-

[ಮಾರ್ಚ್- 13 ರಿಂದ 17] ಗೌರಿ ಲಂಕೇಶ್ ಹತ್ಯೆ ಪ್ರಕರಣದ ವಿಚಾರಣೆ ದಿನ ನಡೆದಿದ್ದೇನು?

-

ಬೆಂಗಳೂರು, ಮಾ. 20: ಮಾರ್ಚ್- 13 ರಿಂದ 17ರ ವರೆಗೆ 5 ದಿನಗಳು ನಡೆದ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ  ನ್ಯಾಯಾಲಯದ ವಿಚಾರಣೆಯ ವರದಿಯನ್ನು ಚಿಂತಕ ಶಿವ ಸುಂದರ್ ಅವರು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. 

ಶಿವ ಸುಂದರ್ ಅವರು ತಮ್ಮ ಫೇಸ್ ಬುಕ್ ನಲ್ಲಿ ಹಂಚಿಕೊಂಡಿರುವುದು ಇಲ್ಲಿದೆ...

ಆತ್ಮೀಯರೇ ,

ಗೌರಿ ಲಂಕೇಶ್ ಹತ್ಯಾ ಪ್ರಕರಣದ ಮಾರ್ಚ್ ತಿಂಗಳ ವಿಚಾರಣೆಯು ಮಾರ್ಚ್ 13 ರಿಂದ 17  ರವರೆಗೆ ನಡೆಯಿತು. ಮೂವರು ಸಾಕ್ಷಿಗಳ ಪ್ರಧಾನ ಹೇಳಿಕೆ ಮತ್ತದ ಮೇಲೆ ಆರೋಪಿ ಪರ ವಕೀಲರ ಪಾಟಿ ಸವಾಲುಗಳು ನಡೆದವು, ಹಾಗೂ  ಬಾಕಿ ಉಳಿದಿದ್ದ ಇನ್ನಿಬ್ಬರು  ಸಾಕ್ಷಿಗಳ ಹೇಳಿಕೆ ಮತ್ತು ಪಾಟಿ  ಸವಾಲುಗಳು ಮುಂದುವರಿದವು. 

- ಬಾಲರಾಜ್ - CI- SIT  ಟೀಮಿನ ಸದಸ್ಯರು.
 ಇವರು 2018 ರ ಮೇ 23 ರಂದು ಆರೋಪಿ ಸುಜಿತ್ ಕುಮಾರ್ ಉಡುಪಿಯಲ್ಲಿ ವಾಸವಿದ್ದ ಮನೆಯನ್ನು ಪಂಚರ ಎದುರಿಗೆ ಸೂಕ್ತ ಪ್ರಕ್ರಿಯೆಗಳನ್ನು ಅನುಸರಿಸಿ ತಪಾಸಣೆ ಮಾಡಿದ್ದರ ಬಗ್ಗೆ ಸಾಕ್ಷಿ ನುಡಿದರು. ಸುಜಿತ್ ಮನೆಯಲ್ಲಿ ಸುಜಿತ್  ಓಟರ್ ಕಾರ್ಡ್, ಕರ್ನಾಟಕ-ಮಹಾರಾಷ್ಟ್ರ ಭೂಪಟ , ಸನಾತನ ಸಂಸ್ಥೆಯ ಅಂಜಲಿ  ಗಾಡ್ಗಿಲ್ ಎಂಬುವರು ಬರೆದ ಲೇಖನದ ಜೆರಾಕ್ಸ್ ಪ್ರತಿ, 18  ಮೊಬೈಲ್ ಸೆಟ್ಟುಗಳು ಮತ್ತು 15 ಮೊಬೈಲ್ ಪೌಚುಗಳು, ಹಾಗೂ ಮೂರು ಮೊಬೈಲ್ ಖರೀದಿಗೆ ಸಂಬಂಧಿಸಿದ ರಸೀದಿಗಳನ್ನು ವಶಪಡಿಸಿಕೊಂಡ ಬಗ್ಗೆ ಸಾಕ್ಷಿ ನುಡಿದರು. ಅಏ ದಿನ ರಸೀದಿಯಲ್ಲಿ ಇದ್ದ ವಿಳಾಸದ ಮೇರೆಗೆ ಉಡುಪಿ ಬಸ್ಟಾಂಡಿನಲ್ಲಿದ ಐ ಮೊಬೈಲ್  ಅಂಗಡಿ ಮತ್ತು ಮಣಿಪಾಲದ  ಸಿಟಿ ಪಾಯಿಂಟ್ ಮೊಬೈಲ್  ಅಂಗಡಿಯಲ್ಲಿ ಮೊಬೈಲ್ ಖರೀದಿಯ ಮೂಲ ರಸೀದಿಯನ್ನು ವಶಪಡಿಸಿಕೊಂಡ ಬಗ್ಗೆ ಸಾಕ್ಷಿ ನುಡಿದರು.
 
