್ಷದಿಂದ ಅವರು ಪಕ್ಷದಿಂದ ದೂರ ಇದ್ದಾರೆ. ಹಾಗಾಗಿ, ಅವರು ಯಾವ ನಿರ್ಧಾರ ತೆಗೆದುಕೊಂಡಿದ್ದಾರೋ ಗೊತ್ತಿಲ್ಲ' ಎಂದು ಸ್ಪಷ್ಟಪಡಿಸಿದರು.
ನಾನು ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದೆ: ಎ.ಮಂಜು
ಇನ್ನು ಈ ಬಗ್ಗೆ ಹಾಸನದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಎ.ಮಂಜು , ಟಿಕೆಟ್ ಘೋಷಣೆ ಬಗ್ಗೆ ನನಗೇನು ಗೊತ್ತಿಲ. ಪತ್ರಕರ್ತರು ಹೇಳಿದ ಮೇಲೆಯೇ ನನಗೆ ಗೊತ್ತಾಯಿತು. ನಾನು ದೇವೇಗೌಡರು, ರೇವಣ್ಣ ಜೊತೆ ಮಾತನಾಡಿದ್ದು ಸತ್ಯ, ನಾನು ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದೆ ಎಂಬುದೂ ನಿಜ. ಕಾಂಗ್ರೆಸ್ನವರು ನಮ್ಮನ್ನು ಗುರುತಿಸುವಲ್ಲಿ ವಿಫಲರಾದರು. ನಾನು ಕಾಂಗ್ರೆಸ್ನಲ್ಲಿದ್ದಾಗ 16 ಜಿಲ್ಲಾ ಪಂಚಾಯತ್, ಒಂದು ಎಂಎಲ್ಸಿ ಗೆಲ್ಲಿಸಿ ದಾಖಲೆ ಮಾಡಿದ್ದೆ. ಅದನ್ನು ಉಪಯೋಗಿಸಿಕೊಳ್ಳುವಲ್ಲಿ ವಿಫಲರಾದರು. ನಾನು ಸುರ್ಜೆವಾಲಾ, ಡಿಕೆಶಿ ಜೊತೆ ಮಾತನಾಡಿದ್ದೆ. ಅವರು ಹೊಳೆನರಸೀಪುರದಲ್ಲಿ ನಿಲ್ಲು ಎಂದಿದ್ದರು. ನಾನು ಅರಕಲಗೂಡು ಬಿಟ್ಟು ಹೋಗಲ್ಲ ಅಂದಿದ್ದೆ. ಈಗ ಜೆಡಿಎಸ್ ನವರು ನನ್ನನ್ನು ಗುರುತಿಸಿದ್ದಾರೆ. ಕುಮಾರಸ್ವಾಮಿಗೆ ಅಭಾರಿಯಾಗಿರುತ್ತೇನೆ ಎಂದು ಸಂತಸ ವ್ಯಕ್ತಡಿಸಿದರು.
2019ರಲ್ಲಿ ಕಾಂಗ್ರೆಸ್ ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದ ಎ.ಮಂಜು ಬಳಿಕ ಹಾಸನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಆಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದರು. ಕಳೆದ ಕೆಲ ತಿಂಗಳಿಂದ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿರುವ ಎ.ಮಂಜು ಅವರಿಗೆ ಜೆಡಿಎಸ್ ನಿಂದ ಟಿಕಟ್ ಘೋಷಿಸಲಾಗಿದೆ.
ಇದನ್ನೂ ಓದಿ; ಪುತ್ರನಿಗೆ ಕಾಂಗ್ರೆಸ್ ಟಿಕೆಟ್: ಎ.ಮಂಜುವನ್ನು ಜವಾಬ್ದಾರಿಯಿಂದ ಬಿಡುಗಡೆಗೊಳಿಸಿದ ಬಿಜೆಪಿ