ಡಬಲ್ ಎಂಜಿನ್ ಸರಕಾರದ ಬೋಗಿಗಳು ಎಲ್ಲಿ?: ಸದನದಲ್ಲಿ ಅಮಿತ್ ಶಾ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ
''ದೇವೇಗೌಡರ ಕುಟುಂಬ ATM ಇದ್ದಂತೆ ಎನ್ನುವುದಕ್ಕೆ ದಾಖಲೆ ಕೊಡಲಿ''
ಬೆಂಗಳೂರು, ಫೆ.16: ‘ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬವನ್ನು ಯಾವನೋ ಗೃಹ ಸಚಿವ ಮಂಡ್ಯಕ್ಕೆ ಬಂದು ಎಟಿಎಂ ಎಂದು ಹೇಳಿದ್ದಾನೆ. ದೇವೇಗೌಡರ ಕುಟುಂಬ ಏನಾದರೂ ಅಂತಹ ಕೆಲಸ ಮಾಡಿದ್ದರೆ ದಾಖಲೆ ಕೊಡಲಿ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಗುರುವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೆಲವು ರಾಜಕೀಯ ಪಕ್ಷಗಳು ರಾಜಕಾರಣವನ್ನು ವ್ಯಾಪಾರ ಮಾಡಿಕೊಂಡಿದ್ದಾರೆ. ಕೇಂದ್ರ ಗೃಹ ಸಚಿವರು ವಾರಕ್ಕೆ ನಾಲ್ಕು ದಿನ ರಾಜ್ಯಕ್ಕೆ ಅಭಿವೃದ್ಧಿಗಾಗಿ ಬರುತ್ತಿದ್ದಾರೋ, ಚುನಾವಣೆಗೆ ಬರುತ್ತಿದ್ದಾರೋ? ನಾವು ಏನೆ ಮಾಡಿದರೂ ಚುನಾವಣೆಗಾಗಿ, ಇವರು ಮಾಡೊದೆಲ್ಲ ಅಭಿವೃದ್ಧಿಗೆ ಅಲ್ಲವೇ? ಎಂದು ಪ್ರಶ್ನಿಸಿದರು.
ಬಿಜೆಪಿಯ ಶಾಸಕ ಸಿ.ಟಿ.ರವಿ ತಮ್ಮದು ಸೈದ್ಧಾಂತಿಕ ಬದ್ಧತೆಯಿರುವ ಪಕ್ಷ ಎಂದು ಹೇಳಿಕೊಂಡಿದ್ದಾರೆ. ಯಡಿಯೂರಪ್ಪ ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದ್ದಾಗ ಬಸವರಾಜ ಬೊಮ್ಮಾಯಿಗೆ ಜಲಸಂಪನ್ಮೂಲದಂತಹ ದೊಡ್ಡ ಖಾತೆ ನೀಡಿದ್ದೆ. ಅವರು ಕೋಟ್ಯಂತರ ರೂ.ಲೂಟಿ ಮೂಡಿದ್ದಾರೆ. ಬೊಮ್ಮಾಯಿಯನ್ನು ಬೆಳೆಸಿ ತಪ್ಪು ಮಾಡಿದೆ. ಕೆಜೆಪಿ ಸೇರುವುದಾಗಿ ಹೇಳಿ ಬಳಿಕ ನನ್ನ ಬೆನ್ನಿಗೆ ಚೂರಿ ಹಾಕಿದ್ದಾರೆಂದು ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದರು ಎಂದು ದಿನಪತ್ರಿಕೆಯೊಂದರಲ್ಲಿ ಬಂದಿದ್ದ ಸುದ್ದಿಯನ್ನು ಕುಮಾರಸ್ವಾಮಿ ಉಲ್ಲೇಖಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾನೂನು ಸಚಿವ ಮಾಧುಸ್ವಾಮಿ, ‘ಯಡಿಯೂರಪ್ಪ ಸಹಕಾರ ಪಡೆದು ನೀವು ಬೆಳೆದಿಲ್ಲವೇ?’ ಎಂದರು. ನಮ್ಮ ಪಕ್ಷದ ಬಗ್ಗೆ ಚರ್ಚೆ ಮಾಡುತ್ತೀರಾ. ಯಾವನೋ ಗೃಹ ಸಚಿವ ಬಂದು ದೇವೇಗೌಡರ ಕುಟುಂಬವನ್ನು ಎಟಿಎಂ ಎಂದು ಹೇಳಿದ್ದಾನೆ. ದಾಖಲೆಗಳಿದ್ದರೆ ಕೊಡಲಿ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ನೀವು ಹೊರಗಡೆ ಎಲ್ಲ, ಯಾರ ಬಗ್ಗೆ ಏನೇನು ಮಾತನಾಡಿದ್ದೀರಾ ಅನ್ನೋದು ಜಗತ್ತಿಗೆ ಗೊತ್ತು. ಕಾನೂನು ಸಚಿವನಾಗಿ ಸರಕಾರದ ಸಮರ್ಥನೆಗೆ ನಾನು ಬರಲೇಬೇಕು ಎಂದು ಮಾಧುಸ್ವಾಮಿ ಹೇಳಿದರು. ಈ ವೇಳೆ ಮಾಧುಸ್ವಾಮಿ ಹಾಗೂ ಜೆಡಿಎಸ್ ಸದಸ್ಯರ ನಡುವೆ ಪರಸ್ಪರ ವಾಗ್ವಾದ ಏರ್ಪಟ್ಟು, ಜೆಡಿಎಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು.