ಹಾಗೆಯೇ 2018 ರ ಜುಲೈ 21ರಂದು ಹುಬ್ಬಳ್ಳಿಗೆ ಹೋಗಿ ಬಾತ್ಮೀದಾರದ ಸಹಕಾರದೊಂದಿಗೆ ಆರೋಪಿಗಳಾದ ಅಮಿತ್ ಬಡ್ಡಿ ಮತ್ತು ಗಣೇಶ್ ಮಿಸ್ಕಿನ್ ಅವರುಗಳನ್ನು ಬಂಧಿಸಿ ಸ್ಥಳೀಯ ಪೊಲೀಸ್ ಠಾಣೆಯಲಿ ಹಾಜರುಪಡಿಸಿ, ಅಲ್ಲಿಂದ ಅವರನ್ನು ಬೆಂಗಳೂರಿಗೆ ಕರೆತಂದ ಬಗ್ಗೆಯೂ ಸಾಕ್ಷ್ಯ ನುಡಿದರು. ಹಾಗೂ ಸದರಿ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಗುರುತಿಸಿದರು.

ಪಾಟಿ ಸವಾಲು:  ಆರೋಪಿ ಪರ ವಕೀಲ ಕೃಷ್ಣಮೂರ್ತಿಯವರು ಸಾಕ್ಷಿಯು ತಪಾಸಣೆ  ಮಾಡುವಾಗ, ದಾಖಲು ಮಾಡುವಾಗ ಸರಿಯಾದ ಪ್ರಕ್ರಿಯೆಗಳನ್ನು ಅನುಸರಿಸದ ಬಗ್ಗೆ, ತಾವು ಸಹಿ ಮಾಡಿ ಪಡೆದುಕೊಂಡ ನೋಟೀಸಿನಲಿ ಕೈಬರಹದಿಂದ ಕೆಲವು ತಿದ್ದುಪಡಿ ಮಾಡಿರುವ ಬಗ್ಗೆ, ಹಾಗೂ ಸಾಕ್ಷಿಯ ಮೇಲೆ ಬೇರೆ ಪ್ರಕರಣದಲ್ಲಿ ಆರೋಪವಿರುವ ಬಗ್ಗೆ , ಹಾಗೂ ಸಾಮಾನ್ಯವಾಗಿ ತಮ್ಮ ವ್ಯಾಪ್ತಿಯಲ್ಲಿ ಇಲ್ಲದ ಪ್ರಕರಣಗಳಲ್ಲಿ ತಲೆದೂರಿಸುತ್ತಾರೆ ಎಂಬ ಆರೋಪದ ಬಗ್ಗೆ ಪಾಟಿ ಸವಾಲು ಮಾಡಿದರು. ಹಾಗೂ ಅವರು ನುಡಿದ ಸಾಕ್ಷಿಗಳೆಲ್ಲವೂ ಸುಳ್ಳು ಎಂದು ಸವಾಲು ಹಾಕಿದರು. ಸಾಕ್ಷಿಯು ಅಲ್ಲಲ್ಲಿ ಕೈಬರಹದ ತಿದ್ದುಪಡಿ ಮಾಡಿರುವ ಬಗ್ಗೆ, ಹಾಗೂ ಪಡೆದುಕೊಂಡ ನೋಟೀಸಿನಲ್ಲಿ ಕೆಲವು ನಿರ್ದಿಷ್ಟ ಸೂಚನೆಗಳು ಇಲ್ಲದಿರುವ ಬಗ್ಗೆ ಒಪ್ಪಿಕೊಂಡರೂ ಉಳಿದ ಎಲ್ಲಾ ಆರೋಪಗಳನ್ನು ನಿರಾಕರಿಸಿದರು.

