ರಾಜಕೀಯ ನಿವೃತ್ತಿ ಬಗ್ಗೆ ಶಾಸಕ ತನ್ವೀರ್ ಸೇಠ್ ಹೇಳಿದ್ದೇನು?
ಮಯಸೂರು: ತನ್ನ ರಾಜಕೀಯ ನಿವೃತ್ತಿ ಬಗ್ಗೆ ವರಿಷ್ಠರಿಗೆ ಪತ್ರ ಬರೆದಿದ್ದಾರೆಂಬ ವಿಚಾರಕ್ಕೆ ಸಂಬಂಧಿಸಿ ನರಸಿಂಹರಾಜ ಕ್ಷೇತ್ರದ ಹಾಲಿ ಶಾಸಕ, ಮಾಜಿ ಸಚಿವ ತನ್ವೀರ್ ಸೇಠ್ ಅವರು ಪ್ರತಿಕ್ರಿಯಿಸಿದ್ದಾರೆ.
ರಾಜಕೀಯ ನಿವೃತ್ತಿ ಬಗ್ಗೆ ಪತ್ರ ಬರೆದಿದ್ದಾರೆಂಬ ವಿಷಯ ತಿಳಿಯುತ್ತಿದ್ದಂತೆ ಇಂದು ನಗರದ ಉದಯಗಿರಿ ಬಡಾವಣೆಯಲ್ಲಿರುವ ಶಾಸಕ ತನ್ವೀರ್ ಸೇಠ್ ನಿವಾಸದ ಎದುರು ಮಂಗಳವಾರ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿ, ಇಷ್ಟು ವರ್ಷಗಳ ಕಾಲ ನಿಮ್ಮನ್ನು ನಂಬಿಕೊಂಡು ನಾವು ಬದುಕುತ್ತಿದ್ದೇವೆ., ನಮ್ಮನ್ನು ಅನಾಥರನ್ನಾಗಿ ಮಾಡಬೇಡಿ ಎಂದು ಅವಲತ್ತುಕೊಂಡರು.
ಇದನ್ನೂ ಓದಿ: ರಾಜಕೀಯ ನಿವೃತ್ತಿ ಘೋಷಣೆ ವದಂತಿ: ತನ್ವೀರ್ ಸೇಠ್ ನಿವಾಸದ ಎದುರು ಆತ್ಮಹತ್ಯೆಗೆ ಯತ್ನಿಸಿದ ಬೆಂಬಲಿಗ
''ಪತ್ರ ಬರೆದಿದ್ದು ನಿಜ''
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ತನ್ವೀರ್ ಸೇಠ್, ''ನನ್ನ ಆರೋಗ್ಯದ ವಿಚಾರ ಮುಂದಿಟ್ಟು ಕಳೆದ ಡಿಸೆಂಬರ್ನಲ್ಲೇ ಈ ನಿರ್ಧಾರವನ್ನು ಹೈಕಮಾಂಡ್ಗೆ ತಿಳಿಸಿದ್ದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದೆ. ಸೂಚನೆ ನೀಡುವ ತನಕ ಇದನ್ನು ಎಲ್ಲೂ ಬಹಿರಂಗ ಮಾಡುವುದು ಬೇಡ ಎಂದು ವರಿಷ್ಠರು ಹೇಳಿದ್ದರಿಂದ ನಾನು ಸುಮ್ಮನಿದ್ದೆ. ಈಗ ಅದು ಬಹಿರಂಗವಾಗಿದೆ. ಆದ್ದರಿಂದ ಎರಡು ಮೂರು ದಿನಗಳಲ್ಲಿ ಎಲ್ಲರೊಂದಿಗೂ ಚರ್ಚೆ ಮಾಡಿ ಅಂತಿಮ ನಿರ್ಧಾರಕ್ಕೆ ಬರುತ್ತೇನೆ'' ಎಂದು ತಿಳಿಸಿದರು.