ನಾನು ಜೆಡಿಎಸ್ನಲ್ಲೇ ಇದ್ದೇನೆ, ‘ಚಕ್ರವ್ಯೂಹ’ದಲ್ಲಿ ಸಿಲುಕುವ ಪ್ರಶ್ನೆಯೇ ಇಲ್ಲ: ಶಾಸಕ ಶಿವಲಿಂಗೇಗೌಡ
ಬೆಂಗಳೂರು, ಫೆ. 13: ‘ಅರಸೀಕೆರೆ ಕ್ಷೇತ್ರದ ಜನರ ರಕ್ಷಣೆ, ಬಲ ನನಗೆ ಇರುವವರೆಗೂ ನಾನು ಅರ್ಜುನ. ಅಭಿಮನ್ಯುವಿನಂತೆ ಯಾವುದೇ ಸಂದರ್ಭದಲ್ಲಿಯೂ ನಾನು ಚಕ್ರವ್ಯೂಹದಲ್ಲಿ ಸಿಲುಕಲು ಸಾಧ್ಯವಿಲ್ಲ’ ಎಂದು ಜೆಡಿಎಸ್ ಸದಸ್ಯ ಕೆ.ಎಂ.ಶಿವಲಿಂಗೇಗೌಡ ತಮ್ಮದೇ ದಾಟಿಯಲ್ಲಿ ರಾಜಕೀಯ ನಡೆಯ ಬಗ್ಗೆ ಸೂಕ್ಷ್ಮವಾಗಿ ತಿಳಿಸಿದರು.
ಸೋಮವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣ ಪ್ರಸ್ತಾವದ ಮೇಲೆ ಆಡಳಿತ ಪಕ್ಷದ ಸದಸ್ಯ ಸಿ.ಟಿ.ರವಿ ಮಾತನಾಡುತ್ತಿದ್ದ ವೇಳೆ ಮಧ್ಯಪ್ರವೇಶಿಸಿದ ಶಿವಲಿಂಗೇಗೌಡ, ‘ನಾನು ಅರಸೀಕೆರೆ ಕ್ಷೇತ್ರದಲ್ಲಿ ಯಾವುದೇ ಒತ್ತಡ, ಗೊಂದಲದಲ್ಲಿಯೂ ಇಲ್ಲ. ಇನ್ನು ಜೆಡಿಎಸ್ನಲ್ಲೇ ಇದ್ದೇನೆ. ಜೆಡಿಎಸ್ಗೆ ರಾಜೀನಾಮೆ ನೀಡಿಲ್ಲ’ ಎಂದು ಸ್ಪಷ್ಟಪಡಿಸಿದರು.
‘ನಾನು ಈಗಲೂ ಜೆಡಿಎಸ್ನಲ್ಲಿದ್ದೇನೆ, ರಾಜೀನಾಮೆ ಕೊಟ್ಟಿಲ್ಲ. ಆ ರಾಜಕೀಯದ ವಿಚಾರ ಬೇಡ. ಹೇಳುವವರಿಲ್ಲ, ಕೇಳುವವರು ಇಲ್ಲ ಎಂದು ರಾಜಕೀಯ ಭಾಷಣ ಸರಿಯಲ್ಲ. ಸದನದ ಮೂಲಕ ರಾಜ್ಯಕ್ಕೆ ತಪ್ಪು ಸಂದೇಶ ಹೋಗಬಾರದು. ರಾಜ್ಯಪಾಲರ ಭಾಷಣದ ಮೇಲೆ ಚರ್ಚಿಸುವ ವೇಳೆ ಪಕ್ಷ ಬಿಡುವವರು, ಇನ್ನೊಂದು ಪಕ್ಷಕ್ಕೆ ಹೋಗುವವರ ಬಗ್ಗೆ ಮಾತೇಕೇ? ಎಂದು ಶಿವಲಿಂಗೇಗೌಡ, ಸಿ.ಟಿ.ರವಿಗೆ ತಿರುಗೇಟು ನೀಡಿದರು.