- ಮುಕುಂದ ವಿ. - ಬಿಬಿಎಂಪಿ ಯಲ್ಲಿ ಎಸ್‌ಡಿಎ 

ಇವರು 2018  ರ ಜೂನ್ 7  ರಂದು ಪೊಲೀಸರ ಕೋರಿಕೆ ಮೇರೆಗೆ ಮೇಲಧಿಕಾರಿಗಳು ಆದೇಶಿಸಿದ್ದರಿಂದ ತನಿಖೆಯಲ್ಲಿ ಪಂಚರಾಗಿ ಸಹಕರಿಸಿದ ಬಗ್ಗೆ ಸಾಕ್ಷಿ ನುಡಿದರು. ಜೂನ್ 7 ರಂದು ಸಿಐಡಿ ಕಚೇರಿಯಲ್ಲಿ ಆರೋಪಿ ಸುಜಿತ್ ಕುಮಾರ್ ಅವರ ಧ್ವನಿ ಮಾದರಿ ಮತ್ತು ಆರೋಪಿ ಸುಜಿತ್ ಕುಮಾರ್ ಮತ್ತು ಮತ್ತೊಬ್ಬ ಆರೋಪಿ ಮನೋಹರ್ ಅವರ ಕೈಬರಹದ ಮಾದರಿಗಳನ್ನು ಸೂಕ್ತ ಪ್ರಕ್ರಿಯೆಗಳನ್ನು ಅನುಸರಿಸಿ ಪೊಲೀಸರು ಪಡೆದುಕೊಂಡ ಬಗ್ಗೆ ಸಾಕ್ಷಿ ನುಡಿದರು. ಅದಕ್ಕೆ ಸಬಂಧಿಸಿದಂತೆ ತಾವು ಧೃಢಪಡಿಸಿ ನೀಡಿದ ಹೇಳಿಕೆ ಮತ್ತು ಸಹಿಗಳನ್ನು ಗುರುತಿಸಿದರು. ಮತ್ತು ವಿಡ್ಯೀ ಕಾನ್ಫರೆನ್ಸಿನ ಮೂಲಕ ಆರೋಪಿ ಸುಜಿತ್ ಮತ್ತು ಮನೋಹರ್ ಅವರನ್ನು ಗುರುತಿಸಿದರು.

ಪಾಟಿ ಸವಾಲು: ಆರೋಪಿ ಪರ ವಕೀಲರು ಸಾಕ್ಷಿಯು ಪಂಚರಾಗಿ ಸಹಕರಿಸಲು ಅನುಸರಿಸಬೇಕಿದ್ದ ಪ್ರಕ್ರಿಯೆಗಳಲ್ಲಿ ಇರುವ ಲೋಪಗಳ ಬಗ್ಗೆ ಪ್ರಶ್ನಿಸಿದರು. ಹಾಗೂ ಸುಳ್ಳು ಸಾಕ್ಷ್ಯ ಹೇಳುತ್ತಿರುವುದಾಗಿ ಸವಾಲು ಮಾಡಿದರು. ಸಾಕ್ಷಿಯು ಅದನ್ನು  ನಿರಾಕರಿಸಿದರು. ಧ್ವನಿ ಮುದ್ರಿಕೆಗಳ ಕಾಪಿಯನ್ನು ತಮಗೆ ಇನ್ನೂ ಒದಗಿಸದೇ ಇರುವುದರಿಂದ ಸಾಕ್ಷಿಯು  ಅದನ್ನು ಧ್ರುಡೀಕರಿಸುವ ಬಗ್ಗೆ ಆರೋಪಿ ಪರ ವಕೀಲರು ತಕರಾರು ಮಾಡಿದರು. ಆದರೆ ಈಗಾಗಲೇ  ಧ್ವನಿ ಮುದ್ರಿತ ಕಾಪಿಗಳನ್ನು ಡಿಫ಼ೆನ್ಸ್ ವಕೀಲರಿಗೆ ನೀಡದಿದ್ದಲ್ಲಿ ಅದರೊಳಗಿನ ಕಂಟೆಂಟ್ ಅನ್ನು ನ್ಯಾಯಾಲಯ ಮಾನ್ಯ ಮಾಡುವುದಿಲ್ಲ ಎಂದು ನೀಡಿರುವ ಆದೇಶವನ್ನು  ನ್ಯಾಯಾಲಯದ ಗಮನಕ್ಕೆ ತರಲಾಯಿತು.