ದಿನಪತ್ರಿಕೆಗಳಲ್ಲಿ ಬಂದಿರುವ ಸುದ್ದಿಗಳನ್ನು ಉಲ್ಲೇಖಿಸಿ ನೀವು ಮಾತನಾಡಿಲ್ಲವೇ? ನಿಮ್ಮ ಸಿದ್ಧಾಂತಗಳು ಬೇಕಾದಾಗ ಬದಲಾವಣೆಯಾಗುತ್ತದೆಯೇ? ನಮ್ಮನ್ನು ಎಟಿಎಂ ಎಂದು ಕರೆದಿದ್ದೀರಿ, ಆದರೆ, ದೇವೇಗೌಡರು ಯಾವತ್ತು ಆ ರೀತಿ ಮಾಡಿಲ್ಲ. ನಾನು ಮುಖ್ಯಮಂತ್ರಿಯಾಗಿದ್ದಾಗ ಲಾಟರಿ ಹಾಗೂ ಸಾರಾಯಿ ನಿಷೇಧ ಮಾಡಿದೆ. ಆಗ ನನ್ನ ಮೇಲೆ ಎಷ್ಟೆಲ್ಲ ಒತ್ತಡ ಇತ್ತು ಅನ್ನೊದು ಗೊತ್ತಿದೆ. ಇವತ್ತು ಚುನಾವಣೆ ನಡೆಸಲು ಹಣ ಬೇಕು. ಹಾಗಂತ, ಜನರ ಹಣ ಲೂಟಿ ಮಾಡಲು ರಾಜಕಾರಣಕ್ಕೆ ಬಂದಿಲ್ಲ. ಅದರ ಅಗತ್ಯವು ಇಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಡಬಲ್ ಎಂಜಿನ್ ಸರಕಾರದ ಬೋಗಿಗಳು ಎಲ್ಲಿ?:
‘ರಾಜ್ಯಪಾಲರ ಭಾಷಣಕ್ಕೂ ತುರ್ತುಪರಿಸ್ಥಿತಿಗೂ ಏನು ಸಂಬಂಧ? ರಾಜ್ಯಪಾಲರ ಭಾಷಣವನ್ನು ಅನುಮೋದಿಸಿ ಮಾತನಾಡಿದ ಶಾಸಕ ಪಿ.ರಾಜೀವ್ ತುರ್ತುಪರಿಸ್ಥಿತಿಯನ್ನು ಉಲ್ಲೇಖಿಸಿ ಸುದೀರ್ಘವಾಗಿ ಮಾತನಾಡುವಾಗ ಏಕೆ ಸುಮ್ಮನಿದ್ದರು. ಆಗ ದೇಶದಲ್ಲಿ ಘೋಷಿತ ತುರ್ತು ಪರಿಸ್ಥಿತಿ ಇತ್ತು. ಆದರೆ, ಇವತ್ತು ಆಘೋಷಿತ ತುರ್ತು ಪರಿಸ್ಥಿತಿ ಇದೆ. ಯಾರಿಗೂ ಮಾತನಾಡಲು ಧೈರ್ಯವಿಲ್ಲ. ಮಾತನಾಡುವ ಪರಿಸ್ಥಿತಿಯೂ ಇಲ್ಲ. ಯಡಿಯೂರಪ್ಪ ಕಟ್ಟಿದ ಬಿಜೆಪಿ ಇವತ್ತು ಉಳಿದಿಲ್ಲ. ದಿಲ್ಲಿಯಿಂದ ಬರುವ ನಿರ್ದೇಶನದಂತೆ ನಡೆದುಕೊಳ್ಳುವ ಬಿಜೆಪಿಯಿದೆ. ಬಡತನದಲ್ಲಿ ಭಾರತ ಮೊದಲನೆ ಸ್ಥಾನದಲ್ಲಿದೆ. ಡಬಲ್ ಎಂಜಿನ್ ಸರಕಾರದ ಎಂಜಿನ್ ಕರ್ನಾಟಕದಲ್ಲಿದ್ದರೆ, ಬೋಗಿಗಳು ಉತ್ತರ ಭಾಗದಲ್ಲಿವೆ.
-ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