- ಪ್ರವೀಣ್ ಕುಮಾರ್- ಕಡಬಗೆರೆ ಗ್ರಾಮ ಪಂಚಾಯತ್ ಸೆಕ್ರೆಟರಿ

ಇವರು ಪೊಲೀಸರ ಕೋರಿಕೆ ಮೇರೆಗೆ ಕಡಬಗರೆ ಗ್ರಾಮ ಪಂಚಾಯತಿಯ ಪಿಡಿಒ ಅವರಿದ ನಿರ್ದೇಶಿತನಾಗಿ ಪೊಲೀಸರ ತನಿಖೆಗೆ ಜೂನ್ 7 ರಂದು ಪಂಚರಾಗಿ ಸಹಕರಿಸಿದ ಬಗ್ಗೆ ಸಾಕ್ಷ್ಯ ನುಡಿದರು. ಪೊಲೀಸರೊಂದಿಗೆ ಸೀಗೆ ಹಳ್ಳಿ ಗೇಟ್ ಬಳಿ ಇರುವ ಸುರೇಶ್ ಎಂಬುವರ ಮನೆಯ ಮೊದಲ ಮಹಡಿಯಲ್ಲಿ ಆರೋಪಿ ತಾನು ವಾಸವಿದ್ದುದಾಗಿ ಪೊಲೀಸರು ಕರೆದುಕೊಂಡು ಬಂದಿದ್ದ ಆರೋಪಿ ಅಮೋಲ್ ಕಾಳೆ ಹೇಳಿದ್ದಾಗಿ ಸಾಕ್ಷಿ ನುಡಿದರು. ಆದರೆ ಮನೆಯ ತಪಾಸನೆಯ ಪಂಚನಾಮೆಗೆ ಸಹಿ ಹಾಕಲು ಆರೊಫಿ ನಿರಾಕರಿಸಿದ ಬಗೆಗೂ ಹೇಳಿಕೆ  ನೀಡಿದರು . ಆ ನಂತರ  ಸಾಯಿ ಲಕ್ಷ್ಮಿ ಲೇ ಔಟ್ ಬಳಿ ಇದ್ದ ಅಂಗಡಿ ಮಳಿಗೆಯಲ್ಲಿ ಒಂದೆರೆಡು ದಿನ ವಾಸವಿದ ಬಗ್ಗೆ ಆರೋಪಿ ಅಮೋಲ್ ಕಾಳೆ ಹೇಳಿದರೂ ನಂತರ ನಡೆದ ಅಂಗಡಿಯ ಪಂಚನಾಮೆಗೆ ಸಹಿ ಹಾಕಲು ಒಪ್ಪಲಿಲ್ಲ. ಆ ಪ್ರತಿಯೊಂದು ಕಡೆಯಲ್ಲೂ ಪೊಲಿಸರು ತಮ್ಮೆಲ್ಲರನ್ನು ಒಟ್ಟಾಗಿಸಿ ಫೋಟೊ ತೆಗೆದ ಬಗ್ಗೆ ಹೇಳಿದರು  ಮತ್ತು ಅದನ್ನು ಗುರುತಿಸಿದರು. ವಿಡಿಯೋ ಕಾನ್ಫರೆನ್ಸ್ ಮೂಲಕ ಅಮೋಲ್ ಕಾಳೆಯನ್ನು ಗುರುತಿಸಿದರು. ಖುದ್ದಾಗಿ  ತೋರಿಸಿದರೆ ಸುರೇಶ್  ಅವರನ್ನು ಗುರುತಿಸುವುದಾಗಿ ಹೇಳಿದರು. ಪ್ರಾಸಿಕ್ಯುಷನ್ ವಕೀಲರು ಎಲ್ಲಾ ಆರೋಪಿಗಳನ್ನು ನ್ಯಾಯಾಲಯಕ್ಕೆ ಖುದ್ದು ಹಾಜರು ಮಾದುವಂತೆ ಆದೇಶಿಸಲು ಕೋರಿದರು. ಮರುದಿನ ಖುದ್ದು ಹಾಜರಾದ ಆರೋಪಿಗಳ ಹತ್ತಿರ ಹೋಗಿ ಸಾಕ್ಷಿಯು  ಆರೋಪಿ ಕುಮಾರ್ ಅವರನ್ನು ಗುರುತಿಸಿದರು. ಸಂಬಂಧಪಟ್ಟ  ತಾನು ಸುರೇಶ್ ಎಂದು ಒಪ್ಪಿಕೊಂಡರು.

ಪಾಟಿ ಸವಾಲು : ಆರೋಪಿ ಪರ ವಕೀಲರು ಸರ್ಕಾರಿ ಸಿಬ್ಬಂದಿಯಾಗಿ ಪೊಲಿಸ್ ಪಂಚನಾಮೆಗೆ  ಸಹಕರಿಸುವ ಮುನ್ನ  ಪಾಲಿಸ ಬೇಕಾದ ಪ್ರಕ್ರಿಯೆಗಳಲ್ಲಿ ಇರುವ ಲೋಪಗಳ ಬಗ್ಗೆ, ಹಾಗೂ ಅದರಲ್ಲಿ  ಇರುವ ಕೈಬರಹ ತಿದ್ದುಪಡಿಗಳ  ಬಗ್ಗೆ ಪ್ರಶ್ನಿಸಿದರು. ಸುಳ್ಳು ಸಾಕ್ಷ್ಯ ನುಡಿಯುತ್ತಿದೀರಿ ಎಂದು ಆರೋಪಿಸಿದರು. ಅವೆಲ್ಲವನ್ನು ಸಾಕ್ಷಿಯು ನಿರಾಕರಿಸಿದರು.

- ರವಿಕುಮಾರ್- ಡಿವಿಆರ್ ಪಂಚನಾಮೆಯ ಸಾಕ್ಷಿ

ಇವರು ಎಮ್‌ಎನ್‌ಸಿ ಗಳಿಗೆ ಆಹಾರ ಪೂರೈಕೆ ಮಾಡುವ ಬಿಸಿನೆಸ್ ನಲ್ಲಿದ್ದು 2017 ರ ಸೆಪ್ಟೆಬರ್ 5ರ ಮಧ್ಯರಾತ್ರಿ ಟೀ ಕುಡಿಯಲು ರಾಜರಾಜೇಶ್ವರಿ ನಗರದ ಬಳಿ ನಿಂತಿದ್ದಾಗ ಪೊಲೀಸರ ಕೋರಿಕೆ ಮೇರೆಗೆ ಅವರು ವಶಪಡಿಸಿಕೊಂಡಿದ್ದ ಸಿಸಿಟಿವಿಗಳ ಡಿವಿರ್ ಗಳ ಪಂಚನಾಮೆಗೆ ಸಾಕ್ಷಿಯಾದ ಬಗ್ಗೆ ಹೇಳಿದರು.
 
ಪಾಟಿ ಸವಾಲು:  ಮುಂದುವರಿದ ಇವರ ಪಾಟಿ ಸವಾಲಿನಲ್ಲಿ ಆರೋಪಿ ಪರ ವಕೀಲರು ಮುಖ್ಯವಾಗಿ ಪ್ರದರ್ಶಿತವಾದ ಡಿವಿಆರ್ ರೆಕಾರ್ಡ್ ನಲ್ಲಿ ಸೆಪ್ಟೆಂಬರ್ 5 ರ ರಾತ್ರಿ 7-7.30  ರವರೆಗಿನ ರೆಕಾರ್ಡಿಂಗ್ ನೋಡಿದಾಗ ಸಮಯ 7.19ಕ್ಕೆ ಗೌರಿಯವರು ಗೇಟನ್ನು ತೆರೆಯುತ್ತಿರುವ ದ್ರುಶ್ಯವಿದೆ. ಆಗ ಅವರ ಮೇಲೆ ದಾಳಿ ನಡೆದಿಲ್ಲ ಅಲ್ಲವೇ ಎಂದು ಕೇಳಿದಾಗ ಹೌದು ಎಂದು ನುಡಿದರು. ಹಾಗೆಯೇ ತಮ್ಮ ವ್ಯವಹಾರಕ್ಕೆ ಪೊಲೀಸರಿಂದ ಸಹಾಯ ಬೇಕಾಗುತ್ತದೆ ಎಂಬ ಕಾರಣಕ್ಕೆ ಸುಳ್ಳು ಸಾಕ್ಷಿ ನುಡಿಯುತ್ತಿದೀರ ಎಂಬ ಆರೋಪವನ್ನು ನಿರಾಕರಿಸಿದರು.

- ಪ್ರಕಾಶ್- ಎಸಿಪಿ- 2017 ಸೆಪ್ಟೆಂಬರ್ 5-7 ರವರೆಗೆ  ಪ್ರಕರಣದ ತನಿಖಾಧಿಕಾರಿಯಾಗಿದ್ದವರು. 
ಮುಂದುವರಿದ ಈ ಸಾಕ್ಷಿಯ ವಿಚಾರಣೆಯಲ್ಲಿ ಸಾಕ್ಷಿಯು ತಾವು ವಶಪಡಿಸಿಕೊಂಡ ಡಿವಿಆರ್ ಇಂದ ಪ್ರದರ್ಶಿಸಲಾದ ದೃಶ್ಯ ದಲ್ಲಿ ಗೌರಿ ಲಂಕೇಶ್ ಗೇಟನ್ನು ತೆರೆಯುತ್ತಿರುವುದು, ಆಗ ಕಾರಿನ ಒಂದು ಸಿಂಗಲ್ ಲೈಟ್ ಆನ್ ಆಗಿರುವುದು ಮತ್ತು ಅಪರಿಚಿತನೊಬ್ಬ ಬಂದು  ಗೌರಿ ಲಂಕೇಶ್ ಗೆ ಶೂಟ್ ಮಾಡಿ ಹೋಗುತ್ತಿರುವುದು ಕಂಡುಬರುತ್ತದೆಂದು ಗುರುತಿಸಿದರು. ಮತ್ತು ಈ ಪುರಾವೆಯನ್ನು ದಾಖಲಿಸಲಾಯಿತು....

ಪಾಟಿ ಸವಾಲು: ಆರೋಪಿ ಪರ ವಕೀಲರು ಪ್ರಧಾನವಾಗಿ:

ಗೌರಿ ಲಂಕೇಶರ ಸಾವನ್ನು ಖಚಿತ ಪಡಿಸಿಕೊಳ್ಳದೆ ದೇಹವನ್ನು ಶವಾಗಾರಕ್ಕೆ ಕಳಿಸಿದ ಬಗ್ಗೆ,

ಪೊಲೀಸರ ವರದಿಯಲ್ಲಿ ನಮೂದಾಗಿದ್ದ ಸಮಯದಂತೆ ಸಿಸಿಟಿವಿ ಡಿವಿಆರ್ ನಲ್ಲಿ ಇಲ್ಲದಿರುವ ಬಗ್ಗೆ,

ಸೂಕ್ತ ಪ್ರಕ್ರಿಯೆಗಳನ್ನು ಅನುಸರಿಸದ ಬಗ್ಗೆ ಪ್ರಶ್ನಿಸಿದರು. 

ಸಾಕ್ಷಿಯು ತಾನು2017 ರ ಸೆಪ್ಟೆಂಬರ್ 5 ರ ರಾತ್ರಿಯಿಂದ 7  ರ ಬೆಳಿಗ್ಗೆಯವರೆಗೆ  ಕೇವಲ ತಾತ್ಕಾಲಿಕ ತನಿಖಾಧಿಕಾರಿಯಾಗಿದ್ದರಿಂದ ನಂತರದ  ವಿವರಗಳನ್ನು ಗಮನಿಸದ ಬಗ್ಗೆ , ಮತ್ತು ಪೊಲೀಸ್ ನಿಯಮಾವಳಿಗಳ ಪ್ರಕಾರ ನಡೆದುಕೋಂಡಿರುವ ಬಗ್ಗೆ ಸಾಕ್ಷಿ ನುಡಿದರು. ಸಾಮಾನ್ಯವಾಗಿ ಡಿವಿಅರ್ ನಲ್ಲಿ ನಮೂದಾಗಿರುವ ಸಮಯಕ್ಕೂ ನೈಜ ಸಮಯಕ್ಕೂ ವ್ಯತ್ಯಾಸವಿರುವ ಬಗ್ಗೆಯೂ ಹೇಳಿದರು. ಮತ್ತು ಗೌರಿಯವರ ಸಾವನ್ನು ಖಚಿತಪಡಿಸಿಕೊಳ್ಳದೆ ಶವಾಗಾರಕ್ಕೆ ಕಳಿಸಲಾಯಿತೆಂಬ ಮತ್ತು ಸುಳ್ಳು ಸಾಕ್ಷಿ ನುಡಿಯುತ್ತಿದ್ದೇನೆ ಎಂಬ ಆರೋಪವನ್ನು ನಿರಾಕರಿಸಿದರು.

ಈ ಸಾಕ್ಷಿಯ ಪಾಟಿ ಸವಾಲು ಮುಂದುವರಿಯಲಿದೆ...
 
ಮುಂದಿನ ವಿಚಾರಣೆ 2023 ರ ಮೇ8 ಕ್ಕೆ ನಿಗದಿಯಾಗಿದೆ.
 
ಈ ಮಧ್ಯೆ  ಗೌರಿಯವರು ಶೂಟ್ ಆದ ದೃಶ್ಯಾವಳಿಯನ್ನು ಕಾರಾಗೃಹದಲ್ಲಿರುವ ಆರೋಪಿಗಳಿಗೆ ತೋರಿಸಿ ಅವರೊಂದಿಗೆ ಸಮಾಲೋಚನೆ ಮಾಡಲು ಆರೋಪಿ ಪರ ವಕೀಲರು ಅವಕಾಶ ಕೋರಿದರು. ನ್ಯಾಯಾಲಯವು ಕೆಲವು ಶರತ್ತುಗಳೊಂದಿಗೆ ಅವರಿಗೆ ಅವಕಾಶ ನೀಡಿತು.
 
ಈಗಾಗಲೇ  ತಿಳಿಸಿದಂತೆ ಪೊಲೀಸ್ ಅಧಿಕಾರಿಗಳ ವಿಶೇಷ ಕೋರಿಕೆಯ ಮೇರೆಗೆ ಕಳೆದ ತಿಂಗಳಿಂದ ಗೌರಿ ಲಂಕೇಶ್ ಹತ್ಯಾ ವಿಚಾರಣೆಯು ಇನ್- ಕ್ಯಾಮೆರಾ - ಗೋಪ್ಯವಾಗಿ ನಡೆಯುತ್ತಿದೆ. ಅಂದರೆ ವಿಚಾರಣೆ ನಡೆಯುವಾಗ ಸಾರ್ವಜನಿಕರಿಗೆ ಮತ್ತು ಪತ್ರಕರ್ತರಿಗೆ ಪ್ರವೇಶವಿರುವುದಿಲ್ಲ.

ಈ ವರದಿಯನ್ನು, ಕೋರ್ಟ್ ವೆಬ್ ಸೈಟಿನಲ್ಲಿರುವ ಸಾಕ್ಷಿಗಳ deposition ಗಳನ್ನೂ ಮತ್ತು ಆರೋಪಿ ಪರ ವಕೀಲರಾದ ಕೃಷ್ಣಮೂರ್ತಿ ಪಿ. ಮತ್ತು ಸರ್ಕಾರಿ ವಕೀಲರಾದ ಬಾಲನ್ ಅವರು ಕೊಟ್ಟ ಮಾಹಿತಿಗಳನ್ನು ಆಧರಿಸಿ ಸಿದ್ಧಪಡಿಸಲಾಗಿದೆ.

- ಶಿವಸುಂದರ್

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top